ತುಮಕೂರು
ತುಮಕೂರು ನಗರದಲ್ಲಿರುವ ಹಂದಿ ಸಾಕಾಣಿಕೆದಾರರಿಗೆ ವೈಜ್ಞಾನಿಕವಾಗಿ ಹಂದಿ ಸಾಕಣೆ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯಕ್ರಮವನ್ನು ತುಮಕೂರು ಮಹಾನಗರ ಪಾಲಿಕೆಯು ಇತ್ತೀಚೆಗೆ ಹಮ್ಮಿಕೊಂಡಿತ್ತು.
ನಗರದ ಪಶು ವೈದ್ಯಕೀಯ ಆಸ್ಪತ್ರೆ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಸುಮಾರು 60 ಜನ ಹಂದಿ ಸಾಕಾಣಿಕೆದಾರರು ಭಾಗವಹಿಸಿದ್ದರು. ಹಂದಿಗಳ ಆಹಾರ, ಅವುಗಳ ವಸತಿ ಹಾಗೂ ರೋಗಗಳು ಬಾರದಂತೆ ಗಮನಿಸುವುದು ಇತ್ಯಾದಿಗಳ ಬಗ್ಗೆ ಪಶುವೈದ್ಯರು ಮಾಹಿತಿ ನೀಡಿದರು.
ಹಂದಿ ಸಾಕಾಣಿಕೆದಾರರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಹಾಗೂ ಸೂಕ್ತ ತರಬೇತಿ ನೀಡಿದ ಬಳಿಕ ಅವರನ್ನು ಸ್ಥಳಾಂತರಿಸಬೇಕೆಂಬ ನ್ಯಾಯಾಲಯದ ಆದೇಶದ ಅನುಸಾರವಾಗಿ ಪ್ರಸ್ತುತ ಇವರಿಗೆ ತರಬೇತಿ ನೀಡಲಾಗಿದೆ. ಹಂದಿ ಸಾಕಾಣಿಕೆದಾರರಿಗೆ ಅಣ್ಣೇನಹಳ್ಳಿ ಬಳಿ ಜಿಲ್ಲಾಡಳಿತವು ಈಗಾಗಲೇ ಸ್ಥಳಾವಕಾಶ ಕಲ್ಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಹಗಲಿನಲ್ಲಿ ನಿರ್ಬಂಧ
“ಹಂದಿ ಹಾವಳಿ ಬಗ್ಗೆ ತುಮಕೂರು ನಗರದ ಸಾರ್ವಜನಿಕರಿಂದ ವ್ಯಾಪಕವಾದ ದೂರುಗಳಿವೆ. ಆದಕಾರಣ ಹಂದಿಸಾಕಾಣಿಕೆದಾರರು ಹಗಲು ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಹಂದಿಗಳನ್ನು ಹೊರಕ್ಕೆ ಬಿಡಬಾರದು. ತಮ್ಮ ವಶದಲ್ಲೇ ಇರಿಸಿಕೊಂಡಿರಬೇಕು. ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ಹಂದಿಗಳನ್ನು ಮೇಯಲು ಹೊರಕ್ಕೆ ಬಿಡಬಹುದು.
ಒಂದು ವೇಳೆ ತುಮಕೂರು ನಗರದಲ್ಲಿ ಹಗಲಿನಲ್ಲೂ ಹಂದಿಗಳು ಕಂಡುಬಂದರೆ ಮಹಾನಗರ ಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಈ ಸಂದರ್ಭದಲ್ಲಿ ಹಂದಿ ಸಾಕಾಣಿಕೆದಾರರಿಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಈ ತರಬೇತಿ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಇದಕ್ಕೆ ಹಂದಿ ಸಾಕಾಣಿಕೆದಾರರು ಒಪ್ಪಿಗೆ ಸೂಚಿಸಿದರೆಂದು ಪಾಲಿಕೆಯ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ