ಚಳ್ಳಕೆರೆ
ಶಾಲೆಯಲ್ಲಿ ಅಭ್ಯಾಸ ನಿರತನಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯದ ಜೀವನವನ್ನು ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವನ್ನು ಅರ್ಥೈಸಿಕೊಳ್ಳಬೇಕಿದೆ. ಇಂದಿನ ಶಿಕ್ಷಣ ತಾಂತ್ರಿಕತೆ ಮತ್ತು ಮೌಲ್ಯದಿಂದ ಕೂಡಿದ್ದು, ಶ್ರಮದಿಂದ ವಿನಯದಿಂದ ಅಭ್ಯಾಸ ಮಾಡಿ, ನಿಮ್ಮ ಗುರಿ ಸಾಧನೆಗೆ ಪ್ರಾಮಾಣಿಕ ಯತ್ನ ಮಾಡುವಂತೆ ಬೆಂಗಳೂರಿನ ಡಿಎಸ್ಆರ್ಟಿ ಹಿರಿಯ ಸಹಾಯಕ ನಿರ್ದೇಶಕ ಡಾ.ಎಚ್.ಬಿ.ಚಂದ್ರಶೇಖರ್ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಬಿ.ಎಂ.ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವ್ಯಕ್ತಿ ವಿಕಸನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ನಗರದ ಹೆಗ್ಗೆರೆ ತಾಯಮ್ಮ ಮತ್ತು ವಿಶ್ವಭಾರತಿ ಪ್ರೌಢಶಾಲೆಯ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಮಾರ್ಗದರ್ಶನ ಪಡೆದರು. ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಜಾರಿಗೆ ತಂದಿದ್ದು, ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಮೌಲ್ಯ ಮತ್ತು ವಿದ್ಯಾರ್ಥಿಗಳ ವಿಕಸಕ್ಕೆ ಅನುಕೂಲವಾಗುವ ಎಲ್ಲಾ ರೀತಿಯ ಮಾರ್ಗದರ್ಶನಗಳನ್ನು ಶಿಕ್ಷಣದ ಮೂಲಕವೇ ನೀಡಲಾಗುತ್ತಿದೆ. ಕಲಿಯುವಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇಯಾದ ಗುರಿಯನ್ನು ಮತ್ತು ಅದನ್ನು ಸಾಧಿಸಲು ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿದೆ.
ವಿದ್ಯಾರ್ಥಿ ಪರಿಪೂರ್ಣವಾಗಿ ಅಭ್ಯಾಸದಲ್ಲಿ ನಿರತನಾದಾಗ ಮಾತ್ರ ಅವನ ಗುರಿಯ ಕನಸು ನನಸಾಗುವತ್ತ ಸಾಗುತ್ತದೆ. ವಿದ್ಯಾರ್ಥಿಗಳೇ ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದು, ಆಲಸ್ಯ ಮತ್ತು ಸೋಮಾರಿತನದಿಂದ ವಿದ್ಯಾರ್ಥಿಗಳು ದೂರವಿರಬೇಕು. ಕಲಿಕೆಗೆ ಪ್ರೇರಕವಾಗುವಂತಹ ವಿಷಯಗಳಿಗೆ ಮಾತ್ರ ಆದ್ಯತೆ ನೀಡಬೇಕು. ವಿದ್ಯಾರ್ಥಿ ಈ ಸಮಾಜದ ಆಸ್ತಿ ಎಂಬ ನಂಬಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ಸಕಾರಗೊಳಿಸುವತ್ತ ಮುನ್ನಡೆಯಬೇಕೆಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರದ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ವಿದ್ಯಾರ್ಥಿಗಳ ವಿಕಸನಕ್ಕಾಗಿ ಇಲಾಖೆ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ರೂಪಿಸಿದೆ. ಪ್ರಾರಂಭದ ಹಂತದಲ್ಲಿ ಇಂದು ಚಾಲನೆ ದೊರತಿದ್ದು, ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಯೋಜನೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂಪತ್ಕುಮಾರ್ ಮಾತನಾಡಿ, ಇಂದಿನ ಕಾರ್ಯಕ್ರಮ ಕೇವಲ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ವಿವಿಧ ಪ್ರೌಢಶಾಲೆಯ ಶಿಕ್ಷಕರ ಸಮೂಹವೂ ಸಹ ಉಪಸ್ಥಿತರಿದ್ದು, ಹಲವಾರು ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಂಡಿದೆ.
ಇಂತಹ ಕಾರ್ಯಕ್ರಮಗಳು ಶಿಕ್ಷಣ ಇಲಾಖೆಯ ಸ್ವರೂಪವನ್ನೇ ಬದಲಾವಣೆಯತ್ತ ಕೊಂಡೊಯುವುದರಲ್ಲಿ ಸಂದೇಹವಿಲ್ಲವೆಂದರು. ಕಾರ್ಯಕ್ರಮದಲ್ಲಿ ಎಚ್ಟಿಟಿ ಶಾಲಾ ಮುಖ್ಯ ಶಿಕ್ಷಕ ಎಚ್.ಅಜ್ಜಪ್ಪ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ವಿಶ್ವಭಾರತಿ ಶಾಲೆಯ ಮುಖ್ಯ ಶಿಕ್ಷಕ ಜಿ.ಟಿ.ವೀರಭದ್ರಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
