ಟಿಪ್ಪುಜಯಂತಿಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ : ಜಿ. ಪರಮೇಶ್ವರ್

ಬೆಂಗಳೂರು

       ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಗೃಹ ಇಲಾಖೆಯ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಟಿಪ್ಪು ಮೆರವಣಿಗೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

        ಟಿಪ್ಪು ಜಯಂತಿ ಆಚರಣೆ ಸಿದ್ಧತೆಗಳ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆ ಒಳಗೆ ಮುಕ್ತಾಯಗೊಳಿಸಲಾಗುವುದು ಎಂದರು.

      ಕಳೆದ 3-4 ವರ್ಷಗಳಿಂದ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಜಯಂತಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಆದರೆ ವಿರೋಧಿಸುವ ನೆಪದಲ್ಲಿ ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಂಡರೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

       ಟಿಪ್ಪುಜಯಂತಿ ಸಂದರ್ಭದಲ್ಲಿ ಶಾಂತಿ ಭಂಗವಾಗುವುದನ್ನು ತಡೆಯಲು ಪರ-ವಿರೋಧ ಹೀಗೆ ಎರಡು ರೀತಿಯ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಜತೆಗೆ ಕಾರ್ಯಕ್ರಮವನ್ನು ಸಭಾಂಗಣದಲ್ಲೇ ನಡೆಸುವಂತೆಯೂ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಹೊರಾಂಗಣದಲ್ಲಿ ಜಯಂತಿ ಆಚರಣೆ ಮಾಡದಂತೆಯೂ ತಾಕೀತು ಮಾಡಲಾಗಿದೆ ಎಂದರು.

        ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಟಿಪ್ಪುಜಯಂತಿ ಆಚರಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮಕ್ಕೆ ಹಣವನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

        ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ವಿರೋಧಿ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಆಗ ವೈಯಕ್ತಿಕವಾಗಿ ಈ ಹೇಳಿಕೆ ನೀಡಿದ್ದರು. ಇದು ಮೈತ್ರಿ ಸರಕಾರ. ಅಲ್ಲದೆ, ಹಿಂದಿನ ಸರಕಾರದಲ್ಲಿ ತೆಗೆದುಕೊಂಡು ಎಲ್ಲ ಕಾರ್ಯ ಮುಂದುವರೆಸುವ ವಾಗ್ದಾನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

         ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಬಂದೋಬಸ್ತ್‍ಗಾಗಿ ಹತ್ತು ಕ್ಷಿಪ್ರ ಕಾರ್ಯಾಪಡೆ ತುಕಡಿಯನ್ನು ನಿಯೋಜಿಸಲಾಗುವುದು ಎಂದರು.

      ಟಿಪ್ಪುವಿನ ಬಗ್ಗೆಯಾಗಲೀ ಅಥವಾ ಜಯಂತಿ ಆಚರಣೆ ಬಗ್ಗೆಯಾಗಲೀ ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಲೇಖನ ಸೇರಿದಂತೆ ಯಾವುದೇ ಪೋಸ್ಟ್ ಗಳನ್ನು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಹ ನಿರ್ಧರಿಸಲಾಗಿದೆ ಎಂದರು.

     ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ಟಿಪ್ಪು ಜಯಂತಿ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮುಖಂಡರುಗಳ ಹೇಳಿಕೆಯ ಮೇಲೂ ನಿಗಾ ಇಡಲಾಗುತ್ತದೆ. ಪ್ರಚೋದನಾಕಾರಿ ಹೇಳಿಕೆಗಳು ಇದ್ದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

     ಚಿತ್ರದುರ್ಗ ಸಾಣೆಹಳ್ಳಿಯಲ್ಲಿ ನಿನ್ನೆ ನಡೆದ ನಾಟಕೋತ್ಸವ ಸಂದರ್ಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿಗಳು ಆಹಾರವನ್ನು ಪರೀಕ್ಷಿಸಿದ ಬಗ್ಗೆ ತಪ್ಪಾಗಿ ಅರ್ಥೈಸಬೇಕಿಲ್ಲ. ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಒಂದು ಶಿಷ್ಟಾಚಾರ ಇರುತ್ತದೆ, ಅದನ್ನು ಪಾಲಿಸಬೇಕಾಗುತ್ತದೆ . ಸ್ವಾಮೀಜಿಗಳು ತಮ್ಮ ಭಾಷಣದಲ್ಲಿ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದು ನಿಜ. ಅದೇನು ಮಹಾ ಅಪರಾಧ ಎಂಬಂತೆ ಅವರು ಈ ಮಾತುಗಳನ್ನು ಹೇಳಲಿಲ್ಲ. ಸ್ವಾಮೀಜಿಗಳು ಹೇಳಿದಾಗ ನಾನು ವೇದಿಕಯಲ್ಲೇ ಇದ್ದೆ. ಹಾಗಾಗಿ ಸ್ವಾಮೀಜಿಗಳ ಮಾತಿಗೆ ತಪ್ಪು ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

     ಇಂದು ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್‍ಪಂತ್, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

     ಸಿದ್ದಗಂಗಾ ಮಠದಲ್ಲಿ 10 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಲ್ಲಿನ ಮಕ್ಕಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ವಿಶೇಷ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ನೀರು ನೀಡಲಾಗುತ್ತಿತ್ತು. ಈಗ ಬೋರ್‍ವೆಲ್ ಒಣಗಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ಆ ಮಕ್ಕಳಿಗೆ ಹೇಮಾವತಿಯಿಂದ ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link