ಹರಪನಹಳ್ಳಿ:
ಪಂಡಿತಾರಾಧ್ಯ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ರಘು ಆಚಾರಿ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ತಾಲೂಕಿನ ಲಿಂಗಾಯತ ಸಮಾಜ ಹಾಗೂ ಸಾಧು ಲಿಂಗಾಯತ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕೊಟ್ಟೂರು ರಸ್ತೆ ಪಿಎಲ್ಡಿ ಬ್ಯಾಂಕ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ರಸ್ತೆ ಮುಖೇನ ಪ್ರಮುಖ ಬೀದಿಯಲ್ಲಿ ಸಂಚರಿಸಿ ಪ್ರವಾಸಿ ಮಂದಿರ ವೃತ್ತದಲ್ಲಿ ರಘ ಆಚಾರಿ ಪ್ರತಿಕೃತಿ ಧಹನ ಮಾಡಿದ ನಂತರ, ಹೊಸಪೇಟೆ ರಸ್ತೆ ಮುಖಾಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಾಧು ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಬಂದೋಳ್ ಮಂಜುನಾಥ್ ಮಾತನಾಡಿ. ಹೊಸದುರ್ಗ ತಾಲೂಕು ಸಾಣಿಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿದ್ದ ತರಳಬಾಳು ಶಾಖಾ ಮಠ ಸಾಣಿಹಳ್ಳ ಪಟ್ಟಾಧ್ಯಕ್ಷರಾದ ಶ್ರೀ ಡಾ. ಪಂಡಿತಾರಾಧ್ಯ ಸ್ವಾಮಿಗಳ ಆಶೀರ್ವಚನದ ನುಡಿಗಳಲ್ಲಿ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ ಧೋರಣೆ ಸಲ್ಲದು, ಜನಪ್ರತಿನಿಧಿಗಳು ಮಹತ್ವ ಅರಿತಿರಬೇಕು ಎಂದು ಹೇಳಿರುವ ಹೇಳಿಕೆಗೆ ಎಂ.ಎಲ್.ಸಿ ರಘು ಆಚಾರಿ ಲಘುವಾಗಿ ತೆಗೆದುಕೊಂಡಿದ್ದಲ್ಲದೆ ಸ್ವಾಮಿಗಳ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿರುವುದು ಅವರ ಘನತೆಗೆ ತಕ್ಕದ್ದಲ್ಲ. ಇಡೀ ಸಮಾಜದ ಹಿತ ಕಾಯುವ ಗುರುಗಳ ಹಾಗೂ ಮಠಗಳ ಬಗ್ಗೆ ಮಾತನಾಡುವ ಹಕ್ಕು ಇವರಿಗೆಲ್ಲಿದೆ ಎಂದು ಹೇಳಿದರು.
ವೀರಶೈವ ಪಂಚಮಶಾಲಿ ಸಮಾಜದ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ. ಎಂ.ಎಲ್.ಸಿ. ರಘು ಆಚಾರಿಯವರ ಉದ್ದಟತನದ ಹೇಳಿಕೆಯನ್ನು ವಿರೋಧಿಸಿ ಯಾವುದೇ ರಾಜಕೀಯ ನೇತಾರರು ಖಂಡಿಸದೇ ಹಾಗೂ ಬುದ್ದಿ ಮಾತನ್ನು ಹೇಳುವ ಪ್ರಯತ್ನವನ್ನು ಮಾಡದಿರುವುದು ವಿಷಾಧನೀಯ. ರಘು ಆಚಾರಿ ಧಾರ್ಮಿಕ ಶ್ರದ್ಧಾಕೇಂದ್ರಗಳ ಮಠಾದೀಶರಿಗೆ ಮಾಡಿದ ಅಪಮಾನಕ್ಕೆ ತಕ್ಕ ಶಾಸ್ತಿಯನ್ನು ನೀಡಲೇಬೇಕಿದೆ. ಎಂದು ಮಾನ್ಯ ಮುಖ್ಯಮಂತ್ರಿಗಳು, ಸಭಾಪತಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ಸಮಾಜದ ಮುಖೇನ ಮನವಿ ಮಾಡುತ್ತಿದ್ದೇವೆ ಎಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಂ.ರಾಜಶೇಖರ್ ಮಾತನಾಡಿ. ಸರ್ವ ಸಮಾಜದ ಹಿತ ಬಯಸುವ ರಾಷ್ಟ್ರ ಮಟ್ಟದ ಗುರುಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಘು ಆಚಾರಿಯವರು ತಮ್ಮ ಗುರುತರ ಸ್ಥಾನದ ಘನತೆಯನ್ನು ಮರೆತು ಮಾತನಾಡಿದ್ದಾರೆ. ಗುರುಗಳ ಮೇಲಿನ ಹೇಳಿಕೆಯಿಂದ ಇಡೀ ಸಮಾಜಕ್ಕೆ ಅಪಮಾನ ಮಾಡಿದಂತಾಗಿದೆ. ಕೂಡಲೇ ಸರ್ಕಾರ ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಜಿ.ನಂಜನಗೌಡ ಮಾತನಾಡಿ. ಸುಖಾಸುಮ್ಮನೆ ರಘು ಆಚಾರಿಯವರು ಶ್ರೀಗಳ ವಿರುದ್ದ ನೀಡಿರುವ ಹೇಳಿಕೆಯನ್ನು ಇಡೀ ಸಮಾಜ ಖಂಡಿಸುತ್ತದೆ, ದಿಕ್ಕರಿಸುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶ್ರೀಗಳಿಗೆ ಅವಹೇಳನಕಾರಿ ಮಾತನಾಡುವ ಮುನ್ನ ತನ್ನ ಯೋಚಿಸಬೇಕಿತ್ತು. ಕೂಡಲೇ ಶ್ರೀಗಳ ಬಳಿ ಕ್ಷಮೆಯಾಚನೆ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಾಚಾರ್ಯ ಶರಣಪ್ಪ, ವಕೀಲರಾದ ರಾಮನಗೌಡ ಪಾಟೇಲ್, ಆರುಂಡಿನಾಗರಾಜ್, ರೇವನಗೌಡ, ವೇದಮೂರ್ತಿ, ನಂದಿಬೇವೂರು ಜಗದೀಶ್, ತಾಪಂ ಸದಸ್ಯರಾದ ಕೆಂಚನಗೌಡ, ಪ್ರಕಾಶ್, ಮುಖಂಡರಾದ ಶಂಕರಗೌಡ, ಸಿದ್ದೇಶ್ ಗುಂಡಗತ್ತಿ, ಬೆಣ್ಣಿಹಳ್ಳಿ ರೇವಣ್ಣ, ಹಾಲೇಶ್ ಸತ್ತೂರು, ನಿಚ್ಚವ್ವನಹಳ್ಳಿ ಭೀಮಪ್ಪ, ಆರ್.ಕರೆಗೌಡ, ಓಂಕಾರಗೌಡ, ಪಿ.ಪ್ರೇಮ್ ಕುಮಾರ್, ಬಾಗಳಿ ಕರೆಗೌಡ, ನಾಗನಗೌಡ, ಕುಬೇರಪ್ಪ, ನಿಂಗರಾಜ್ ಪಣಿಯಾಪುರ, ನಾಗರಾಜ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
