ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ

ಹಾನಗಲ್ಲ 
   
          ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದ್ದರೂ ಆಧುನಿಕ ಜೀವನ ವಿಧಾನದ ಅಬ್ಬರದಲ್ಲಿ ಅವನತಿಯ ಅಂಚಿನಲ್ಲಿರುವುದು ಕಳವಳದ  ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕಳವಳ ವ್ಯಕ್ತಪಡಿಸಿದರು.
         ಹಾನಗಲ್ ತಾಲೂಕಿನ ಕಲಕೇರಿ ತಾಂಡಾದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಆಶ್ರಯದಲ್ಲಿ ಸಂತ ಸೇವಾಲಾಲ ಕಲಾ ನಾಟ್ಯ ಸಂಘದ ಆಶ್ರಯದಲ್ಲಿ ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
 
         ಪ್ರಸ್ತುತ ಸಂದರ್ಭದಲ್ಲಿ ಕ್ರೌರ್ಯ, ಹಿಂಸೆ ಮಾರ್ಧನಿಸುತ್ತಿದೆ. ಮಾನವೀಯ ಸಂಬಂಧಗಳು ಪರಸ್ಪರ ಬೆಲೆ ಕಳೆದುಕೊಳ್ಳುತ್ತಿವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದಂತಹ ಸ್ಥಿತಿ ತಲೆದೋರಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಂಗಭೂಮಿ ಚಟುವಟಿಕೆಗಳ ಮೂಲಕ ಸಂಬಂಧ ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಆಧುನಿಕತೆಯ ಅಬ್ಬರದ ಮಧ್ಯೆಯೂ ರಂಗಭೂಮಿಯನ್ನು ಕಳೆದು ಹೋಗಲು ಬಿಡದೇ ಸಂರಕ್ಷಿಸುವಲ್ಲಿ ಯುವ ಸಮೂಹ ಗಮನ ಹರಿಸಬೇಕಿದೆ ಎಂದು ಹೇಳಿದ ಅವರು ಸೂಕ್ತ ಪ್ರೋತ್ಸಾಹದ ಕೊರತೆಯಿಂದ ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿದ್ದು, ಅಂಥ ಕಲಾವಿದರ ನೆರವಿಗೆ ಸ್ಪಂದಿಸುವಂತೆ ಕರೆ ನೀಡಿದರು.
 
          ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸುವಲ್ಲಿ ರಂಗ ಚಟುವಟಿಕೆ ಪೂರಕವಾಗಿವೆ. ಜತೆಗೆ ಹಳಸಿ ಹೋಗಿರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ನಿತ್ಯದ ಜಂಜಾಟಗಳಿಂದ ಬಸವಳಿದಿರುವ ಮನಸ್ಸುಗಳಿಗೆ ನವೋಲ್ಲಾಸ ನೀಡಲಿವೆ ಎಂದು ಹೇಳಿದ ಅವರು ದೂರದರ್ಶನ, ಸಿನೆಮಾ, ಮೊಬೈಲ್ ಹಾವಳಿಯ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಹ ರಂಗ ಚಟುವಟಿಕೆಗಳು ಜೀವಂತವಾಗಿರುವುದು ಸಂತಸದ ಸಂಗತಿ ಎಂದರು.
 
          ಜಿಪಂ ಸದಸ್ಯೆ ಗೌರಮ್ಮ ಶೇತಸನದಿ, ಮುಖಂಡರಾದ ಮಹದೇವಪ್ಪ ಬಾಗಸರ, ಅಜ್ಜಪ್ಪ ಶಿರಳ್ಳಿ, ಭೀಮಣ್ಣ ಲಮಾಣಿ, ಡಾ.ಸುನೀಲ್ ಹಿರೇಮಠ, ಆದರ್ಶ ಶೆಟ್ಟಿ, ಅನಂತವಿಕಾಸ್ ನಿಂಗೋಜಿ, ಯಲ್ಲಪ್ಪ ಆಲೂರ, ಚಂದ್ರಪ್ಪ ದೊಡ್ಡಮನಿ, ರವಿ ಕಾರಬಾರಿ, ಭೀಮಪ್ಪ ಬಣಕಾರ, ಈರಪ್ಪ ಮಲ್ಲಿಗಾರ, ಚನ್ನಪ್ಪ ಕರೆಕ್ಯಾತನಹಳ್ಳಿ, ರಾಮಪ್ಪ ಕರೆಕ್ಯಾತನಹಳ್ಳಿ, ಮಲ್ಲಪ್ಪ ಬ್ಯಾಗವಾದಿ, ಭೋಜಪ್ಪ ಮಳವಳ್ಳಿ, ಜಾನಕವ್ವ ದೊಡ್ಡಮನಿ, ಯಂಕಪ್ಪ ಕರೆಕ್ಯಾತನಹಳ್ಳಿ, ಸುಬ್ಬಣ್ಣ ಮಲ್ಲಿಗಾರ, ನಾಗೇಶ ದೊಡ್ಡಮನಿ, ಚಂದ್ರಪ್ಪ ಬಣಕಾರ ಸೇರಿದಂತೆ ಅತಿಥಿಗಳಾಗಿದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link