ವಾಣಿಜ್ಯ ಮಳಿಗೆಗಳ ವಿವಾದ ಡಿಸಿ ಅಂಗಳಕ್ಕೆ

ಹುಳಿಯಾರು

       ಪಂಚಾಯಿತಿಗೆ ಸೇರಿರುವ ವಾಣಿಜ್ಯ ಮಳಿಗೆಯಲ್ಲಿನ ಅವಧಿ ಮುಗಿದಿರರುವ ಹಿನ್ನೆಲೆಯಲ್ಲಿ ಹಾಲಿ ಮಳಿಗೆದಾರರನ್ನೇ ಮುಂದುವರಿಸಬೇಕು ಅಥವಾ ಮರು ಹರಾಜು ಮಾಡಬೇಕೋ ಎಂಬ ವಿವಾದಕ್ಕೀಡಾಗಿದ್ದ ವಿಚಾರವನ್ನು ಕಾನೂನಾತ್ಮಕವಾಗಿ ಜಿಲ್ಲಾಧಿಕಾರಿಗಳೆ ಬಗೆಹರಿಸುವಂತೆ ಸರ್ವಾನುಮತದಿಂದ ಒಪ್ಪಿಗೆ ನೀಡುವುದರ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಳಿಗೆವಿಚಾರ ಒಂದು ತಾರ್ಕಿಕ ಅಂತ್ಯ ಕಂಡಂತಾಯಿತು.

        ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಶಾಸಕ ಜೆ.ಸಿ.ಮಾಧುಸ್ವಾಮಿ ಉಪಸ್ಥಿತಿಯಲ್ಲಿ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಳಿಗೆ ವಿಚಾರವಾಗಿ ಪರ-ವಿರೋಧ ಮಾತನಾಡುವ ಸಂದರ್ಭದಲ್ಲಿ ಶಾಸಕರು ಮಧ್ಯಪ್ರವೇಶಿಸಿ ನಾವೆಲ್ಲ ಚುನಾಯಿತ ಪ್ರತಿನಿಧಿಗಳು ವ್ಯಾಪಾರಸ್ಥರ ಪರ-ವಿರೋಧ ಮಾತನಾಡಿ ನಿಷ್ಠುರವಾಗುವುದರ ಬದಲು ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಹಸ್ತಾಂತರಿಸುವುದು ಸೂಕ್ತ ಎಂದರಲ್ಲದೆ, ಮಳಿಗೆಗಳನ್ನು ಮರುಹರಾಜು ಮಾಡುವಿರೋ ಅಥವಾ ಇರುವವರೆಗೆಯೇ ಬಾಡಿಗೆ ಹೆಚ್ಚು ಮಾಡಿ ಅವರನ್ನೇ ಮುಂದುವರಿಸಲು ಒಪ್ಪಿಗೆ ನೀಡುವಿರೋ ಒಟ್ಟಿನಲ್ಲಿ ಪಂಚಾಯಿತಿಗೆ ಆದಾಯ ಬರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದರು.

         ಆದರೆ ಮೂಲ ಮಳಿಗೆದಾರರು ಹೆಚ್ಚು ಹಣ ಪಡೆದು ಬೇರೆಯವರಿಗೆ ಪರಬಾರೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಪಂಚಾಯಿತಿ ಮಳಿಗೆಯನ್ನು ಲಕ್ಷಾಂತರ ರೂಪಾಯಿಕೊಟ್ಟು ಇಲ್ಲಿ ಬಂದು ಸೇರಿದವರನ್ನು ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಅಂಗಡಿಗಳನ್ನು ಮರು ಹರಾಜು ಮಾಡುವಂತೆ ಖಡಕ್ಕಾಗಿ ತಿಳಿಸಿದರು.

        ಫುಟ್‍ಪಾತ್ ಅಂಗಡಿ ತೆರವು: ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಬಸ್ ಶೆಲ್ಟರ್ ಹಾಗೂ ರಾಜಕುಮಾರ್ ರಸ್ತೆಯಲ್ಲಿ ಫುಟ್‍ಪಾತ್ ಆಕ್ರಮಿಸಿಕೊಂಡಿರುವ ಗೂಡಂಗಡಿಯವರನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ರಂಗನಾಥಸ್ವಾಮಿ ದೇವಸ್ಥಾನ, ರಾಮಾಹಾಲ್ ಎದುರು ಕೂಡ ಪಾದಚಾರಿಗಳಿಗೆ ಅಡ್ಡಿಯಾಗುತ್ತಿರುವ ಎಲ್ಲಾ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಕೆಲವು ಸದಸ್ಯರು ಒತ್ತಾಯಿಸಿದರು. ಇದರೊಟ್ಟಿಗೆ ಪಟ್ಟಣ ಪೂರ ಪಂಚಾಯಿತಿ ಜಾಗದಲ್ಲಿ ಆಕ್ರಮಿಸಿಕೊಂಡಿರುವ ಎಲ್ಲ ಅಂಗಡಿಗಳನ್ನು ಕೂಡ ತೆರವುಗೊಳಿಸುವಂತೆ ಸಹ ಮತ್ತೆ ಕೆಲವು ಸದಸ್ಯರು ಸಲಹೆ ನೀಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link