ತುಮಕೂರು: ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ನಿರ್ಮಾಣ…!

ತುಮಕೂರು:

    ಡಾ.ರಾಧಾಕೃಷ್ಣನ್ ರಸ್ತೆಯನ್ನು ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯನ್ನು ಚತುಷ್ಪ್ಪಥ ರಸ್ತೆಯಾಗಿ ಮಾರ್ಪಡಿಸುತ್ತಿದ್ದು, ಇನ್ನು ಕೇವಲ 3 ವಾರಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

    ಈ ನಡುವೆ ಈ ಭಾಗದ ಸಾರ್ವಜನಿಕರು ಈ ರಸ್ತೆಯ ಬಗ್ಗೆ ಅಪಸ್ವರ ಎತ್ತಿದ್ದು, ಎರಡೂ ಕಡೆ ಫುಟ್‍ಪಾತ್ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಜನನಿಬಿಡ ಆಗಿರುವುದರಿಂದ ಎಲ್ಲಾದರೂ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿತ್ತು. ಕೊನೇಪಕ್ಷ ಎರಡೂ ಕಡೆ ಇರುವ ಫುಟ್‍ಪಾತ್‍ನಲ್ಲಿ ಒಂದನ್ನು ಉಳಿಸಿಕೊಂಡು ಮತ್ತೊಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿತ್ತು. ಆದರೆ ಇದಾವುದಕ್ಕೂ ಗಮನ ಹರಿಸದ ಕಾರಣ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಎಡೆಮಾಡಿಕೊಡಲಿದೆ ಎಂದಿದ್ದಾರೆ.

    ಎರಡೂ ಕಡೆ ಫುಟ್‍ಪಾತ್‍ಗಾಗಿ ಸಾಕಷ್ಟು ಜಾಗವನ್ನು ಪಡೆಯಲಾಗಿದೆ. ಇದರ ಮಧ್ಯೆ ಪ್ಲಾಂಟೇಷನ್ ಸಹ ಮಾಡಲಾಗುತ್ತಿದೆ. ಎಲ್ಲವೂ ಅನಗತ್ಯವಾಗಿ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ಈ ಭಾಗದ ಜನರಿಗೆ ಅನುಕೂಲವಾಗುವ ಯಾವುದೇ ವ್ಯವಸ್ಥೆ ಇಲ್ಲಿ ಕಂಡು ಬರುತ್ತಿಲ್ಲ. ವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ರಸ್ತೆಯ ಬದಿಯಲ್ಲಿ ಪದೆ ಪದೇ ರಸ್ತೆ ಅಗೆತ ಮಾಡಲಾಗಿ ಸಾಕಷ್ಟು ಹಾನಿಯಾಗಿದೆ. ಸ್ಮಾರ್ಟ್‍ಸಿಟಿ ಮತ್ತು ನಗರ ಪಾಲಿಕೆ ಎರಡೂ ಕಡೆಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಈ ಭಾಗದ ಜನತೆ ಪರಿತಪಿಸುವಂತಾಗಿದೆ ಎಂದಿದ್ದಾರೆ.

   ರಸ್ತೆ ನಡುವೆ ವಿಭಜಕವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಹಿರಿಯ ನಾಗರಿಕರು, ವಾಯು ವಿಹಾರಿಗಳು ಕುಳಿತು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಲ್ಯಾಂಡ್ ಸ್ಕೇಪಿಂಗ್, ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಇದೆಲ್ಲವೂ ಸರಿ. ಆದರೆ ರಸ್ತೆ ಕಿರಿದಾಗಿ ಎರಡೂ ಕಡೆ ವಾಹನ ಸಂಚಾರ ಆರಂಭವಾದಾಗ ಇಲ್ಲಿನ ಸಮಸ್ಯೆ ಏನೆಂಬುದು ಅರ್ಥವಾಗುತ್ತದೆ. ನಗರ ಸಾರಿಗೆ ಬಸ್‍ಗಳು ಈ ಭಾಗದಲ್ಲಿ ಓಡಾಡುವಾಗ ರಸ್ತೆ ಕಿಷ್ಕಿಂಧೆÉಯಾಗಿ ಮಾರ್ಪಡುತ್ತದೆ. ಇಂತಹ ಪರಿಸ್ಥಿತಿ ಇರುವಾಗ ರಸ್ತೆಯ ನಡುವೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿರುವುದು ಯಾವ ಘನಂದಾರಿ ಕೆಲಸ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link