ಬೆಂಗಳೂರು
ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ನೆರವಾಗಲಿ ಎಂದು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ನೇಮಕ ಮಾಡಲಾಗಿದೆ. ಹತ್ತು ಮಂದಿ ಉಪ ಮುಖ್ಯಮಂತ್ರಿ ಗಳನ್ನೂ ನೇಮಿಸಿದರೂ ಯಾವುದೇ ತೊಂದರೆ ಇಲ್ಲ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನ ಮಾನಕ್ಕೆ ಯಾವುದೇ ಸಂವಿಧಾನಾತ್ಮಕ ಮಹತ್ವ ಇಲ್ಲ, ಎಷ್ಟು ಮಂದಿಯನ್ನು ಬೇಕಾದರೂ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಬಹುದು, ಅನರ್ಹ ಶಾಸಕರದರೂ ಇರಲಿ, ಯಾರಾದರೂ ಇರಲಿ, ಹತ್ತು ಮಂದಿಯನ್ನು ಬೇಕಾದರೂ ಡಿಸಿಎಂ ಮಾಡಬಹುದು. ಅದರಲ್ಲಿ ತಪ್ಪೇನು ಇಲ್ಲ ಎಂದರು.
ಸೆ.11ರಂದು ಸುಪ್ರಿಂಕೋರ್ಟ್ ಮುಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದೆ ಏನಾಗುತ್ತದೋ? ನೋಡೋಣ ಎಂದ ಅವರು,ಆದರೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ಘೋಷಿಸಿದ್ದೇನೆ. ತಮ್ಮ ಮಗ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾನೆ. ಪಕ್ಷ ಟಿಕೆಟ್ ನೀಡಿದರೆ ನೋಡೋಣಎಂದು ಉತ್ತರಿಸಿದರು.
ಜೆಡಿಎಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಅಸಮಾಧಾನ,ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರ ಅಸಮಾಧಾನ,ಇಬ್ಬರ ಬಗ್ಗೆ ಮಾಧ್ಯಮದವರ ಅಸಮಾಧಾನ. ಅದರಿಂದಲೇ ಮೈತ್ರಿ ಸರ್ಕಾರ ಪತನವಾಗಿದೆ. ಈಗಲೂ ಜೆಡಿಎಸ್ ಪಕ್ಷದಲ್ಲಿ ಹಲವರಿಗೆ ಅಸಮಾಧಾನ ಇರಬಹುದು. ಆ ವಿಷಯ ಈಗ ಬೇಡ ಎಂದು ಹೇಳಿ ಯಾವುದೇ ಪ್ರತಿಕ್ರಿಯೆ ನೀಡಲು ವಿಶ್ವನಾಥ್ ನಿರಾಕರಿಸಿದರುಉಪ ಮುಖ್ಯಮಂತ್ರಿ ಆಗಬೇಕೆಂಬ ಅಪೇಕ್ಷೆಯೂ ಇಲ್ಲ, ಮಂತ್ರಿ, ಉಪ ಮುಖ್ಯಮಂತ್ರಿ ಯಾವ ಸ್ಥಾನದ ಬಗ್ಗೆಯೂ ತಮಗೆ ಆಸೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಹೆಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಶಾಸಕರಾಗಿದ್ದರು. ಪಕ್ಷದ ಬಗ್ಗೆ ಅಸಮಾಧಾನಗೊಂಡು ಆಪರೇಷನ್ ಕಮಲದಲ್ಲಿ ಭಾಗವಹಿಸಿ ಸಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
![](https://prajapragathi.com/wp-content/uploads/2019/09/vishwanath.gif)