ಹಾವೇರಿ : ತಾಲೂಕಾವಾರು ಉಸ್ತುವಾರಿ ಅಧಿಕಾರಿಗಳ ನಿಯೋಜನೆ

ಹಾವೇರಿ

     ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುವ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿತಾಲೂಕಿಗೆ ಓರ್ವರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ತಾಲೂಕಾ ಕೇಂದ್ರದಲ್ಲಿ ಉಳಿದು ಉಸ್ತುವಾರಿ ವಹಿಸಬೇಕು. ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ತತಕ್ಷಣ ಪರಿಹಾರ ವಿತರಣೆಗೆ ತುರ್ತು ಕ್ರಮ ವಹಿಸಬೇಕು. ಸ್ಥಳಾಂತರಕ್ಕೆ ಕಾಳಜಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

     ಬೆಂಗಳೂರು ವಿಕಾಸಸೌಧದಿಂದ ಹಾವೇರಿ ಹಾಗೂ ಉಡುಪಿ ಜಿಲ್ಲಾಡಳಿತದೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಮಳೆಹಾನಿ ವಿವರ, ಕೋವಿಡ್ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳು, ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಮಾಲೋಚನೆ ನಡೆಸಿದರು.

    ವರದಾ ನದಿ ಪಾತ್ರದಲ್ಲಿ ಮುಳಗಡೆ ಭೀತಿ ಎದುರಿಸುವ ಹಳ್ಳಿಗಳಿಗೆ ಖುದ್ದಾಗಿ ಅಧಿಕಾರಿಗಳು ಭೇಟಿ ನೀಡಬೇಕು. ಪ್ರವಾಹ ತೊಂದರೆಗಳಿಗೆ ಒಳಗಾಗುವ ಹಳ್ಳಿಗಳಲ್ಲಿ ಮಾರ್ಕಿಂಗ್ ಮಾಡಿ ನೀರು ನುಗ್ಗುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತಂತೆ ಕಾಳಜಿ ಕೇಂದ್ರಗಳ ತೆರೆಯಲು ಈಗಿನಿಂದಲೇ ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಮಳೆಯಿಂದ ತೊಂದರೆಗೊಳಗಾಗುವ ನದಿ, ಹಳ್ಳ ಹಾಗೂ ಕೆರೆ ದಡಗಳ ಗ್ರಾಮಗಳ ಜನರಿಗೆ ಎಲ್ಲ ಮುನ್ನೆಚ್ಚರಿಕೆ ನೀಡಬೇಕು. ತಹಶೀಲ್ದಾರ, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಬೇಕು. ಅಪಾಯದ ಲಕ್ಷಣಗಳು ಕಂಡುಬಂದರೆ ಕೊನೆಯ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವ ಬದಲು ಮುಂಚಿತವಾಗಿ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಉತ್ತಮ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

     ವರದಾ ನದಿ ಪಾತ್ರದ ಶಿಗ್ಗಾಂವ, ಸವಣೂರ , ಹಾನಗಲ್, ಹಾವೇರಿ ಭಾಗದ ಗ್ರಾಮಗಳಲ್ಲಿ ಕಳೆದ ನೆರೆಯ ಸಂದರ್ಭದ ಅನುಭವದ ಆಧಾರದ ಮೇಲೆ ಆ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು, ನಾಗನೂರ ಕೆರೆ, ಬಕಸಾಸುರ ಕೆರೆ, ಹುನಗುಂದ ಕೆರೆ, ಕೋಣಕೆರೆ, ಅಡಿಸೋಮಾಪುರ ಕೆರೆ, ಮೆಳ್ಳಾಗಟ್ಟಿ, ಮನ್ನಂಗಿ, ಹಾನಗಲ್ ತಾಲೂಕಿನ ಧರ್ಮಾ ಹಾಗೂ ವರದಾ ನದಿಗಳ ಕಾಲುವೆ ಒಡೆಯದಂತೆ ಕ್ರಮವಹಿಸಬೇಕು. ಈ ಕುರಿತಂತೆ ಇಂದಿನಿಂದಲೇ ಕೆರೆಗಳ ದಂಡೆಗಳ ಭದ್ರತೆ ಕುರಿತಂತೆ ಅಧಿಕಾರಿಗಳ ತಂಡ ನೇಮಿಸಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ತುರ್ತಾಗಿ ದಡಗಳನ್ನು ಭದ್ರಪಡಿಸುವಂತೆ ಕೆಲಸಗಳನ್ನು ಮಾಡಬೇಕು. ಎಲ್ಲೆಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಂಭವವಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

    ತಕ್ಷಣ ಪರಿಹಾರ-ತಹಶೀಲ್ದಾರಗೆ ಅಧಿಕಾರ: ಮಳೆಯಿಂದ ಹಾನಿಯಾದ ಮನೆಗಳಿಗೆ ತಕ್ಷಣವೇ ಪರಿಹಾರವನ್ನು ಒದಗಿಸಬೇಕು. ಪರಿಹಾರ ವಿತರಣೆಯ ಅಧಿಕಾರವನ್ನು ಆಯಾ ತಾಲೂಕು ತಹಶೀಲ್ದಾರಗಳಿಗೆ ಅಧಿಕಾರ ವಿಕೇಂದ್ರೀಕರಣಗೊಳಿಸಿ ಆದೇಶ ಹೊರಡಿಸಬೇಕು. ಮನೆಬಿದ್ದ ದಿನವೇ ತಹಶೀಲ್ದಾರ ಸೇರಿದಂತೆ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ಜಿ.ಪಿ.ಎಸ್. ಸೇರಿದಂತೆ ಛಾಯಾಚಿತ್ರ ತೆಗೆದು ರಾಜೀವಗಾಂಧೀ ವಸತಿ ನಿಗಮದ ಫೋರ್ಟ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಪರಿಹಾರವನ್ನು ಸಂತ್ರಸ್ತರಿಗೆ ತಕ್ಷಣವೇ ಒದಗಿಸಬೇಕು. ಕಳೆದ ಪ್ರವಾಹ ಸಂದರ್ಭದಲ್ಲಿ ಎಸಗಿದ ತಪ್ಪು ಮರುಕಳಿಸಬಾರದು. ಕಳೆದ ನೆರೆ ಮತ್ತು ಅತಿವೃಷ್ಟಿಯಲ್ಲಿ ಬಿದ್ದ ಮನೆಗಳಿಗೆ

     ಈ ಸಂದರ್ಭದಲ್ಲಿ ಪರಿಹಾರ ಒದಗಿಸಲು ಹೊಂದಾಣಿಕೆ ಮಾಡುವ ತಪ್ಪು ಎಸಗಬಾರದು. ಪರಿಹಾರ ವಿತರಣೆಯಲ್ಲಿ ಲೋಪವಾದರೆ ಅಂತಹ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮಕೈಗೊಂಡು ಅಮಾನತ್‍ಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪಡಿತರ ವಿತರಣೆ:

      ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ತಕ್ಷಣವೇ ಪಡಿತರ ಪದಾರ್ಥಗಳನ್ನು ವಿತರಣೆ ಮಾಡಬೇಕು. ಕಾಳಜಿ ಕೇಂದ್ರಗಳನ್ನು ತೆರೆಯುವ ಅಗತ್ಯವಿದ್ದರೆ ಉತ್ತಮ ಕಟ್ಟಡಗಳನ್ನು ಆಯ್ಕೆಮಾಡಿಕೊಳ್ಳಬೇಕು. ವಿಶೇಷವಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯುವ ಮಕ್ಕಳಿಗೆ ರಗ್ಗ ಸೇರಿ ಉತ್ತಮ ಹೊದಿಕೆಗಳನ್ನು ಪೂರೈಸಬೇಕು. ವಿದ್ಯುತ್ ವ್ಯವಸ್ಥೆ, ಶೌಚಾಲಯ, ಉತ್ತಮ ಊಟದ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಬೆಳೆಹಾನಿ:

    ಮಳೆಯಿಂದ ಹಾನಿಯಾಗಿರುವ ಪ್ರದೇಶವನ್ನು ಈಗಿನಿಂದಲೇ ಸಮರ್ಪಕವಾಗಿ ಅಂದಾಜುಮಾಡಬೇಕು. ಯಾವುದೇ ಗೊಂದಲಕ್ಕೆ ಅವಕಾಶಮಾಡಿಕೊಡಬಾರದು. ಕೃಷಿ ಅಧಿಕಾರಿಗಳು , ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಗಳ ತಂಡ ರಚಿಸಿ ಬೆಳೆಹಾನಿಯನ್ನು ಕ್ಷೇತ್ರಭೇಟಿ ನೀಡಿ ಅತ್ಯಂತ ವಾಸ್ತವವಾಗಿ ಮಾಹಿತಿ ಸಂಗ್ರಹಿಸಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಎಚ್ಚರ ವಹಿಸಿ:

     ಮನೆಹಾನಿ, ಬೆಳೆಹಾನಿ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಬಾರದು. ಕಳೆದ ವರ್ಷದ ನೆರೆಯ ಸಂದರ್ಭದಲ್ಲಿ ಎಸಗಿದ ತಪ್ಪು ಪುನರಾವರ್ತನೆಯಾಗಬಾರದು. ಸರ್ಕಾರದ ಮಾರ್ಗಸೂಚಿ, ನಿಯಮಾವಳಿಗಳ ಅನುಸಾರ ನಿಖರವಾದ ಮಾಹಿತಿ ಸಂಗ್ರಹಿಸಬೇಕು. ಅರ್ಹ ಫಲಾನುಭವಿಗಳು ಪರಿಹಾರದಿಂದ ವಂಚಿತವಾಗಬಾರದು. ಅಂದಂದಿನ ಹಾನಿಯ ಮಾಹಿತಿ ಆ ದಿನವೇ ನಿಗಧಿತ ಪೋರ್ಟೆಲ್‍ಗಳಲ್ಲಿ ಅಪ್‍ಲೋಡ್ ಆಗಬೇಕು. ದಾಖಲೆಗಳ ಸಹಿತ ನಿಖರವಾದ ಮಾಹಿತಿಯನ್ನು ಹೊಂದಿರಬೇಕು ಎಂದು ಕಠಿಣವಾದ ಸೂಚನೆ ನೀಡಿದರು.
ಯೂರಿಯಾ ಸಮಸ್ಯೆ ಬಗೆಹರಿಸಿ: ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಯೂರಿಯಾ ಗೊಬ್ಬರದ ಕೊರೆತ ಉಂಟಾಗಿದೆ. ಕೆಲ ತಾಲೂಕು ಹಾಗೂ ಹೋಬಗಳಿಗೆ ಹೆಚ್ಚು ಯೂರಿಯಾ ಗೊಬ್ಬರ ಪೂರೈಕೆಯಾದರೆ ಕೆಲವೆಡೆ ಕಡಿಮೆ ಪೂರೈಕೆಯಾಗಿದೆ. ಯೂರಿಯಾ ಗೊಬ್ಬರದ ಕೊರತೆಯನ್ನು ತಕ್ಷಣವೇ ಪರಿಹರಿಸಬೇಕು. ಜಿಲ್ಲಾಧಿಕಾರಿಗಳು ವಯಕ್ತಿಕ ಗಮನಹರಿಸಿ ಸಮಸ್ಯೆ ನಿವಾರಣೆಮಾಡಬೇಕು. ಗೊಬ್ಬರದ ಪೂರೈಕೆಗೆ ಸಮಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ನಿವಾರಿಸುವುದಾಗಿ ತಿಳಿಸಿದರು.

ಅನುದಾನ ಬೇಡಿಕೆ:

      ಮಳೆಹಾನಿ ಸೇರಿದಂತೆ ಜಿಲ್ಲೆಯ ವಿಪತ್ತುನಿರ್ವಹಣೆಗೆ ಬೇಕಾದ ಅನುದಾನ ಕುರಿತಂತೆ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್‍ನಿಂದ ಮರಣ ಪ್ರಮಾಣವನ್ನು ಕಡಿಮೆ ಮಾಡಬೇಕು. ಗ್ರಾಮ ಮಟ್ಟದಲ್ಲಿ ಪರೀಕ್ಷೆ ಹೆಚ್ಚು ಮಾಡಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಳ ಮಾಡಬೇಕು. ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.)ದಲ್ಲಿ ಪ್ರತಿನಿತ್ಯದ ಗಂಟಲು ದ್ರವ ಮಾದರಿ ಪರೀಕ್ಷೆಗಳ ಸಾಮಥ್ರ್ಯ ಹೆಚ್ಚಳಮಾಡಬೇಕು. ಈ ಪ್ರಯೋಗಾಲಯಕ್ಕೆ ರೂ.34 ಲಕ್ಷ ವೆಚ್ಚದಲ್ಲಿ ಮಂಜೂರಾಗಿರುವ 96 ವೆಲ್‍ನ ಅಟೋಮೆಟಿಕ್ ಆರ್.ಎನ್.ಎ. ಎಕ್ಸ್‍ಟ್ರಾಕ್ಟರ್ ಯಂತ್ರವನ್ನು ತ್ವರಿತವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಾಹಿತಿ ನೀಡಿ, ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಶಿಗ್ಗಾಂವ, ಸವಣೂರ ಹಾಗೂ ಹಾನಗಲ್‍ನ ಕೆಲ ಪ್ರದೇಶದಲ್ಲಿ ಸುರಿದ ಮಳೆಯ ಪ್ರಮಾಣವನ್ನು ವಿವರಿಸಿದರು. ವರದಾ ನದಿಯ ಕೂಡಲ ಸೇತುವೆಯಲ್ಲಿ ನೀರು ಓವರ್ ಫ್ಲೋ ಆಗಿದೆ. ಅಪಾಯ ಮಟ್ಟ ಮೀರಿಲ್ಲ. ವರದಾ ನದಿ ಪಾತ್ರದ 121 ಹಳ್ಳಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ನದಿ, ಹಳ್ಳ ಹಾಗೂ ಕೆರೆ ದಡದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ಗುರುತಿಸಲು ಈಗಾಗಲೇ ತಹಶೀಲ್ದಾರಗಳಿಗೆ ಸೂಚನೆ ನೀಡಲಾಗಿದೆ. ಎರಡು ದಿನದ 74 ಮನೆಗಳು ಭಾಗಶಃ ಹಾನಿಯಾಗಿವೆ. ಬ್ಯಾಡಗಿಯಲ್ಲಿ ಒಂದು ಮನೆ ಪೂರ್ಣ ಹಾಳಾಗಿದೆ. ಮಳೆಹಾನಿಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

     ವಿಡಿಯೋ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಶೀಲ್ದಾರಗಳು ಹಾಗೂ ವಿಡಿಯೋ ಸಂವಾದದ ಮೂಲಕ ಆಯಾ ತಾಲೂಕಾ ತಹಶೀಲ್ದಾರ, ಸವಣೂರ ಉಪವಿಭಾಗಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link