ಹುಳಿಯಾರು
ಈ ಬಾರಿ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನಿಯೋಜಿಸಲಾಗುತ್ತದೆ ಎಂದು ಸಿಆರ್ಪಿ ದಯಾನಂದ್ ತಿಳಿಸಿದ್ದಾರೆ,
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತಗಟ್ಟೆಗಳಿಗೆ ಆಗಮಿಸುವ ವಿಕಲಚೇತನರಿಗೆ ವೀಲ್ ಛೇರ್ ಮೂಲಕ ಮತಗಟ್ಟೆ ತಲುಪಿಸುವುದು, ಗರ್ಭಿಣಿಯರು, ವೃದ್ದರಿಗೆ ಮತದಾನ ಮಾಡಲು ಸಹಕರಿಸುವುದರ ಜೊತೆಗೆ ಮತದಾನಕ್ಕೆ ಆಗಮಿಸುವವರಿಗೆ ಕುಡಿಯುವ ನೀರು ಸರಬರಾಜು ಮಾಡುವುದು ಮುಂತಾದ ಸೇವೆ ನೀಡಲು ಕಾಲೇಜು ವಿದ್ಯಾರ್ಥಿಗಳ ಸ್ವಯಂ ಸೇವಕರ ತಂಡವನ್ನು ನಿಯೋಜಿಸಲಾಗುವುದು ಎಂದರು.
ಮತದಾರರಲ್ಲದವರು, ಪಕ್ಷದ ಕಾರ್ಯಕರ್ತರಲ್ಲದವರು, ಅಭ್ಯರ್ಥಿಗಳ ಸಂಬಂಧಿಕರಲ್ಲದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ಆಯ್ಕೆ ಮಾಡಲಾಗುವುದು. ಪಂಚಾಯ್ತಿಗೆ 10 ಮಂದಿಯಂತೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರಲ್ಲದೆ ಸ್ವಯಂ ಸೇವಕರಿಗೆ ಯಾವುಇದೇ ಭತ್ಯೆ ನೀಡಲಾಗುವುದಿಲ್ಲ. ಬ್ಯಾಡ್ಜ್, ಟೋಪಿ ಮಾತ್ರ ನೀಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿ ಸ್ವಯಂ ಸೇವಕರಿಗೆ ಅಗತ್ಯವಿರುವ ಸೂಕ್ತ ತರಬೇತಿ ನೀಡಿ, ಅವರು ಮತದಾನ ಮಾಡುವ ಮತಗಟ್ಟೆಯಲ್ಲಿಯೇ ಕಾರ್ಯ ನಿರ್ವಹಿಸಲು ನಿಯೋಜಿಸಲಾಗುವುದು, ಪ್ರಜಾಪ್ರಭುತ್ವದ ಯಶಸ್ವಿಗೆ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ, ತಮ್ಮ ಅಮೂಲ್ಯ ಕೊಡುಗೆ ನೀಡಲು ಇದು ಒಂದು ಸದವಕಾಶ ಎಂದು ಹೇಳಿದರು.ಪಪಂ ಪಿಡಿಓ ಡಿ.ಭೂತಪ್ಪ, ಬಿಲ್ ಕಲೆಕ್ಟರ್ ಆನಂದ್, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
