ಹಿರಿಯೂರು :
ಮಕ್ಕಳಿಗೆ ಆಟದ ಜೊತೆಯಲ್ಲಿ ಪಾಠವನ್ನು ಹೇಳಿಕೊಡುವ ತರಬೇತಿಯನ್ನು ನೀಡಲು ಒಂದು ತಿಂಗಳ ಕಾಲ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ನಗರಸಭೆ ಸದಸ್ಯ ಜಿ.ಪ್ರೇಮ್ಕುಮಾರ್ ಹೇಳಿದರು.
ನಗರದ ವೇದಾವತಿ ನಗರದ ನೂರುಅಡಿ ರಸ್ತೆಯಲ್ಲಿರುವ ವೈಭವ್ ಪಾರ್ಟಿಹಾಲ್ನಲ್ಲಿ ವಿವಾನ್ ಡ್ಯಾನ್ಸ್ ಕ್ಲಾಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಒಂದು ತಿಂಗಳ ಬೇಸಿಗೆ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಬೇಸಿಗೆ ರಜೆ ಬಂದರೆ ಸಾಕು ಕೆಲವು ಪೋಷಕರು ಯಾವುದಾದರೂ ಊರುಗಳಿಗೆ ಕಳುಹಿಸಿ ವಿಶ್ರಾಂತಿ ಪಡೆಯಬಹುದು ಎನ್ನುತ್ತಾರೆ. ಆದರೆ ಇನ್ನೂ ಕೆಲವರು ಅವರಿಗೆ ಸೂಕ್ತ ತರಬೇತಿ ನೀಡಲು ಮುಂದಾಗುತ್ತಾರೆ. ವರ್ಷದಲ್ಲಿ ಹತ್ತು ತಿಂಗಳು ಕಾಲ ಬರೀ ಶಿಕ್ಷಣ ಕಲಿಯುವ ಮಕ್ಕಳಿಗೆ ಸ್ವಲ್ಪ ಬದಲಾವಣೆಯೊಂದಿಗೆ ಆಡುತ್ತಾ-ನಲಿಯುತ್ತಾ ಕಲಿಯುವಂತಹ ಇಂತಹ ತರಬೇತಿ ಶಿಬಿರಗಳಿಗೆ ಕಳುಹಿಸುವ ಮೂಲಕ ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಗುರುತಿಸಲು ಸಹಾಯಕವಾಗುತ್ತವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್ ಮಾತನಾಡಿ, ಒಂದು ಕಾಲದಲ್ಲಿ ಮಕ್ಕಳಿಗೆ ನಾನಾ ರೀತಿಯ ತರಬೇತಿ ಪಡೆಯಲು ಲಕ್ಷಗಟ್ಟಲೇ ಹಣ ವೆಚ್ಚ ಮಾಡಿಕೊಂಡು ದೊಡ್ಡ ನಗರಗಳಿಗೆ ಹೋಗಬೇಕಾಗಿತ್ತು. ಆದರೆ ಇಂದು ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಅವಶ್ಯಕವಾದ ವಿಷಯಗಳ ಬಗ್ಗೆ ನಮ್ಮ ತಾಲೂಕಿನಲ್ಲಿಯೇ ತರಬೇತಿ ಸಿಗುತ್ತಿರುವುದು ನಿಜಕ್ಕೂ ಸಂತೋಷದಾಯಕ. ಆದ್ದರಿಂದ ಪೋಷಕರು ಈ ಶಿಬಿರದ ಉಪಯೋಗ ಪಡೆದುಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿರಿ ಎಂದರು.
ಶಿಬಿರದ ಸಂಚಾಲಕ ಎಸ್.ನವೀನ್ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳಿಗೆ ಒಂದು ತಿಂಗಳಲ್ಲಿ ನೃತ್ಯ, ಕ್ರಾಫ್ಟ್, ಸ್ಕೇಟಿಂಗ್, ಪ್ರಾಥಮಿಕ ನಟನೆಯ ತರಬೇತಿ, ಕರಾಟೆ, ಚಿತ್ರಕಲೆ, ಸ್ಪೋಕನ್ ಇಂಗ್ಲೀಷ್, ಧ್ಯಾನ ಹಾಗೂ ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ ಧಾರವಾಹಿ ಖ್ಯಾತಿಯ ಅನಿರುದ್ಧ, ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್.ರಾಘವೇಂದ್ರ, ಉಪನ್ಯಾಸಕ ಪ್ರಕಾಶ್, ಎಂ.ಮೂಡಲಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
