ಬೆಂಗಳೂರು
ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಉಪಚುನಾವಣೆಗೆ ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಭವಿಷ್ಯ ನುಡಿದಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರು ಬದಲಾವಣೆಯಾಗಿಲ್ಲ. ಮತದಾರರು ಎಲ್ಲಿಯೂ ಹೋಗಿಲ್ಲ. ಮತದಾರರು ಪಕ್ಷದ ಪರವಾಗಿಯೇ ಇದ್ದಾರೆ. ಅಲ್ಲಿ ಉಂಡು ಹೋದ ಕೊಂಡು ಹೋದ ಎನ್ನುವಂತಾಗಿದೆ. ಮುನಿರತ್ನ ನನ್ನ ವೈರಿಯಲ್ಲ. ಬಿಜೆಪಿ ನಮ್ಮ ವೈರಿ. ಮುನಿರತ್ನಗೆ ಟಿಕೆಟ್ ಸಿಗುವುದು ಅನುಮಾನ. ಅಚ್ಚರಿಯನ್ನು ಕಾದು ನೋಡಿ ಏನಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ನಾಯಕರು ಸಭೆ ನಡೆಸಿ ಚರ್ಚಿಸಿ ಪಕ್ಷದ ಹೈಕಮಾಂಡ್ಗೆ ಅದನ್ನು ಕಳುಹಿಸಲಾಗುವುದು. ಸಮರ್ಥವಾಗಿ ಕೆಲಸ ಮಾಡುವವರನ್ನು ಕಣಕ್ಕಿಳಿಸುತ್ತೇವೆ. ಜೆಡಿಎಸ್ನವರು ನನ್ನ ಜೊತೆ ಚೆನ್ನಾಗಿದ್ದಾರೆ ಎಂದರು.
ಮಾಗಡಿ ಬಾಲಕೃಷ್ಣ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುರೇಶ್, ಹಲವರ ಹೆಸರು ಚರ್ಚೆಯಾಗುತ್ತಿದೆ. ಸದ್ಯಕ್ಕೆ ಹೈಕಮಾಂಡ್ ಅಂತಿಮಗೊಳಿಸುವವರೆಗೂ ಇಂತಹವರೇ ಅಭ್ಯರ್ಥಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯಾರಾದರೂ ಆಗಬಹುದು, ಯುದ್ಧ ಪ್ರಾರಂಭವಾಗಿದೆ. ಸೈನಿಕರನ್ನು ಕರೆದುಕೊಂಡು ಹೋಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಬೆಂಗಳೂರು ಉಗ್ರರ ಹಬ್ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಕಿಡಿಕಾರಿದ ಡಿ.ಕೆ.ಸುರೇಶ್, ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿಯಾಗಿದ್ದು, ಇಲ್ಲಿ ಎಲ್ಲರೂ ಇದ್ದಾರೆ. ಇಲ್ಲಿ ಅವಕಾಶವಿದೆ. ಉಗ್ರರ ಹಬ್ ಅನ್ನುವ ಮಾತನ್ನು ತೇಜಸ್ವಿ ಸೂರ್ಯ ಹಿಂಪಡೆಯಬೇಕು. ಬರೀ ಪ್ರಚಾರಕ್ಕಾಗಿ ತೇಜಸ್ವಿ ಸೂರ್ಯ ಮಾತನಾಡುವುದು ಸರಿಯಲ್ಲ. ನೀಡಿರುವ ಹೇಳಿಕೆಗೆ ತೇಜಸ್ವಿ ಸೂರ್ಯ ಕ್ಷಮೆಯಾಚಿಸದೆ ಹೋದರೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಡ್ರಗ್ಸ್ ವಿಚಾರವನ್ನು ಚುನಾವಣಾ ಗಿಮಿಕ್ಗೆ ಬಳಸಿಕೊಳ್ಳಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಇಲ್ಲಿಯವರೆಗೆ ಸಿನಿಮಾರಂಗ ತೋರಿಸುತ್ತಿದ್ದರು. ಈಗ ರಾಜಕೀಯಕ್ಕೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಪೊಲೀಸರು ಇದನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಉಪಚುನಾವಣೆಗೆ ಇದನ್ನು ಬಳಸಿಕೊಳ್ಳುತ್ತಿದ್ದಾರೆಂದು ಡಿ.ಕೆ.ಸುರೇಶ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/DK-suresh-1569858384.gif)