ತಂಬಾಕು ನಿಯಂತ್ರಣ ಕಾಯ್ದೆ ; ಉಲ್ಲಂಘನೆ ಪ್ರಕರಣ ಪತ್ತೆಗೆ ದಾಳಿ ಹೆಚ್ಚಿಸಿ : ಡಿಸಿ

ಚಿತ್ರದುರ್ಗ
 
     ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ 2003) ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ದಂಡ ವಿಧಿಸುವುದಲ್ಲದೆ, ಪ್ರಕರಣಗಳನ್ನು ದಾಖಲಿಸಲು ಜಿಲ್ಲೆಯಾದ್ಯಂತ ದಾಳಿಗಳನ್ನು ಆಯಾ ತಾಲ್ಲೂಕು ತಹಸಿಲ್ದಾರರು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
     ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ತಂಬಾಕು ತನಿಖಾ ದಳದಿಂದ ಜಿಲ್ಲೆಯಲ್ಲಿ ಈ ವರ್ಷ ಇದುವರೆಗೂ ನಡೆಸಿದ ದಾಳಿ ಪ್ರಕರಣಗಳಲ್ಲಿ ಒಟ್ಟು 778 ಪ್ರಕರಣಗಳನ್ನು ದಾಖಲಿಸಲಾಗಿದ್ದು, 62220 ರೂ. ದಂಡ ವಸೂಲಿ ಮಾಡಲಾಗಿದೆ.  ಪೊಲೀಸ್ ಇಲಾಖೆಯಿಂದ ಈ ವರ್ಷ ಒಟ್ಟು 6389 ಪ್ರಕರಣ ದಾಖಲಿಸಿ, 4.3 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.  
 
     ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯನ್ನು ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸೇರಿದಂತೆ ಕಾಯ್ದೆಯ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ತಪ್ಪಿತಸ್ಥರಿಗೆ ದಂಡ ವಿಧಿಸುವುದಲ್ಲದೆ, ಕೇಸ್ ಕೂಡ ದಾಖಲು ಮಾಡಬೇಕು. 
      ಜಿಲ್ಲೆಯಲ್ಲಿ ಇದುವರೆಗೂ ಕೇವಲ 23 ದಾಳಿ ನಡೆಸಲಾಗಿದ್ದು, ಚಿತ್ರದುರ್ಗ-8, ಚಳ್ಳಕೆರೆ-03, ಹೊಸದುರ್ಗ-8 ದಾಳಿ ನಡೆಸಲಾಗಿದೆ.  ಆದರೆ ಹೊಳಲ್ಕೆರೆ, ಹಿರಿಯೂರು ಮತ್ತು ಮೊಳಕಾಲ್ಮುರು ತಾಲ್ಲುಕುಗಳಲ್ಲಿ ಕೇವಲ ತಲಾ ಒಂದು ದಾಳಿ ನಡೆಸಲಾಗಿದೆ ಎಂದರು.  ಕಾಯ್ದೆ ಉಲ್ಲಂಘನೆ ತಡೆಗಟ್ಟಲು ದಾಳಿ ನಡೆಸಲು ಆಸಕ್ತಿ ತೋರದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಆಯಾ ತಾಲ್ಲೂಕು ತಹಸಿಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಈ ತಿಂಗಳಿನಿಂದಲೇ ಹೆಚ್ಚು ಹೆಚ್ಚು ದಾಳಿ ನಡೆಸಿ, ಕಾಯ್ದೆ ಉಲ್ಲಂಘನೆಯನ್ನು ಪತ್ತೆ ಹಚ್ಚಿ, ದಂಡ ವಿಧಿಸಬೇಕು.  ಅಲ್ಲದೆ ಕೇಸ್ ದಾಖಲಿಸಿ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಬೇಕು ಎಂದು ತಾಕೀತು ಮಾಡಿದರು.
ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಮೇಲೆ ಕ್ರಮ : 
    ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಯಾವುದೇ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆ ಆವರಣದಿಂದ 100 ಗಜದ ಅಂತರದಲ್ಲಿ ಸಿಗರೇಟ್, ಬೀಡಿ ಅಥವಾ ಇತರೆ ಯಾವುದೇ ಬಗೆಯ ತಂಬಾಕು ಉತ್ಪನ್ನಗಗಳ ಮಾರಾಟವನ್ನು ನಿಷೇಧಿಸಿದ್ದು, ಉಲ್ಲಂಘನೆಯಾದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದೆ. 
 
    ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಗೋಡೆಗಳ ಮೇಲೆ ಈ ಎಚ್ಚರಿಕೆ ಸಂದೇಶವನ್ನು ಬರೆಸಬೇಕು.  ಎಲ್ಲ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಗೋಡೆಬರಹ ಬರೆಯಿಸಿದ ಕುರಿತು ಫೋಟೋ ಸಹಿತ ವರದಿಯನ್ನು ಡಿಡಿಪಿಐ ಹಾಗೂ ಡಿಡಿಪಿಯು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.  ಕಾಯ್ದೆಯ ಉಲ್ಲಂಘನೆಯಾಗದ ರೀತಿ ಜಾಗೃತಿ ವಹಿಸುವುದು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರ ಹೊಣೆಯಾಗಿದ್ದು, ತಪ್ಪಿದಲ್ಲಿ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಯಾಗಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ನವೆಂಬರ್‍ನಲ್ಲಿ ಗುಲಾಬಿ ಆಂದೋಲನ : 
    ಜಿಲ್ಲೆಯಲ್ಲಿ ಗ್ರಾಮಗಳನ್ನು ತಂಬಾಕು ಮುಕ್ತವಾಗಿಸಲು, ತಂಬಾಕು ಉತ್ಪನ್ನಗಳ ಬಳಕೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಗುಲಾಬಿ ಆಂದೋಲನ’ ಆಯೋಜಿಸಲು ನಿರ್ಧರಿಸಲಾಗಿದ್ದು, ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಒಂದೇ ದಿನದಂದು ಏಕಕಾಲಕ್ಕೆ ವಿದ್ಯಾರ್ಥಿಗಳಿಂದ ಜಾಥಾ ಏರ್ಪಡಿಸಲಾಗುವುದು. 
 
   ವಿದ್ಯಾರ್ಥಿಗಳು ಅಂಗಡಿಯವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ವಿನಂತಿಸಿ, ಗುಲಾಬಿ ಹೂ ನೀಡಿದರೆ, ಧೂಮಪಾನ ಮಾಡುವ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ ತಂಬಾಕು ಉತ್ಪನ್ನಗಳ ಸೇವನೆ ಮಾಡದಂತೆ ಮನವಿ ಮಾಡುವರು.  ಈ ಕಾರ್ಯಕ್ರಮವನ್ನು ನವೆಂಬರ್‍ನಲ್ಲಿ ಆಯೋಜಿಸಲಾಗುವುದು ಎಂದು ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನದ ವಿಭಾಗೀಯ ಸಂಯೋಜಕ ಮಹಾಂತೇಶ್ ಅವರು ಮಾಹಿತಿ ನೀಡಿದರು. 
ಕಚೇರಿಗಳಲಿ ಫಲಕ :
     ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ದಂಡ ವಿಧಿಸುವ ಕುರಿತು ಎಚ್ಚರಿಕೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಸ್ಟ್ಯಾಂಡ್ ಆವರಣದಲ್ಲಿ ಫಲಕವನ್ನು ಅಳವಡಿಸಬೇಕು.  ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಪ್ರತಿ ತಿಂಗಳು ತಾಲ್ಲೂಕಿಗೆ 5 ಗ್ರಾಮಗಳಂತೆ ಆಯ್ಕೆ ಮಾಡಿಕೊಂಡು, ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
      ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್, ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ್, ಜಿಲ್ಲಾ ಸಲಹೆಗಾರ ಪ್ರಭುದೇವ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿ. ಕಂಬಾಳಿಮಠ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹಮದ್ ಮುಬೀನ್, ತಹಸಿಲ್ದಾರ್ ವೆಂಕಟೇಶಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link