ಹಾಲಿ ಶಾಸಕರ ಮೇಲೆ ಮಾಜಿ ಶಾಸಕ ಸುರೇಶ್‍ಗೌಡ ಗಂಭೀರ ಆರೋಪ

ತುಮಕೂರು

       ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಶಾಸಕರು ಸೇರಿದಂತೆ ಅಧಿಕಾರಿವರ್ಗದವರು ಭಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಮಾಜಿ ಶಾಸಕ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್‍ಗೌಡ ಗಂಭೀರವಾಗಿ ಆರೋಪ ಮಾಡಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.16ರಂದು ರಾತ್ರಿ 8.30 ರ ವೇಳೆಯಲ್ಲಿ ನಂದಿಹಳ್ಳಿ ಗ್ರಾಮದ ಸರ್ವೇ ನಂಬರ್ 42ರಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಯ ಸ್ಥಳಕ್ಕೆ ಶಾಸಕ ಗೌರಿಶಂಕರ್ ಹಾಗೂ ಅವರ ಬೆಂಬಲಿಗರಾದ ಹರಳೂರು ಗ್ರಾಮದ ರುದ್ರೇಶ್ ಮತ್ತು ಸಂಗಡಿಗರು ಭೇಟಿ ನೀಡಿ ಕಲ್ಲು ದಿಮ್ಮಿ ತುಂಬಿದ್ದ 6 ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಗೆ ಬೆದರಿಕೆ ಹಾಕಿ ಗ್ರಾನೈಟ್ ಮಾಲಿಕರಿಗೆ ಪೋನು ಮಾಡಿಸಿ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಗ್ರಾನೈಟ್ ಮಾಲಿಕ ಒಪ್ಪದಿದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ನವೀನ್ ಮತ್ತು ವಿನಯ್ ಎಂಬುವವರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದಲ್ಲದೆ, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‍ಐ ರಾಜುರವರನ್ನು ಕರೆಯಿಸಿಕೊಂಡು ಡೀಲಿಂಗ್ ಮಾಡಿದ್ದಾರೆ ಎಂದು ಆರೋಪಿಸಿದರು.

        ಗ್ರಾನೈಟ್ ಮಾಲೀಕ ಮತ್ತು ಶಾಸಕರ ನಡುವೆ ಈ ಮೂವರು ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ 30 ಲಕ್ಷ ಹಣಕ್ಕೆ ಡೀಲಿಂಗ್ ಮಾಡಿದ್ದಾರೆ. ಆ ರಾತ್ರಿ ವೇಳೆ ಹಣ ನೀಡಲು ಆಗುವುದಿಲ್ಲ. ಜ.17ರಂದು ನೀಡುತ್ತೇನೆ ಎಂದು ಹೇಳಿದಾಗ ಆ ಲಾರಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಾದ ಶಾಸಕರು ಆ ಲಾರಿಗಳನ್ನು ಹಣ ನೀಡುವವರೆಗೆ ನಮ್ಮ ಸುಪರ್ದಿಯಲ್ಲಿರಲಿ ಎಂದು ಹರಳೂರು ರುದ್ರೇಶ್ 6 ಲಾರಿಗಳ ಪೈಕಿ 4 ಲಾರಿಗಳನ್ನು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸೂರ್ಯ ಸೂಪರ್ ಸ್ಟೋನ್ ಪಾಲೀಷ್ ಗ್ರಾನೈಟ್ ಗೋಡಾನಿನಲ್ಲಿ ನಿಲ್ಲಿಸಿಕೊಂಡಿದ್ದಾರೆ.

        ಜ.17ರಂದು ಮಧ್ಯಾಹ್ನದ ವೇಳೆಗೆ ಗ್ರಾನೈಟ್ ಮಾಲೀಕರು ಶಾಸಕರಿಗೆ 25 ಲಕ್ಷ ಹಣವನ್ನು ನೀಡಿ, ಸೂರ್ಯ ಸೂಪರ್ ಸ್ಟೋನ್ ಪಾಲೀಷ್ ಗ್ರಾನೈಟ್ ಫ್ಯಾಕ್ಟರಿಯಿಂದ ಲಾರಿಗಳನ್ನು ತೆಗೆದುಕೊಂಡು ಹೋಗುವ ಮುಂಚೆ ಸ್ಥಳೀಯರಿಂದ ಮಾಹಿತಿ ತಿಳಿದ ಬಿಜೆಪಿ ಪಕ್ಷದ ಕಾರ್ಯಕರ್ತರು ಲಾರಿ ಇರುವ ಸ್ಥಳಕ್ಕೆ ತೆರಳಿ ಘೇರಾವ್ ಹಾಕಿ ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿ ದುರು ನೀಡಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಗಣಿ ಮತ್ತು ಭೂ ಇಲಾಖಾ ಅಧಿಕಾರಿಗಳು ನಮ್ಮ ದೂರನ್ನು ಪರಿಗಣೆನೆಗೆ ತೆಗೆದುಕೊಳ್ಳದೆ, ಶಾಸಕರ ಅಣತೆಯಂತೆ ಅವರಿಗೆ ಬೇಕಾದ ರೀತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದರು.

         ಈ ವಿಚಾರವಾಗಿ ಹಾಲಿ ಶಾಸಕರ ವಿರುದ್ಧ ಹಾಗೂ ಸಂಬಂಧಪಟ್ಟ ಎಂಜಿನಿಯರ್‍ಗಳು ಮತ್ತು ಕ್ಯಾತ್ಸಂದ್ರ ಪಿಎಸ್‍ಐ ರಾಜು ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ದೂರು ದಾಖಲಿಸಿದ್ದಾರೆ. ಗಣಿಗಾರಿಕೆ ಇಲಾಖಾಧಿಕಾರಿಗಳು ಕೇವಲ ಕೂಲಿಗೆ ಬಂದಿರುವ ಲಾರಿಯವರ ಮೇಲೆ ಕೇಸು ದಾಖಲು ಮಾಡಿದ್ದು, ಅವರ ಕೇಸನ್ನು ವಾಪಸ್ಸು ಪಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ಮಾಡಿರುವ ಕ್ವಾರಿ ಮಾಫಿಯಾ ಕೇವಲ ಒಂದು ಸ್ಯಾಂಪಲ್ ಆಗಿದ್ದು, ಇಂತಹ ಎಷ್ಟೋ ಮಾಫಿಯಾದಲ್ಲಿ ಶಾಸಕರ ಕೈವಾಡ ಇದೆ. ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಸೇರಿದಂತೆ ಸಂಪೂರ್ಣ ಮಾಹಿತಿ ಲೋಕಾಯುಕ್ತಕ್ಕೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡುತ್ತೇನೆ ನಿಮ್ಮ ಶಾಸಕರ ಮೇಲೆ ಆರೋಪ ಮಾಡುತ್ತಿದ್ದೇನೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಎಂದು ಸಾಬೀತಾದರೆ ಶಾಸಕತ್ವ ರದ್ದುಗಳಿಸಿ, ಇಲ್ಲವಾದಲ್ಲಿ ಮುಖ್ಯಮಂತ್ರಿ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

         ಲೋಕಸಭಾ ಚುನಾವಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕರು, ಪಕ್ಷ ಯಾರಿಗೆ ತೀರ್ಮಾನಿಸಿ ಟಿಕೆಟ್ ನೀಡುತ್ತೋ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಈಗಾಗಲೇ ಪಕ್ಷದ ಸಂಘಟನೆಗಾಗಿ ಓಡಾಡುತ್ತಿದ್ದೇವೆ. ನಮ್ಮಲ್ಲಿ ಎಲ್ಲಾ ಒಗ್ಗಟ್ಟಿದೆ. ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ತೀರ್ಮಾನಕ್ಕೆ ಬದ್ಧ, ಒಂದು ವೇಳೆ ನನಗೆ ಟಿಕೆಟ್ ನೀಡದರೂ ನಾನು ಸ್ಪರ್ಧಿಸುತ್ತೇನೆ ಎಂದು ಪರೋಕ್ಷವಾಗಿ ತಾವು ಟಿಕೆಟ್ ಆಕಾಂಕ್ಷಿ ಎಂಬುದನ್ನು ತಿಳಿಸಿದರು.

          ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಉಪಾಧ್ಯಕ್ಷರಾದ ಶಾರದಾನರಸಿಂಹಮೂರ್ತಿ, ಜಿ.ಪಂ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಸಿದ್ದೇಗೌಡರು, ಮುಖಂಡರಾದ ನರಸಿಂಹಮೂರ್ತಿ, ಲಕ್ಷ್ಮೀಶ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link