ಪಾಲಿಕೆಯಿಂದ ಕಾರ್ಯಾಚರಣೆ: 8 ಜಾನುವಾರುಗಳು ಗೋಶಾಲೆಗೆ ರವಾನೆ

ತುಮಕೂರು
    ತುಮಕೂರು ನಗರದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಅತಿಯಾಗಿದೆಯೆಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಪೊಲೀಸರ ನೆರವಿನೊಂದಿಗೆ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆಯನ್ನು ನಡೆಸಿ, 8 ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ರವಾನೆ ಮಾಡಿದೆ. 
   “ನಗರದ ಹಳೆಯ ಹೊಸಬಡಾವಣೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮಂಗಳವಾರ ಬೆಳಗ್ಗೆ ಪಾಲಿಕೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಅಲ್ಲಿ ಒಂದು ಬೀಡಾಡಿ ಜಾನುವಾರು ಸಿಕ್ಕಿತು. ಬಿ.ಎಚ್.ರಸ್ತೆಯ ಬಾಟಾ ಶೋರೂಂ ಬಳಿ ಆರು ಜಾನುವಾರುಗಳು ಸಿಕ್ಕವು. ಕೆ.ಲಕ್ಕಪ್ಪ ವೃತ್ತದ ಬಳಿ ಒಂದು ಜಾನುವಾರು ಸಿಕ್ಕಿತು. ಒಟ್ಟಾರೆ ಈ 8 ಜಾನುವಾರುಗಳನ್ನು ರಕ್ಷಿಸಿ, ಗುಬ್ಬಿ ತಾಲ್ಲೂಕು ಎಂ.ಎಚ್. ಪಟ್ಟಣದಲ್ಲಿರುವ ಧ್ಯಾನ್ ಫೌಂಡೇಷನ್‍ಗೆ ಸೇರಿದ ಗೋಶಾಲೆಗೆ ಬಿಡಲಾಗಿದೆ.
    ಈ ಜಾನುವಾರುಗಳ ಮೌಲ್ಯ ಸುಮಾರು 1 ಲಕ್ಷ 80 ಸಾವಿರ ರೂ. ಆಗಬಹುದೆಂದು ಅಂದಾಜಿಸಲಾಗಿದೆ” ಎಂದು ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ. 
   “ಕಾರ್ಯಾಚರಣೆಯ ವೇಳೆಯಲ್ಲಿ ಜಾನುವಾರುಗಳ ವಾರಸುದಾರರು ಸಾರ್ವಜನಿಕರ ಜೊತೆ ಬಂದು ಜಾನುವಾರುಗಳನ್ನು ಬಿಟ್ಟುಬಿಡುವಂತೆ ಆಗ್ರಹಿಸಿದರು. ತೀವ್ರ ಒತ್ತಡ ಹಾಕಿದರು. ಆದರೆ ಪಾಲಿಕೆಯ ಅಧಿಕಾರಿಗಳು ಅದಕ್ಕೆ ಮಣಿಯದೆ ಕಾನೂನಿನ ಪ್ರಕಾರ ಕ್ರಮ ಜರುಗಿಸಿದ್ದಾರೆ. ಇನ್ನು ಮುಂದೆಯೂ ಈ ಕಾರ್ಯಾಚರಣೆ ಮುಂದುವರೆಯಲಿದೆ” ಎಂದು ಆಯುಕ್ತರು ತಿಳಿಸಿದ್ದಾರೆ.  
     ನಗರಾದ್ಯಂತ ಬೀಡಾಡಿ ಜಾನುವಾರುಗಳ ಹಾವಳಿ ಇದ್ದು, ಅದನ್ನು ನಿಯಂತ್ರಿಸಬೇಕೆಂದು ಸಾರ್ವಜನಿಕರಿಂದ ದೂರುಗಳು ವ್ಯಾಪಕವಾಗಿದ್ದವು. ಇದಲ್ಲದೆ ಪಾಲಿಕೆಯ ಸಭೆಗಳಲ್ಲೂ ಸದಸ್ಯರುಗಳು ಆಗ್ರಹಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
   
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link