ಸಿವಿಲ್ ನ್ಯಾಯಾಧೀಶರಿಂದ ಕೊರೊನಾ ತಡೆ ಸಿದ್ದತೆಗಳ ಪರಿಶೀಲನೆ.

ಕೂಡ್ಲಿಗಿ:

      ಕೊರೊನಾ ತಡೆಯಲು ತಾಲ್ಲೂಕು ಆಡಳಿತ ಕೈಗೊಂಡಿರುವ ಸಿದ್ದತೆಗಳ ಕುರಿತು ಸ್ಥಳೀಯ ಸಿವಿಲ್ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಬುಧವಾರ ಪಟ್ಟಣದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

     ನ್ಯಾಯಾಲಯದಿಂದ ಹೊರಟ ಅವರು, ಬಸ್ ನಿಲ್ದಾಣದಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿ, ಬಡವರು ಮತ್ತು ನಿರ್ಗತಿಕರಿಗಾಗಿ ಊಟ ತಯಾರಿಸಲು ಹಾಗೂ ಹೋಂ ಕ್ವಾರಂಟೈನ್ ಗಾಗಿ ಮೀಸಲಿರಿ ವಸತಿ ನಿಲಯಕ್ಕೆ ಭೇಟಿ ನೀಡಿ, ವಸತಿ ನಿಲಯದಲ್ಲಿನ ಅಡುಗೆ ಕೋಣೆ, ಕೊಠಡಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರತಿ ಕೊಠಡಿಯಲ್ಲಿ ಮೂರು ಜನರು ತಂಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

      ನಂತರ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ, ತರಕಾರಿ ಮಾರಾಟಗಾರರೊಂದಿಗೆ ಚರ್ಚೆ ನಡೆಸಿ, ಕೊರೊನಾ ಹರಡದಂತೆ ಗ್ರಾಹಕರಿಂದ ಅಂತರ ಕಾಯ್ದುಕೊಂಡು ತರಕಾರಿ ಮಾರಾಟ ಮಾಡಬೇಕು. ಅಂಗಡಿ ಮುಂದೆ ಹಾಕಿರುವ ಬಾಕ್ಸ್ ನಲ್ಲಿ ನಿಲ್ಲದ ಯಾರಿಗೂ ತರಕಾರಿ ನೀಡಬಾರದು ಎಂದು ಹೇಳಿ, ಕೊರೊನಾ ಜಾಗೃತಿಯ ಕರ ಪತ್ರಗಳನ್ನು ವಿತರಿಸಿ ಅದರಲ್ಲಿರುವ ಸಲಹೆಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

     ತರಕಾರಿ ಸರಿಯಾದ ಬೆಲೆಗೆ ಸಿಗುತ್ತದೆ ಆದರೆ, ದಿನಸಿಯನ್ನು ಬೇಕಾ ಬಿಟ್ಟಿಯಾಗಿ ಬೆಲೆ ಏರಿಕೆ ಮಾಡಿ ಮಾರಲಾಗುತ್ತಿದೆ ಎಂದು ಸ್ಥಳದಲ್ಲಿದ ಗ್ರಹಕರೊಬ್ಬರು ನ್ಯಾಯಾಧೀಶರ ಬಳಿ ದೂರಿದರು. ದಿನಸಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಮಗೂ ದೂರುಗಳು ಬಂದಿದ್ದು, ಸಭೆ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ಹೇಳಿದರು.
ನಂತರ ಇಂದಿರಾ ಕ್ಯಾಂಟೀನ್ ಗೆ ಹೋದ ನ್ಯಾಯಾಧೀಶರು, ತಿಂಡಿ ಹಾಗೂ ಊಟ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು.

       ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ನೂತನವಾಗಿ ಆರಂಭ ಮಾಡಿರುವ ಜ್ವರ ಪೀಡಿತರ ತಪಾಸಣಾ ವಾರ್ಡನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸೆನಿಟೈಸರ್ ವಿತರಿಸಿದರು.

      ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ತಾಲ್ಲೂಕು ಆರೋಗ್ಯಧಿಕಾರಿ ಡಾ. ಷಣ್ಮುಖ ನಾಯ್ಕ್, ವೈದ್ಯಾಧಿಕಾರಿ ಡಾ. ವಿನಯ್, ಡಿವೈಎಸ್ಪಿ ಎಂ.ಸಿ. ಶಿವಕುಮಾರ್, ಸಿಪಿಐ ಪಂಪನಗೌಡ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಕೃದ್ಧೀನ್ ಸಾಬ್, ವಕೀಲರ ಸಂಘದ ಅಧ್ಯಕ್ಷ ಜಿ. ಹೊನ್ನೂರಪ್ಪ, ವಕೀಲರಾದ ಡಿ.ಕೆ.ಬಿ. ರಾಜ, ಜಿ.ಎಂ. ಮಲ್ಲಿಕಾರ್ಜುನ ಸ್ವಾಮಿ, ಜಯರಂ ನಾಗರಾಜ, ಪಟ್ಟಣ ಪಂಚಾಯ್ತಿ ಸದಸ್ಯರಾದ ಸೈಯದ್ ಶುಕೂರ್, ಶಿರಿಬಿ ಮಂಜುನಾಥ ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link