ಬ್ಯಾಡಗಿ:
ತಾಲೂಕಿನ ಶಿಡೇನೂರ ಗ್ರಾಮದ ಈಶ್ವರ ದೇವಸ್ಥಾನವನ್ನು ನೆಲಸಮಗೊಳಿಸಿ 2 ವರ್ಷ ಗತಿಸಿದರೂ ಪುರಾತತ್ವ ಇಲಾಖೆ ಪುನರ್ ನಿರ್ಮಾಣಕ್ಕೆ ಮುಂದಾಗದಿರುವುದನ್ನು ಖಂಡಿಸಿ ಗ್ರಾಮದ ಮುಖಂಡರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಅಧಿಕಾರಿಗಳು ತಂಡವು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಸಂಸ್ಕತಿಯ ಪ್ರತೀಕ:
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ದೇವಸ್ಥಾನಗಳು ದೇಶದ ಸಂಸ್ಕøತಿಯ ಪ್ರತೀಕವಾಗಿದ್ದು ಯಾವುದೇ ಕಾರಣಕ್ಕೂ ಅವುಗಳು ನಶಿಸಿದಂತೆ ನೋಡಿಕೊಳ್ಳಲಾಗುವುದು, ಅದಕ್ಕ ಎಷ್ಟೇ ಹಣ ವ್ಯಯವಾದರೂ ಸರಿ ಅಗತ್ಯವಿದ್ದ ಅನುದಾನವನ್ನು ಒದಗಿಸುವ ಮೂಲಕ ಪುನರ್ ನಿರ್ಮಾಣಕ್ಕೆ ಮುಂದಾಗುತ್ತೇನೆ ಯಾವುದೇ ಕಾರಣಕ್ಕೂ ಶಿಡೇನೂರ ಸೇರಿದಂತೆ ಈ ಭಾಗದ ಗ್ರಾಮಸ್ಥರು ಇದಕ್ಕಾಗಿ ಬೀದಿಗಿಳಿಯುವ ಅವಶ್ಯಕತೆಯಿಲ್ಲ ಎಂದು ಅಭಯ ನೀಡಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಕಾಮಗಾರಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹ ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಕ್ಷೇತ್ರದಲ್ಲಿ ಒಂದು ಚಿಕ್ಕ ದೇವಸ್ಥಾನವಿರಲಿ ಅದರ ಜೀರ್ಣೋದ್ಧಾರಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ದೇವಸ್ಥಾನದಲ್ಲಿ ಎಲ್ಲ ರೀತಿಯ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದರು.
ಎಚ್ಚರಿಸಿದ್ದಕ್ಕೆ ಅಭಿನಂದನೆ:
ಕ್ಷೇತ್ರಕ್ಕೆ ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದರಿಂದ ಕೆಲ ಮಾಹಿತಿಗಳು ನನ್ನ ಗಮನಕ್ಕೆ ಬಂದಿಲ್ಲ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಅಲ್ಲದೇ ಹಿಂದಿನ ಅವಧಿಯಲ್ಲಿ ವಿಳಂಬವಾದ ಕಾಮಗಾರಿಗಳನ್ನೂ ಕೂಡ ಪಕ್ಷಾತೀತವಾಗಿ ನನ್ನ ಅವಧಿಯಲ್ಲಿ ಮುಕ್ತಾಯಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ಸ್ಥಗಿತಗೊಂಡ ಈಶ್ವರ ದೇವಸ್ಥಾನ ಕಾಮಗಾರಿ ಬಗ್ಗೆ ಎಚ್ಚರಿಸಿದ್ದಕ್ಕೆ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ..
ಪ್ರವಾಸದೋಮ್ಯದಿಂದಲಾದರೂ ಮಾಡಿಸುವೆ: ಒಂದು ವೇಳೆ ಪುರಾತತ್ವ ಇಲಾಖೆ ಕಾಮಗಾರಿ ಆರಂಭಿಸಲು ಮೀನ ಮೇಷ ಮಾಡಿದ್ದೇ ಆದಲ್ಲಿ ಪ್ರವಾಸೋದ್ಯಮ ಇಲಾಖೆಯ ವಿಶೇಷ ಅನುದಾನದಿಂದಲಾದರೂ ಈಶ್ವರ ದೇವಸ್ಥಾನದ ಪುನರ್ ನಿಮಾರ್ಣಕ್ಕೆ ಮುಂದಾಗುವುದಾಗಿ ತಿಳಿಸಿದ ಅವರು, ಕೂಡಲೇ ಅಗತ್ಯವಿರುವ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಸ್ಥಳದಲ್ಲೇ ಇದ್ದ ತಹಶೀಲ್ದಾರ ಜಯಣ್ಣ ತಳವಾರ ಅವರಿಗೆ ಸೂಚನೆ ನೀಡಿದರು.
ದೂರವಾಣಿ ಮೂಲಕ ಆಯುಕ್ತರಿಗೆ ತರಾಟೆ: ದೂರವಾಣಿ ಮೂಲಕ ಆಯುಕ್ತರನ್ನು ಸಂಪರ್ಕಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು, ಇಲ್ಲಿ ದೇವಸ್ಥಾನವೊಂದನ್ನು ನೆಲಸಮಗೊಳಿಸಿದ್ದೇವೆ ಅದರ ಪುನರ್ ನಿರ್ಮಾಣಕ್ಕೆ ನಿಮಗೆ ಇರುವ ತೊಂದರೆಗಳಾದರೂ ಏನು..? ಕೇವಲ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು 2 ವರ್ಷಗಳ ಕಾಲಾವಕಾಶ ಬೇಕಾಯಿತೇ..? ಹಾಗಿದ್ದರೇ ದೇವಸ್ಥಾನ ನಿರ್ಮಾಣಕ್ಕೆ ದಶಕಗಳೇ ಬೇಕಾಗಬಹುದು ಎಂದು ತರಾಟೆಗೆ ತೆಗೆದುಕೊಂಡ ಅವರು, ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗ್ರಾಮಸ್ಥರು ಮನವಿಯೊಂದನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷ ಪರಮೇಶಗೌಡ ತೆವರಿ ಸೇರಿದಂತೆ ಗ್ರಾಮದ ಮುಖಂಡರಾದ ಕಿರಣ ಗಡಿಗೋಳ, ತಿಮ್ಮಣ್ಣ ವಡ್ಡರ, ಮಹದೇವಪ್ಪ ವಡೆಯನಪುರ, ಚನ್ನಬಸಪ್ಪ ದ್ಯಾಮನಗೌಡ್ರ, ನಾಗಪ್ಪ ತೆವರಿ, ಈರನಗೌಡ ಮಲ್ಲಾಡದ, ಬಸವರಾಜ ಹುಲ್ಲತ್ತಿ, ಈರಪ್ಪ ಮಟ್ಟೇರ, ಕೆಂಚಪ್ಪ ಹಲಗಣ್ಣನವರ, ಶಿವನಗೌಡ ತೆವರಿ, ಸಿದ್ದನಗೌಡ ಬಿದರಕಟ್ಟಿ, ವಿನಯ ತೆವರಿ, ಮಂಜುನಾಥ ಬನ್ನಿಹಟ್ಟಿ, ಕಂದಾಯಾಧಿಕಾರಿ ಎನ್.ಎಂ.ಹುಚ್ಚೇರ ರಾಮಣ್ಣ ಉಕ್ಕುಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
