ಉಡುಪಿ
ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘ ಅವರು ಜು. 26ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.ಶ್ರೀಲಂಕಾ ಪ್ರಧಾನಿ ಶುಕ್ರವಾರ ನಡೆಯಲಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸುವರು.
ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ ಹಾಗೂ ಶಿಷ್ಟಚಾರದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಹಾಗೂ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಬೆಳಗ್ಗೆ 9 ಗಂಟೆ ತನಕ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ವಿರಲಿದೆ. ಬಳಿಕ ಶ್ರೀಲಂಕಾ ಪ್ರಧಾನಿ ಯವರ ನವಚಂಡಿಯಾಗದ ಪೂರ್ಣಾಹುತಿ ತನಕ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಕೊಲ್ಲೂರಿನ ಎಲ್ಲ ಅಂಗಡಿ ಮುಂಗಟ್ಟುಗಳು, ವಸತಿ ಸಮುಚ್ಚಯ ಸಂಪೂರ್ಣ ಬಂದ್ ಮಾಡಲಾಗುವುದು. ವಾಹನಸಂಚಾರ ಸಹಿತ ಪಾದಚಾರಿಗಳ ಸಂಚಾರಕ್ಕೆ ಈ ಅವಧಿಯಲ್ಲಿ ನಿರ್ಬಂಧವಿರಲಿದೆ.
ರಾಜ್ಯ, ಕೇಂದ್ರ ಸ್ತರದಿಂದ ಈಗಾಗಲೇ ಆಗಮಿಸಿರುವ ವಿಶೇಷ ಪೊಲೀಸ್ ತಂಡಗಳು ಕೊಲ್ಲೂರು ಸಹಿತ ಆಸುಪಾಸಿನ ಗ್ರಾಮಗಳ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿವೆ.ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿನ ಅರೆಶಿರೂರು ಹೆಲಿಪ್ಯಾಡಿಗೆ ಆಗಮಿಸಲಿರುವ ಶ್ರೀಲಂಕಾ ಪ್ರಧಾನಿಯ ಭದ್ರತೆಯ ನಿಟ್ಟಿನಲ್ಲಿ ಹೆಲಿಪ್ಯಾಡ್ ಸಹಿತ ಕೊಲ್ಲೂರಿಗೆ ವಾಹನದಲ್ಲಿ ಸಾಗುವ ದಾರಿಯುದ್ದಕ್ಕೂ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
