ಬೆಂಗಳೂರು:
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಮೀಸಲಾತಿ ಕೊಟ್ಟಿರುವುದು ಸಂವಿಧಾನ ವಿರೋಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಒಕ್ಕೂಟ ಸಭೆ ಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಮೀಸಲಾತಿ ಕೊಟ್ಟಿರುವುದು ಸಂವಿಧಾನ ವಿರೋಧಿ. ಇದು ಸಂವಿಧಾನದ ಆರ್ಟಿಕಲ್ 14,15.16 ಉಲ್ಲಂಘನೆಯಲ್ಲವೆ ? ಇದಕ್ಕೆ ಯಾರು ವಿರೊಧಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗದ ಸಮೀಕ್ಷೆಯನ್ನು ಯಾರೆಲ್ಲಾ ವಿರೋಧಿಸಿದರು ಅಂತ ಎಲ್ಲರಿಗೂ ಗೊತ್ತಿದೆ. ಸಂವಿಧಾನದ 73, 74 ತಿದ್ದುಪಡಿಯಾದ ಮೇಲೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ದೊರೆತಿದೆ. ಮಂಡಲ್ ವರದಿ ಆಧಾರದಲ್ಲಿ ಪ್ರತಿ ರಾಜ್ಯದಲ್ಲಿಯೂ ಹಿಂದುಳಿದ ವರ್ಗಗಳ ಆಯೋಗ ಇರಬೇಕು. ಆಯೋಗ ಸಂವಿಧಾನಾತ್ಮಕವಾಗಿ ಕೆಲಸ.ಮಾಡುತ್ತದೆ. ಅದು ಯಾವತ್ತೂ ಖಾಲಿ ಇರಬಾರದು. ಅಧ್ಯಕ್ಷರಿಲ್ಲದೆ ಒಂದು ವರ್ಷ ಕಳೆಯಿತು. ಯಾಕೆ ಇನ್ನೂ ಅಧ್ಯಕ್ಷರ ನೇಮಕ ಮಾಡಿಲ್ಲ ಎಂದು ಪ್ರಶ್ನಿಸಿದರು.
ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಾವ ಜಾತಿಯ ಜನರು ಎಷ್ಟಿದ್ದಾರೆ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿತ್ತು. ಪ್ರತಿಯೊಬ್ಬರು ತಮ್ಮ ಜಾತಿಯಲ್ಲಿ 50, 60 ಲಕ್ಷ ಇದ್ದಾರೆ ಅಂತ ಹೇಳುತ್ತಾರೆ. ಅದನ್ನು ತಿಳಿಯಲು ಈ ಸಮಿತಿ ರಚನೆ ಮಾಡಿದ್ದೇ ನಾನು. 1931ರಲ್ಲಿ ಜಾತಿ ಸಮೀಕ್ಷೆಯಾಗಿತ್ತು. ಆ ನಂತರ ಜಾತಿ ಸಮೀಕ್ಷೆ ನಡೆಸಲಿಲ್ಲ. ಜಾತಿ ಸಮೀಕ್ಷೆ ಅಪರಾಧ ಅಲ್ಲ. ನಾನು ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ವರದಿ ಸಿದ್ಧವಾಗಿರಲಿಲ್ಲ. ವರದಿ ಸಿದ್ದವಾಗಿದ್ದರೆ ನಾನೇ ಜಾರಿ ಮಾಡುತ್ತಿದ್ದೆ ಎಂದರು.
ಮೈತ್ರಿ ಸರ್ಕಾರದಲ್ಲಿ ಪುಟ್ಟರಂಗ ಶೆಟ್ಟಿ ಹಿಂದುಳಿದ ವರ್ಗದ ಸಚಿವರಾಗಿದ್ದರು, ಅವರಿಗೆ ವರದಿ ಸ್ವೀಕರಿಸದಂತೆ ಕುಮಾರಸ್ವಾಮಿ ಹೆದರಿಸಿದ್ದರು. ಈಶ್ವರಪ್ಪ ಈ ಸತ್ಯ ಅರಿಯಬೇಕು. ಇದು ಕೇವಲ ಹಿಂದುಳಿದವರಿಗೆ ಮಾತ್ರ ಸೀಮಿತವಾಗಿಲ್ಲ ಸಮಾಜದ ಎಲ್ಲ ವರ್ಗದವರ ಸಮೀಕ್ಷೆ ಇದೆ. ಸಮೀಕ್ಷೆ ಬೆಂಗಳೂರಿನಲ್ಲಿ ಶೇ 84 ರಷ್ಟಾಗಿದೆ. ಉಳಿದ ಭಾಗದಲ್ಲಿ ಶೆ 100% ಸಮೀಕ್ಷೆಯಾಗಿದೆ. ಎಲ್ಲರಿಗೂ ಆದಾಯ ಸಮಾನ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಅಸಮಾನತೆ ನಿರಂತರ ಮುಂದುವರೆಯುತ್ತದೆ.
ಈಗ ಬಿಜೆಪಿ ಅಧಿಕಾರದಲ್ಲಿದೆ. ವರದಿ ಸ್ವೀಕರಿಸಿ ಸಂಪುಟದಲ್ಲಿ ಒಪ್ಪಿಗೆ ಪಡೆದು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಅಂದರೆ ರಾಜಕೀಯ ಮಾಡಿದ ಹಾಗೆನಾ? ನೀವು ಜಾರಿ ಮಾಡದಿದ್ಸರೂ ಸುಮ್ಮನಿರಬೇಕಾ? ಈ ಸಮೀಕ್ಷೆಗೆ ಹಣ ವೆಚ್ಚ ಮಾಡಿರುವುದು ವ್ಯರ್ಥವಾಗಿಲ್ಲ. ನಮ್ಮ ರಾಜ್ಯದಲ್ಲಿ 2.5 ಲಕ್ಷ ಕೋಟಿ ಬಜೆಟ್ ಇದೆ. 4 ಲಕ್ಷ.ಕೋಟಿ ಸಾಲ ಇದೆ. ಈ ವರದಿ ದೇಶದಲ್ಲಿ ಮಹತ್ವದ ದಾಖಲೆಯಾಗಿ.ಉಳಿಯುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/meeting.gif)