ಸೇತುವೆ ನಿರ್ಮಾಣ ಕಾಮಗಾರಿ : ಕಳಪೆಯಾದರೆ ಕಾನೂನು ಕ್ರಮ

ಚಳ್ಳಕೆರೆ

     ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಧುರೆಯಿಂದ ಸೊಂಡೆಕೆರೆಗೆ ಹೋಗುವ ಮಾರ್ಗದಲ್ಲಿ ಅಂದಾಜು 3 ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಿಸುತ್ತಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾಮಗಾರಿಯ ಪರಿಶೀಲನೆ ನಡೆಸಿದರು.

      ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗದಮ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜುವರಿಗೆ ಸೂಚನೆ ನೀಡಿದ ಶಾಸಕರು, ಪ್ರಸ್ತುತ ರಸ್ತೆ ತಿರುವಿನಿಂದ ಕೂಡಿದ್ದು, ಅದೇ ರೀತಿ ಸೇತುವೆ ನಿರ್ಮಿಸಿದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಸಂದರ್ಭ ಹೆಚ್ಚಿದೆ. ಈ ಬಗ್ಗೆ ಈಗಾಗಲೇ ಹಲವಾರು ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಸೇತುವೆಯನ್ನು ನೆರವಾಗಿಯೇ ಮಾಡುವಂತೆ ಸೂಚನೆ ನೀಡಿದರು.

      ಈ ಹಿಂದೆ ರಸ್ತೆಯ ಪ್ರಕಾರ ಸೇತುವೆ ನಿರ್ಮಿಸಿದಲ್ಲಿ ಜನರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದ್ದು, ಸೇತುವೆ ತಿರುವಿನಲ್ಲಿ ಅಪಘಾತಗಳು ನಡೆಯುವ ಸಂಭವ ಹೆಚ್ಚಿತ್ತು. ಈ ಬಗ್ಗೆ ಶಾಸಕರಿಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಅಭಿಪ್ರಾಯದಂತೆ ತಿರುವಿನಲ್ಲಿ ಸೇತುವೆ ನಿರ್ಮಿಸುವ ಬದಲು ನೇರವಾದ ರಸ್ತೆಗೆ ಸೇತುವೆ ನಿರ್ಮಿಸಬೇಕು.

       ಚಿಕ್ಕಮಧುರೆಯಿಂದ ಸೊಂಡೆಕೆರೆ ಗ್ರಾಮಕ್ಕೆ ನೇರ ರಸ್ತೆ ಇದ್ದು, ಸೇತುವೆಯೂ ಸಹ ನೇರವಾಗಿದ್ದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ರೀತಿಯ ಅನುಕೂಲತೆಗಳು ಆಗುತ್ತವೆ. ಸೇತುವೆ ನಿರ್ಮಾಣ ಕಾಮಗಾರಿ ಅತ್ಯಂತ ಪಾರದರ್ಶಕವಾಗಿರಬೇಕು. ಕಳಪೆ ಕಾಮಗಾರಿಯಾದಲ್ಲಿ ಅದರ ಸಂಪೂರ್ಣ ಹೊಣೆಯನ್ನು ಇಲಾಖಾ ಅಧಿಕಾರಿಗಳ ಹೊರಬೇಕಾಗುತ್ತದೆ ಎಂದರು.

      ಸುಮಾರು 3 ಕೋಟಿ ವೆಚ್ಚದ ಈ ಸೇತುವೆ ನಿರ್ಮಾಣ ಕಾರ್ಯ ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಶಾಸಕರು ವ್ಯಕ್ತ ಪಡಿಸಿದರು. ಅಧಿಕಾರಿಗಳು ತಮ್ಮ ಕಾಮಗಾರಿಯನ್ನು ಪೂರೈಸುವ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳಿಂದಲೂ ಸಹ ಸಲಹೆ ಸೂಚನೆ ಪಡೆಯುವಂತೆ ಮನವಿ ಮಾಡಿದರು.

       ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಪ್ರಕಾಶ್‍ಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಆಂಜನೇಯ, ಬಸವರಾಜು, ಚನ್ನಕೇಶವ, ಮಲ್ಲೇಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್‍ಬಾಬು, ಸದಸ್ಯರಾದ ಅಂಜಿನಪ್ಪ, ಮುಖಂಡ ಮಲ್ಲಿಕಾರ್ಜುನ, ಹನುಮಂತಪ್ಪ, ಮಲ್ಲೇಶಪ್ಪ, ತಿಮ್ಮಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link