ಹುಳಿಯಾರು
ಹುಳಿಯಾರಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯ 49 ನೇ ವರ್ಷ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ಸಿಡಿ ಉತ್ಸವವು ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು.
ಮಧ್ಯಾಹ್ನ 2 ಗಂಟೆಯಿಂದ ಸಿಡಿ ಉತ್ಸವ ಆರಂಭವಾಯಿತು. ದೇವಾಲಯದಲ್ಲಿ ದುರ್ಗಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿದ ನಂತರ ಸರ್ವಾಲಂಕೃತ ದುರ್ಗಮ್ಮದೇವಿಯನ್ನು ಹುಳಿಯಾರಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮ,ಕೆಂಚಮ್ಮ,ಗೌಡಗೆರೆ ದುರ್ಗಮ್ಮ ,ಹೊಸಳ್ಳಿಪಾಳ್ಯದ ಅಂತಘಟ್ಟೆಅಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ ದೇವರುಗಳೊಂದಿಗೆ ಹೊರಡಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಸಿಡಿ ಕಂಬದ ಬಳಿ ಕರೆತರಲಾಯಿತು.
ಅಲ್ಲದೆ ಸಿಡಿ ಮರವನ್ನು ಏರುವ ವ್ಯಕ್ತಿ ಎಚ್..ಎಸ್.ಮಂಜುನಾಥ್ ಅವರನ್ನು ಮಂಗಳವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಸಿಡಿ ಕಂಬಕ್ಕೆ ಸಿಡಿಯಾಡುವ ವ್ಯಕ್ತಿಯನ್ನು ಉದ್ದನೆ ಬಿಳಿಯ ಬಟ್ಟೆಯಿಂದ ಕಟ್ಟಲಾಯಿತು. ಅತ್ತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರನ್ನು ಕೂರಿಸಲಾಯಿತು. ಸಿಡಿ ಕಂಬವೇರಿದ ಯುವಕ ಎಡಗೈಯಲ್ಲಿ ಕತ್ತಿಯನ್ನು ಹಿಡಿದು, ಬಲಗೈಯಲ್ಲಿ ಹರಿಶಿಣವನ್ನು ಎಲ್ಲರ ಮೇಲೆ ಎರಚುವ ಮೂಲಕ ಸಿಡಿ ಆಡಲಾಯಿತು.
30 ಅಡಿ ಉದ್ದ ಸಿಡಿ ಕಂಬವು ವೃತ್ತಾಕಾರವಾಗಿ ಸುತ್ತುವಾಗ ಭಕ್ತರು ಸಂತಸದಿಂದ ಕೇಕೆ ಹಾಕಿದರು. ಸಿಡಿ ಕಂಬದ ಸುತ್ತಲೂ ವೃತ್ತಾಕಾರವಾಗಿ ಜನರು ಸಿಡಿ ದೃಶ್ಯವನ್ನು ನೋಡಲು ನೆರೆದಿದ್ದರು. ಕಮಿಟಿಯ ಧರ್ಮದರ್ಶಿ ಹೆಚ್.ಶಿವಕುಮಾರ್, ಕನ್ವಿನರ್ ಹೆಚ್.ಕೆ.ವಿಶ್ವನಾಥ್ ಸೇರಿದಂತೆ ಗುಂಚಿ ಗೌಡರುಗಳು,ವಿವಿಧ ದೇವಾಲಯಗಳ ಮುಖಂಡರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/27HULIYAR4.gif)