ಉದ್ಯೋಗಿನಿ: ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಸಂದರ್ಶನ

ಚಿತ್ರದುರ್ಗ :

    ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುವ ಉದ್ಯೋಗಿನಿ ಮತ್ತು ಸಮೃದ್ಧಿ ಯೋಜನೆಗೆ ಮಹಿಳಾ ಫಲಾನುಭವಿಗಳ ಆಯ್ಕೆಗಾಗಿ ನಗರದ ಬಾಲಭವನ ಆವರಣದಲ್ಲಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಂದರ್ಶನ ಜರುಗಿತು.

     ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಮತ್ತು ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆಯಡಿ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆಗೆ ಮಹಿಳಾ ಅಭ್ಯರ್ಥಿಗಳಿಂದ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗಿನಿ ಯೋಜನೆಯಡಿ 481, ಸಮೃದ್ಧಿ ಯೋಜನೆಯಡಿ 52 ಅರ್ಜಿಗಳು ಸಲ್ಲಿಕೆಯಾಗಿದ್ದವು. ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರು ಚೀಟಿ ಎತ್ತುವುದರ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದರು.
ಚಿತ್ರದುರ್ಗ ವ್ಯಾಪ್ತಿಯಲ್ಲಿ ಉದ್ಯೋಗಿನಿ ಯೋಜನೆಗಾಗಿ ಸಂಕಷ್ಟ (ವಿಚ್ಚೇಧನ) ಮಹಿಳೆಯರಿಗೆ 01, ಪರಿಶಿಷ್ಟ ಜಾತಿ 03, ಪರಿಶಿಷ್ಟ ಪಂಗಡ 16, ಇತರೆ 10, ಅಲ್ಪಸಂಖ್ಯಾತರು 01, ವಿಧವೆ 01, ವಿಕಲಚೇತನ 01 ಸೇರಿದಂತೆ ಒಟ್ಟು 33 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಸಮೃದ್ಧಿ ಯೋಜನೆಯಡಿ 21 ಜನ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಭರಮಸಾಗರ ವ್ಯಾಪ್ತಿಯಡಿ ಉದ್ಯೋಗಿನಿ ಯೋಜನೆಗಾಗಿ ಪರಿಶಿಷ್ಟ ಜಾತಿ 01, ಪರಿಶಿಷ್ಟ ಪಂಗಡ 01, ಇತರೆ 2, ಸಮೃದ್ಧಿ ಯೋಜನೆಯಡಿ 2 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

     ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಬ್ಯಾಂಕ್‍ಗಳು 1 ಲಕ್ಷ ರೂ. ನಿಂದ 3 ಲಕ್ಷ ರೂ.ಗಳವರೆಗೆ ಸಾಲ ಒದಗಿಸುತ್ತವೆ. ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಮಹಿಳೆಯರಿಗೆ ಬ್ಯಾಂಕ್‍ನಿಂದ ಮಂಜೂರಾದ ಸಾಲದ ಮೊತ್ತಕ್ಕೆ ಶೇ.50 ರಷ್ಟು, ಇತರೆ ವರ್ಗದವರಿಗೆ ಶೇ.30 ರಷ್ಟು ಸಹಾಯಧನ ನಿಗಮದಿಂದ ನೀಡಲಾಗುತ್ತದೆ.

    ಆರ್ಥಿಕವಾಗಿ ಹಿಂದುಳಿದ ಬೀದಿ ಬದಿ ಮಹಿಳಾ ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಫಲಾನುಭವಿಗಳ ಖಾತೆಗೆ 10,000 ರೂ. ಸಹಾಯಧನ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಅಭಿವೃದ್ಧಿ ನಿಗಮ ಅಭಿವೃದ್ಧಿ ನೀರಿಕ್ಷಕಿ ಸುವರ್ಣಮ್ಮ ತಿಳಿಸಿದರು. ಸಂದರ್ಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಭರಮಸಾಗರ ಸಿಡಿಪಿಒ ಚಂದ್ರಪ್ಪ, ಚಿತ್ರದುರ್ಗ ಸಿಡಿಪಿಒ ವೆಂಕಟಲಕ್ಷ್ಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಕೊಲ್ಲಿಲಕ್ಷ್ಮೀ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap