ತುರುವೇಕೆರೆ:
ಹೇಮಾವತಿ ನೀರಿನ ವಿಚಾರದಲ್ಲಿ ಜೆಡಿಎಸ್ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೈವಾಡವಿರಬಹುದೇನೋ? ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ದುಂಡಾರೇಣಕಪ್ಪ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು 15 ವರ್ಷದಿಂದ ಅಧಿಕಾರ ಅನುಭವಿಸಿದ ಜೆಡಿಎಸ್ ಮುಖಂಡರು ಸೋಲಿನ ಹತಾಶಭಾವನೆಯಿಂದ ಶಾಸಕ ಮಸಾಲ ಜಯರಾಮ್ ಬಗ್ಗೆ ಹಗುರವಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ದಬ್ಬೇಘಟ್ಟ ಹೋಬಳಿಯಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಹೆಚ್ಚು ಮತ ನೀಡಿದ್ದಾರೆಂದು ಹೇಳಿಕೆ ನೀಡಿದ್ದು ಅವರೇ ನೀರು ಬಿಡಿಸಲು ನೇತೃತ್ವ ವಹಿಸಲಿ ಎಂಬ ಜೆಡಿಎಸ್ ಮುಖಂಡರ ಹೇಳಿಕೆಯೇ ಹಾಸ್ಯಾಸ್ಪದವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಬ್ಬರೇ ಶಾಸಕರಾಗಿ ಇರಲು ಅವಕಾಶವಿಲ್ಲ .ಜನರ ತಿರ್ಮಾನವೇ ಅಂತಿಮ. ಅದರಂತೆ ಮಸಾಲ ಜಯರಾಮ್ರನ್ನು ತಾಲೂಕಿನ ಜನತೆ ಶಾಸಕರನ್ನಾಗಿ ಮಾಡಿದ್ದಾರೆ.
ಮೂರ್ನಾಕು ತಿಂಗಳ ಹಿಂದಷ್ಟೇ ಶಾಸಕರಾದ ಮಸಾಲ ಜಯರಾಮ್ ಪ್ರಾಮಾಣಿಕತೆಯಿಂದ ತಾಲೂಕಿನ ಜನರ ಸೇವೆ ಮಾಡುತ್ತಿದ್ದು ಹೇಮಾವತಿ ನೀರು ಸೇರಿದಂತೆ ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ಮಾಡದೆ ಕೆಲಸ ಮಾಡುತ್ತಿದ್ದು ಈಗಾಗಲೇ ದಂಡಿನಶಿವರ ಹೋಬಳಿ, ದಬ್ಬೆಘಟ್ಟ ಹೋಬಳಿಯ ಗೊಟ್ಟಿಕೆರೆ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿದ್ದರು ಸಹಾ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತಾಲೂಕಿನ ಜನರಲ್ಲಿ ಗೊಂದಲ ಮೂಡಿಸುತ್ತಿದ್ದು ನೀರಿನ ವಿಚಾರದಲ್ಲೂ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ.
ಜೆಡಿಎಸ್ ಮುಖಂಡರು ಇಂತಹ ಪತ್ರಿಕಾ ಹೇಳಿಕೆ ನೀಡುವುದರಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಶೋಭೆ ತರುವಂತದ್ದಲ್ಲ. 15 ವರ್ಷ ಅಧಿಕಾರದ ಅನುಭವವನ್ನು ಶಾಸಕರೊಂದಿಗೆ ಚರ್ಚಿಸಲಿ. ಇಲ್ಲದಿದ್ದರೆ ತಮ್ಮದೇ ಪಕ್ಷದ ಮುಖ್ಯಮಂತ್ರಿ, ಸಚಿವರುಗಳಿದ್ದು ತಾಲೂಕಿನ ರೈತರ ಬಗ್ಗೆ ಕಾಳಜಿ ಇದ್ದು ತಾಲ್ಲೂಕಿಗೆ ನೀರು ಹರಿಸಿದರೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ದಲಿತ ಮುಖಂಡ ಚಿದಾನಂದ್ ಮಾತನಾಡಿ ಶಾಸಕ ಮಸಾಲ ಜಯರಾಮ್ರ ಒಳ್ಳೆತನ, ಉತ್ತಮ ಆಡಳಿತವನ್ನು ಸಹಿಸಿಕೊಳ್ಳಲಾಗದೆ ಜೆಡಿಎಸ್ ಮುಖಂಡರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೇ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನರಸಿಂಹ(ಲಚ್ಚಿಬಾಬು), ಮುಖಂಡರಾದ ಬಸವಣ್ಣ, ನವೀನ್ ಬಾಬು, ಪ್ರಕಾಶ್, ಶಿವರಾಜು, ಯೋಗಾನಂದ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ