ಹೂವಿನಹಡಗಲಿ :
ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಗ್ರಾಮದಲ್ಲಿ ಹರಿಯುವ ಮಳೆನೀರು, ನದಿಗೆ ಹೋಗಲು ಪೈಪಲೈನ್ ಹುಳು ತುಂಬಿದ್ದರಿಂದ ಮನೆಗಳಿಗೆ ನುಗ್ಗಿ, ಧವಸ ಧಾನ್ಯ ನಷ್ಟವಾದ ಘಟನೆ ಸಂಭವಿಸಿದೆ.
ನದಿ ತೀರದ ಗ್ರಾಮವಾದ ಬ್ಯಾಲಹುಣ್ಸಿ ಗ್ರಾಮ, ಒಂದು ತಗ್ಗು ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲಿಯೂ ಕೂಡಾ ಇಂತಹ ಸಂಕಷ್ಟವನ್ನು ಇಲ್ಲಿನ ಜನತೆ ಅನುಭವಿಸಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬರುತ್ತಿದೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಛೇರಿಯ ಅಧಿಕಾರಿಗಳು ಪೈಪಲೈನ್ನಲ್ಲಿ ತುಂಬಿದ ಹೂಳನ್ನು ತೆಗೆಸಲು ನಿರ್ಲಕ್ಷ್ಯವಹಿಸಿದ್ದೆ ಮಳೆಯ ನೀರು ಮನೆಗೆ ನುಗ್ಗಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದು ಒಂದು ರೀತಿಯ ಬ್ಯಾಲಹುಣ್ಸಿ ಜನತೆಯ ಸಂಕಷ್ಟವಾದರೆ ಇನ್ನೊಂದು ರೀತಿಯಲ್ಲಿ ನದಿ ತೀರದ ಗ್ರಾಮವಾಗಿರುವುದರಿಂದ ತುಂಗಭದ್ರಾ ನದಿ ಸಂಪೂರ್ಣ ತುಂಬಿ ಹರಿದಾಗ ಗ್ರಾಮವು ಅರ್ಧದಷ್ಟು ಮುಳುಗಡೆಯಾದ ಪ್ರಸಂಗವು ಕೂಡಾ ಜರುಗಿದೆ. ಇದನ್ನರಿತ ಸರ್ಕಾರ ಈ ಹಿಂದೆ ಬ್ಯಾಲಹುಣ್ಸಿ ಗ್ರಾಮವನ್ನು ಸ್ಥಳಾಂತರಗೊಳಿಸಲು ಗ್ರಾಮದ ಪಕ್ಕದಲ್ಲಿಯೇ 10 ಎಕರೆ ಭೂಮಿಯನ್ನು ಖರೀದಿಸುವುದರ ಮೂಲಕ ಸ್ಥಳಾಂತರಕ್ಕೆ ಸರ್ಕಾರದ ಮಟ್ಟದಲ್ಲಿ ಎಲ್ಲಾ ಸಿದ್ದತೆಗಳನ್ನು ಕೂಡಾ ಮಾಡಿಕೊಂಡಾಗ ಗ್ರಾಮಸ್ಥರು ಸ್ಥಳಾಂತರವಾಗಲು ಒಪ್ಪದಿರುವುದರಿಂದ ಅನಿವಾರ್ಯವಾಗಿ ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ.
ಇನ್ನು ಮುಂದಾದರು ಎಚ್ಚೆತ್ತುಕೊಂಡಂತಹ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮಳೆ ಬಂದಾಗ ಗ್ರಾಮದಲ್ಲಿ ಹರಿಯುವ ಚರಂಡಿ ನೀರು, ನೇರವಾಗಿ ನದಿ ಸೇರುವಂತೆ ವ್ಯವಸ್ಥೆಯನ್ನು ಕಲ್ಪಿಸಬೇಕು, ಮತ್ತು ತಹಶೀಲ್ದಾರರು ಭೇಟಿನೀಡಿ, ಗ್ರಾಮಸ್ಥರ ಮನೆಗಳಿಗೆ ನೀರು ನುಗ್ಗಿ ಆದ ನಷ್ಟವನ್ನು ಸರ್ಕಾರದಿಂದ ಭರಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
