ತುಮಕೂರು:
ನಿನ್ನೆ(ಸೆ.30) ಬೆಳ್ಳಂಬೆಳಗ್ಗೆಯೇ ನಡುರಸ್ತೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮಾಜಿ ಮೇಯರ್ ಹಾಗೂ ಕೌನ್ಸಿಲರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತಂಡ ತನಿಖೆ ಚುರುಕುಗೊಳಿಸಿದ್ದು, ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ.
ಬೆಳ್ಳಂಬೆಳಗ್ಗೆಯೇ ಪಾಲಿಕೆಯ ಮಾಜಿ ಮೇಯರ್ ಬರ್ಬರ ಹತ್ಯೆ
ಪ್ರಕರಣವನ್ನು ಬೇಧಿಸಲು ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ರಾಮಕೃಷ್ಣಪ್ಪ, ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಕೆ.ಆರ್.ರಾಘವೇಂದ್ರ, ಡಿವೈಎಸ್ಪಿಗಳಾದ ನಾಗರಾಜ್, ಕಲ್ಲೇಶಪ್ಪ, ಭೀಮಾ ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದಾರೆ.
ಈ ತಂಡ ನಿನ್ನೆ ರಾತ್ರಿ ಹಲವು ಕಡೆಗಳಲ್ಲಿ ದಾಳಿ ನಡೆಸಿ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹತ್ಯೆಯ ಬಗ್ಗೆ ಕೆಲವೊಂದು ಸುಳಿವು ಪತ್ತೆಹಚ್ಚಿದೆ.
ಹತ್ಯೆ ಮಾಡಿದ ತಂಡದಲ್ಲಿ ಕುಣಿಗಲ್, ತುಮಕೂರು ನಗರ, ದೊಡ್ಡಬಳ್ಳಾಪುರ, ಬೆಂಗಳೂರಿನ ಯುವಕರ ತಂಡ ಇತ್ತು ಎಂಬುದರ ಬಗ್ಗೆ ಮಾಹಿತಿ ಪಡೆದಿರುವ ವಿಶೇಷ ತಂಡ, ಇವರ ಜಾಡು ಹಿಡಿದು ಬೇರೆ ಬೇರೆ ಕಡೆಗಳಿಗೆ ತೆರಳಿದೆ.
ಎಚ್ಚರವಾಗಿರುವಂತೆ ಸೂಚನೆ ನೀಡಿದ್ದ ಪೊಲೀಸರು:
ರವಿಕುಮಾರ್ ಹತ್ಯೆಗೆ ಸಂಚು ರೂಪಿಸಿರುವುದು ಪೊಲೀಸರಿಗೆ ಮೊದಲೇ ತಿಳಿದಿತ್ತು. ಈ ಬಗ್ಗೆ ಹಲವು ಬಾರಿ ರವಿ ಅವರಿಗೆ ಪೊಲೀಸರು ಮಾಹಿತಿ ನೀಡಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು. ರೌಡಿಗಳ ವಿಚಾರಣೆಯ ವೇಳೆ ಕೆಲವರು ರವಿ ಹತ್ಯೆಗೆ ಸಂಚು ರೂಪಿಸಿರುವ ವಿಷಯದ ಬಗ್ಗೆ ಬಾಯ್ಬಿಟ್ಟಿದ್ದರು.
ಇದರಿಂದ ನೆಲಮಂಗಲ ಮತ್ತು ತುಮಕೂರು ಪೊಲೀಸರು ಸ್ವತಃ ರವಿಯನ್ನು ಭೇಟಿಯಾಗಿ ಸಂಚಿನ ಬಗ್ಗೆ ವಿವರಿಸಿದ್ದರು. ಏಕಾಂಗಿಯಾಗಿ ಓಡಾಡದಂತೆ ಮುನ್ನೆಚ್ಚರಿಕೆಯನ್ನೂ ನೀಡಿದ್ದರು. ಆದರೆ ಈ ಎಲ್ಲಾ ಸೂಚನೆಗಳನ್ನು ರವಿ ನಿರ್ಲಕ್ಷಿಸಿದರು. ಇದರಿಂದಾಗಿಯೇ ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ ಎಂದು ಪೊಲೀಸರೇ ಹೇಳುತ್ತಿದ್ದಾರೆ.
ನ್ಯಾಯಾಲಯಕ್ಕೆ ಶರಣಾಗಲು ಯತ್ನಿಸುತ್ತಿರುವ ಆರೋಪಿಗಳು:
ಆರೋಪಿಗಳು ನೇರವಾಗಿ ತುಮಕೂರು ನ್ಯಾಯಾಲಯಕ್ಕೆ ಹಾಜರಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಪಡೆದಿರುವ ಜಿಲ್ಲಾ ಪೊಲೀಸರು, ನ್ಯಾಯಾಲಯದ ಎಲ್ಲಾ ಪ್ರವೇಶದ್ವಾರಗಳಲ್ಲೂ ಮಫ್ತಿಯಲ್ಲಿ ನಿಂತು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಪೊಲೀಸರು ತಮ್ಮ ಬೆನ್ನುಬಿದ್ದಿರುವ ವಿಷಯ ಅರಿತ ಆರೋಪಿಗಳು, ಪೊಲೀಸರಿಂದ ತಪ್ಪಿಸಿಕೊಂಡು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮಫ್ತಿಯಲ್ಲಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
