ಚಿತ್ರದುರ್ಗ:
ಕಂಕಣ ಸೂರ್ಯಗ್ರಹಣವನ್ನು ಗುರುವಾರ ನಗರದ ಎಲ್ಲೆಡೆ ಸಾರ್ವಜನಿಕರು ಹಾಗೂ ಶಾಲೆಗಳಲ್ಲಿ ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.ವಾಸವಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಒಟ್ಟಿಗೆ ಸೇರಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿ ಗ್ರಹಣದ ಬಗ್ಗೆಯಿರುವ ಮೂಢನಂಬಿಕೆಗಳ ನಿವಾರಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಹಾಗೂ ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಇವರುಗಳು ವಿದ್ಯಾವಿಕಾಸ ಶಾಲೆಯಲ್ಲಿ ನೂರಾರು ಮಕ್ಕಳೊಂದಿಗೆ ಸೇರಿಕೊಂಡು ವಿಸ್ಮಯಕಾರಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿ ಅಪರೂಪವಾಗಿ ಗೋಚರಿಸುವ ಇಂತಹ ಕ್ಷಣವನ್ನು ಮಿಸ್ ಮಾಡಿಕೊಳ್ಳದೆ ವೀಕ್ಷಿಸಬೇಕು ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.ದಿನವಿಡಿ ಒತ್ತಡದ ನಡುವೆಯೆ ಕರ್ತವ್ಯ ನಿರ್ವಹಿಸುವ ಪೊಲೀಸರು ಕೂಡ ನಗರ ಪೊಲೀಸ್ ಠಾಣೆ ಆವರಣದಲ್ಲಿ ಕನ್ನಡಕದ ಮೂಲಕ ಸೂರ್ಯಗ್ರಹಣ ವೀಕ್ಷಿಸಿದರು.
ಸೂರ್ಯಗ್ರಹಣ ನಿಮಿತ್ತ ನಗರದ ಕೆಲವು ಅಂಗಡಿ ಹಾಗೂ ಹೋಟೆಲ್ಗಳು ಮುಚ್ಚಿದ್ದವು. ಪಾಲಕರುಗಳು ತಮ್ಮ ಮಕ್ಕಳನ್ನು ಜೋಪಾನವಾಗಿ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದುದು ಅಲ್ಲಲ್ಲಿ ಕಂಡು ಬಂದಿತು.
ಮುರುಘಾಮಠದಲ್ಲಿ
ಇಲ್ಲಿನ ಮುರುಘಾಮಠದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಮಠಾಧೀಶರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡು ಕುತೂಹಲದಿಂದ ಸೂರ್ಯಗ್ರಹಣ ವೀಕ್ಷಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾಶರಣರು, . ಇದೊಂದು ಅಪೂರ್ವ ಸಂದರ್ಭ. ವಿಸ್ಮಯಕಾರಿ ಸಂದರ್ಭವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಬಾರದು. ಮನೆಗಳಲ್ಲಿ ಒಳಗಡೆ ಇರುವ ನೀರನ್ನು ಚೆಲ್ಲಬಹುದು ಆದರೆ ಕೆರೆ ನೀರು, ಸಮುದ್ರ ನೀರನ್ನು ಚೆಲ್ಲಲು ಸಾಧ್ಯವೆ? ನೀರು ಅಮೂಲ್ಯವಾದದ್ದು. ನೀರನ್ನು ಚೆಲ್ಲಿ ಅವೈಜ್ಞಾನಿಕವಾದದ್ದನ್ನು ಯಾರೂ ಮಾಡಬಾರದು. ಮೂಢನಂಬಿಕೆಗೆ ಒಳಗಾಗಬಾರದು. ಉತ್ತಮ ನಂಬಿಕೆಗಳನ್ನು ಆಚರಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವ ರಮಾನಂದ ಸ್ವಾಮಿಗಳು, ಶ್ರೀ ಕೇತೇಶ್ವರ ಸ್ವಾಮಿಗಳು, ಮೌಲ್ವಿಗಳಾದ ಮಹಮ್ಮದ್ ಷಫಿ, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವಕಿರಣ ಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ರಹಮತ್ಉಲ್ಲಾ, ಇನ್ನಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ