ಬಳ್ಳಾರಿ
ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಉಂಟಾಗಿರುವ ಈ ಸಂದರ್ಭದಲ್ಲಿ ಸ್ವಯಂ ಸೇವಕರು ಇದುವರೆಗೆ ಸಲ್ಲಿಸಿರುವ ಸೇವಾ ಕಾರ್ಯ ಅತ್ಯಂತ ಅಮೋಘವಾದುದು ಎಂದು ಶ್ಲಾಘನೆ ವ್ಯಕ್ತಪಡಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾ.ಅರ್ಜುನ್ ಮಲ್ಲೂರ್ ಅವರು ಇದೇ ರೀತಿಯ ಕಾರ್ಯವನ್ನು ಮೇ 3ರವರೆಗೆ ಮುಂದುವರಿಸಿಕೊಂಡು ಹೋಗಬೇಕು.
ಜಿಲ್ಲಾಡಳಿತ ಆರಂಭಿಸಿರುವ ತಾತ್ಕಾಲಿಕ ನಿರಾಶ್ರೀತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರೀತರಿಗೆ ಕೌನ್ಸೆಲಿಂಗ್ ಮಾಡುವುದರ ಮೂಲಕ ಅವರ ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರೊಂದಿಗೆ ಎನ್ಜಿಒಗಳು ಹಾಗೂ ಸ್ವಯಂ ಸೇವಕರು ಹಾಗೂ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸ್ನಲ್ಲಿ ಅವರು ಮಾತನಾಡಿದರು.
ಆಹಾರ ಪೊಟ್ಟಣಗಳ ವಿತರಣೆ, ಪಡಿತರ ಕಿಟ್, ಹಾಲು ವಿತರಣೆ ಸೇರಿದಂತೆ ಇನ್ನೀತರ ಅಗತ್ಯ ವಸ್ತುಗಳ ತಲುಪಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರು ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ನಿರ್ವಹಿಸಿದ ಕಾರ್ಯ ಅತ್ಯಂತ ಶ್ಲಾಘನೀಯವಾದುದು ಎಂದು ಹೇಳಿದ ನ್ಯಾ.ಅರ್ಜುನ್ ಮಲ್ಲೂರ್ ಅವರು ಎಲ್ಲರು ಒಂದುಗೂಡಿ ಈ ಬಡವರ, ಕೂಲಿಕಾರ್ಮಿಕರ ಮತ್ತು ಅಸಹಾಯಕರ ನೆರವಿಗೆ ನಿಲ್ಲೋಣ, ಸ್ಥಳೀಯ ತಾಲೂಕು ಆಡಳಿತ ಹಾಗೂ ಸ್ಥಳೀಯ ನ್ಯಾಯಾಧೀಶರ ಸಹಕಾರವೂ ಪಡೆದುಕೊಂಡು ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಎನ್ಜಿಒ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಈ ಲಾಕ್ಡೌನ್ ಸಂದರ್ಭದಲ್ಲಿ ಎನ್ಜಿಒ ಪ್ರತಿನಿಧಿಗಳು, ರೇಡ್ಕ್ರಾಸ್ ಸ್ವಯಂ ಸೇವಕರು, ಕರೋನಾ ವಾರಿಯರ್ಸ್ಗಳು ಸಲ್ಲಿಸುತ್ತಿರುವ ಸೇವಾ ಕಾರ್ಯ ಹಾಗೂ ಜಿಲ್ಲಾಡಳಿತಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.ತಮ್ಮ ಸೇವಾ ಕಾರ್ಯ ಶ್ಲಾಘನೀಯ ವಾಗಿದ್ದು, ಇದೇ ರೀತಿ ಮುಂದುವರಿಯಲಿ ಮತ್ತು ಜಿಲ್ಲಾಡಳಿತದೊಂದಿಗೆ ಇದೇ ರೀತಿ ತಮ್ಮ ಸಂಬಂಧವಿರಲಿ ಎಂದರು.
ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯಲ್ಲಿ ದಾನಿಗಳು 84 ಸಾವಿರ ಆಹಾರ ಪೊಟ್ಟಣಗಳು ಹಾಗೂ 40 ಸಾವಿರ ರೇಶನ್ ಕಿಟ್ಗಳನ್ನು ದಾನ ಮಾಡುವುದರ ಮೂಲಕ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಜಿಲ್ಲಾಡಳಿತದ ವತಿಯಿಂದ 20 ಸಾವಿರ ಆಹಾರ ಪೊಟ್ಟಣಗಳು, 84 ಸಾವಿರ ದಾನಿಗಳ ಮೂಲಕ ನೀಡಿದ ಆಹಾರ ಪೊಟ್ಟಣಗಳು ಹಾಗೂ 40 ಸಾವಿರ ರೇಶನ್ ಕಿಟ್ಗಳನ್ನು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಇನ್ನೂ ಅಪಾರ ಪ್ರಮಾಣದಲ್ಲಿ ವಿತರಿಸಲಾಗುತ್ತಿದೆ ಎಂದರು.
ವೈದ್ಯಕೀಯ ತುರ್ತುಪ್ರಕರಣಗಳಿದ್ದಲ್ಲಿ ಮಾತ್ರ ತೆರಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು ಜನ್ಧನ್ ಹಣ ಪಡೆಯಲು ಜನರು ಬ್ಯಾಂಕ್ಗಳ ಮುಂದೆ ನಿಲ್ಲುತ್ತಿದ್ದು, ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳಿವೆ; ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ಬ್ಯಾಂಕ್ ಶಾಖೆಗೆ ಇಬ್ಬರು ಸ್ವಯಂಸೇವಕರನ್ನು ಸಾಮಾಜಿಕ ಅಂತರ ಪರಿಪಾಲಿಸುವುದಕ್ಕೆ ನಿಗಾವಹಿಸುವುದಕ್ಕಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಶಕೀಬ್ ಅವರು ಮಾತನಾಡಿ, ಜಿಲ್ಲೆಯಲ್ಲಿ 386 ಎನ್ಜಿಒಗಳು, 60 ರೆಡ್ಕ್ರಾಸ್ ಸ್ವಯಂಸೇವಕರು ಮತ್ತು 280 ಕೊರೊನಾ ಸೈನಿಕರ ಮೂಲಕ ಪ್ರತಿನಿತ್ಯ, ಆಹಾರ ಪೊಟ್ಟಣಗಳ ವಿತರಣೆ, ರೇಶನ್ಕಿಟ್ ವಿತರಣೆ, ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಿಕೆ ಕಾರ್ಯ, ವಿಮ್ಸ್ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಮಾಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಸೇರಿದಂತೆ ಎನ್ಜಿಒ ಪ್ರತಿನಿಧಿಗಳು ಇನ್ನೀತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








