ಬಳ್ಳಾರಿ:
ಕಳೆದ ಕೆಲದಿನಗಳಿಂದ ಬಿಸಿಲಿನ ತಾಪಕ್ಕೆ ಕಾದುಕೆಂಡವಾಗಿದ್ದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವಿವಿಧೆಡೆ ಶನಿವಾರ ಸಂಜೆ ಸುರಿದ ಮಳೆಯಿಂದ ತಂಪೆರೆದಂತಾಗಿದೆ.
ಬೆಳಗ್ಗೆಯಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮೋಡಕವಿದ ವಾತಾವರಣವಿತ್ತು. 3.45ರ ಸುಮಾರಿಗೆ ಜೋರಾದ ಬಿರುಗಾಳಿ ಬೀಸಿ, ನಂತರ ಕೆಲಹೊತ್ತು ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜಿಲ್ಲೆಯ ಜನರು ಮಳೆ ಸುರಿದ ಹಿನ್ನೆಲೆಯಲ್ಲಿ ಕೊಂಚಮಟ್ಟಿಗೆ ನಿಟ್ಟುಸಿರು ಬಿಟ್ಟರು.
ಜಿಲ್ಲೆಯ ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಹಡಗಲಿ, ಸಿರುಗುಪ್ಪ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಮಳೆ ಸುರಿದಿದೆ. ಹ.ಬೊ.ಹಳ್ಳಿಯಲ್ಲಿ ಜಿಟಿಜಿಟಿಯಾಗಿ ಮಳೆ ಸುರಿದಿದ್ದು, ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಬಿರುಗಾಳಿಗೆ ಮನೆಯೊಂದರ ಮೇಲ್ಛಾವಣಿ ಹಾರಿಹೋಗಿದೆ. ಇನ್ನು ಸಂಡೂರು ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ.
ನೆಲಕ್ಕುಳಿರುಳಿದ ಮರಗಳು
ಬಳ್ಳಾರಿ ನಗರದಲ್ಲೂ ಕೆಲಹೊತ್ತು ಉತ್ತಮವಾಗಿ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ಇಲ್ಲಿನ ವಿಮ್ಸ್ ಆಸ್ಪತ್ರೆ ಆವರಣದಲ್ಲಿ 10ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಇನ್ನು ಬಹುತೇಕ ಕಡೆ ಬಿರುಗಾಳಿಗೆ ಮರಗಳ ಕೊಂಬೆರೆಂಬೆಗಳು ನೆಲಕ್ಕೆ ಬಾಗಿವೆ. ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಬೃಹತ್ ಮರವೊಂದು ನೆಲಕ್ಕುರುಳಿದ ಪರಿಣಾಮ ಬೈಕ್ವೊಂದು ಜಖಂಗೊಂಡಿದೆ. ಇನ್ನು ನಗರದ ವಿವಿಧೆಡೆ ಇರುವ ಕೆಳಸೇತುವೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
