ದಾವಣಗೆರೆ:
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಉಗ್ರರ ದಾಳಿ ನಡೆದಿದ್ದು, ದೇಶದ 500ಕ್ಕೂ ಹೆಚ್ಚು ವೀರಯೋಧರು ಹುತಾತ್ಮರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಉಗ್ರರ ದಾಳಿಗಳನ್ನು ಅಂಕಿ ಅಂಶಗಳ ಸಮೇತ ವಿವರಿಸಿರುವ ಅವರು, ಕಂದಹಾರ್ ವಿಮಾನ ಹೈಜಾಕ್, ಅಕ್ಷರ ಧಾಮದ ಮೇಲೆ ದಾಳಿ, ರಘುನಾಥ ಮಂದಿರದ ಮೇಲೆ ದಾಳಿ, ಕಾರ್ಗಿಲ್ ದಾಳಿ, ದೇಶದ ಸಂಸತ್ತಿನ ಮೇಲೆ ದಾಳಿ, ಅಮರನಾಥ ಯಾತ್ರಿಗಳ ಮೇಲೆ ದಾಳಿ (2002), ಗುಜರಾಥ್ನಲ್ಲಿ ಗೋದ್ರಾ ಹತ್ಯಾಕಾಂಡ, ಪಠಾಣ್ ಕೋಟ್ ಮೇಲೆ ದಾಳಿ, ಉರಿ ದಾಳಿ, ಅಮರನಾಥ ಯಾತ್ರಿಗಳ ಮೇಲೆ ದಾಳಿ(2017), ಪುಲ್ವಾಮ ದಾಳಿ ಸೇರಿದಂತೆ ಉಗ್ರರು ಹೆಚ್ಚಿನ ಅನಾಹುತವನ್ನು ದೇಶಕ್ಕೆ ಬಿಜೆಪಿ ಆಡಳಿತ ಸಂದರ್ಭ ಮಾಡಿದ್ದಾರೆ ಎಂದಿದ್ದಾರೆ. 44 ಯೋಧರ ಸಾವಿಗೆ ಕಾರಣವಾದ ಉಗ್ರರ ದಾಳಿ ನಡೆಯಲು ಕೇಂದ್ರ ಸರ್ಕಾರ ಗುಪ್ತಚರ ವೈಫಲ್ಯದ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
ಏಕೆಂದರೆ, ನಮ್ಮ ದೇಶದ ವಿಮಾನ ನಿಲ್ದಾಣಗಳಲ್ಲಿ ಒಂದು ನೈಲ್ಕಟ್ಟರ್, ಪವರ್ಬ್ಯಾಂಕ್ ಕೊಂಡ್ಯೊಯ್ಯಲು ಸಾಧ್ಯವಿಲ್ಲ. ಅಷ್ಟೊಂದು ಭದ್ರತೆ ಇರುವಾಗ ದೇಶದ ಅತ್ಯಂತ ಸೂಕ್ಷ್ಮಪ್ರದೇಶ ಕಾಶ್ಮೀರ ಗಡಿ ಭಾಗದ ಪುಲ್ವಾಮದಲ್ಲಿ 300 ಕೆಜಿ ಆರ್ಡಿಎಕ್ಸ್ ಬಾಂಬ್ ದೊಡ್ಡ ವ್ಯಾನ್ನಲ್ಲಿ ತರಲು ಹೇಗೆ ಸಾಧ್ಯವಾಯಿತು ಎಂಬುದರ ಸತ್ಯಾಸತ್ಯತೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮೋದಿ ಆಡಳಿತದಲ್ಲಿ ದೇಶದ ಒಳಗಾಗಲೀ, ಗಡಿಭಾಗದಲ್ಲಾಗಲೀ ಸುರಕ್ಷತೆ ಇಲ್ಲದಂತಾಗಿದೆ. ದಿನನಿತ್ಯ ನಮ್ಮ ಯೋಧರು ಪ್ರಾಣ ತೆರುವಂತಾಗಿದೆ. ಮೋದಿ ದುರಾಡಳಿತದಿಂದ ರಫೇಲ್ ಯುದ್ದವಿಮಾನಗಳು ನಿಗದಿತ ಸಮಯದಲ್ಲಿ ದೇಶಕ್ಕೆ ಬರಲಿಲ್ಲ ಎಂದಿರುವ ಅವರು, ಅಧಿಕಾರದ ಖುರ್ಚಿಗಾಗಿ ಮೋದಿ ದಲಿತರ ಕಾಲು ತೊಳೆಯುವ ಬೂಟಾಟಿಕೆಯನ್ನು ಅರಿಯದಷ್ಟು ದಲಿತ ವರ್ಗ ದಡ್ಡರಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
