ಹಂಪಿ ಉತ್ಸವದಲ್ಲಿ ವಿಜಯನಗರ ವೈಭವ ಅನಾವರಣ: ಸಂಸದ ದೇವೆಂದ್ರಪ್ಪ

ಬಳ್ಳಾರಿ

     ಈ ಹಿಂದಿನ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತೆ ಮರುಕಳಿಸುವಂತೆ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಂಸದ ವೈ.ದೇವೇಂದ್ರಪ್ಪ ಅವರು ಹೇಳಿದರು. ಹಂಪಿ ಉತ್ಸವದ ನಿಮಿತ್ತ ಕನ್ನಡ ವಿವಿಯ ದೃಶ್ಯಕಲಾ ವಿಭಾಗದ ಆವರಣದಲ್ಲಿ ಏರ್ಪಡಿಸಿದ್ದ ಶಿಲ್ಪಕಲಾ ಶಿಬಿರದಲ್ಲಿ ಶಿಲೆಯೊಂದಕ್ಕೆ ಹೂಳಿಯಿಂದ ಕೆತ್ತುವುದರ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

     ಈ ಬಾರಿಯ ಹಂಪಿ ಉತ್ಸವದ ಕಾರ್ಯಕ್ರಮಗಳು ನೋಡಿದರೇ 10 ಕೋಟಿ ರೂ.ಗಳು ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಅದೆಲ್ಲವನ್ನು ಸರಕಾರ ನೀಡಲಿದೆ ಎಂಬ ವಿಶ್ವಾಸದ ನುಡಿಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ ಸಂಸದ ದೇವೇಂದ್ರಪ್ಪ ಅವರು ಜ.10 ಮತ್ತು 11ರಂದು ನಡೆಯಲಿರುವ ಹಂಪಿ ಉತ್ಸವದಲ್ಲಿ ಜಲಕ್ರೀಡೆ,ಹಂಪಿ ಬೈ ಸ್ಕೈ, ಮತ್ಸ್ಯಮೇಳ,ಚಿತ್ರ ಸಂತೆ,ಶಿಲ್ಪಕಲಾ ಶಿಬಿರ ಸೇರಿದಂತೆ ವೈವಿಧ್ಯಮಯದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

    ವಿಜಯನಗರ ಸಾಮ್ರಾಜ್ಯವೆಂದರೇ ವೈವಿಧ್ಯಮಯ ಶಿಲ್ಪಕಲೆಗಳ ವೈಭವ;ಅದನ್ನು ಮುಂದಿನ ಪೀಳಿಗೆಗೆ ತೋರ್ಪಡಿಸುವ ನಿಟ್ಟಿನಲ್ಲಿ ಹಂಪಿ ಉತ್ಸವದಲ್ಲಿ ಶಿಲ್ಪಕಲಾ ಶಿಬಿರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.ಬಳ್ಳಾರಿ ಜಿಲ್ಲೆಗೆ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತೆ ಮರುಕಳಿಸಲಿ ಎಂದು ಆಶಿಸಿದ ಸಂಸದ ದೇವೆಂದ್ರಪ್ಪ ಅವರು ಎಂ.ಪಿ.ಪ್ರಕಾಶ ಅವರ ಕಾಲದಿಂದಲೂ ಹಂಪಿ ಉತ್ಸವವನ್ನು ನವೆಂಬರ್ 3,4 ಮತ್ತು 5ರಂದು ಆಚರಿಸಿಕೊಂಡು ಬರಲಾಗುತ್ತಿತ್ತು, ಈ ಬಾರಿ ಉಪಚುನಾವಣೆ ಹಾಗೂ ಕೆಲ ಕಾರಣಗಳಿಂದ ಜನೆವರಿಗೆ ಮುಂದೂಡಿಕೆಯಾಗಿದೆ. ಮುಂದಿನ ಉತ್ಸವವನ್ನು ನವೆಂಬರ್ ತಿಂಗಳಲ್ಲಿಯೇ ಆಚರಿಸುವುದಕ್ಕೆ ಸಂಬಂಧಿಸಿದಂತೆ ಸಲಹೆಗಳು ವ್ಯಕ್ತವಾದಲ್ಲಿ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

   ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್ ಅವರು ಮಾತನಾಡಿ, ರೋಮ್ ಸಾಮ್ರಾಜ್ಯದ ನಂತರ ಎರಡನೇ ಅತ್ಯಂತ ದೊಡ್ಡ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯವಾಗಿದೆ. ಇಲ್ಲಿ ಇನ್ನೂ ಸಾಮ್ರಾಜ್ಯದ ಅನೇಕ ಪ್ರದೇಶಗಳು ಉತ್ಖನನವಾಗಬೇಕಿದೆ ಎಂದರು.ಈ ಬಾರಿಯ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳು ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಹಂಪಿ ಉತ್ಸವದ ಮಾದರಿಯಲ್ಲಿಯೇ ಪ್ರತಿ ತಿಂಗಳು ಹಂಪಿಯಲ್ಲಿ ಎರಡು ದಿನಗಳ ಕಾಲ ವಿನೂತನ ಕಾರ್ಯಕ್ರಮಗಳು ಆಯೋಜಿಸಲು ಜಿಲ್ಲಾಡಳಿತ ಉದ್ದೇಶಿಸಿದೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸ.ಚಿ.ರಮೇಶ ಅವರು ಮಾತನಾಡಿ, ಈ ಶಿಲ್ಪಕಲಾ ಶಿಬಿರಕ್ಕೆ ಅತ್ಯಂತ ಪಾರದರ್ಶಕವಾಗಿ ಶಿಲ್ಪಕಲಾವಿದರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಎಲ್ಲ ಮೂಲೆಗಳಿಂದ ಈ ಶಿಬಿರಕ್ಕೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರಸಂತೆಯನ್ನು ಈ ಉತ್ಸವದಲ್ಲಿ ಆಯೋಜಿಸಲಾಗುತ್ತಿರುವುದು ಸಂತಸದ ಸಂಗತಿ ಎಂದರು.

     ಇದೇ ಮೊದಲ ಬಾರಿಗೆ ಕನ್ನಡ ವಿವಿಗೆ ಹಂಪಿ ಉತ್ಸವದಲ್ಲಿ ಶಿಲ್ಪಕಲಾ ಶಿಬಿರ ಮತ್ತು ಚಿತ್ರ ಸಂತೆ, ಚಿತ್ರಕಲಾ ಶಿಬಿರಗಳಂತ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದ ಕುಲಪತಿ ರಮೇಶ ಅವರು ಮುಂದಿನ ದಿನಗಳಲ್ಲಿಯೂ ಹಂಪಿ ಉತ್ಸವದಲ್ಲಿ ನಾಡು,ನುಡಿ ಹಾಗೂ ಸಂಸ್ಕೃತಿಗೆ ಕೊಡುಗೆ ನೀಡಿದ ಕನ್ನಡ ವಿವಿಯನ್ನು ಗೌರವಿಸುವ ಕೆಲಸ ಮಾಡಿ ಎಂದು ಅವರು ಮನವಿ ಮಾಡಿದರು.ಈ ಶಿಬಿರದಲ್ಲಿ ರಚನೆಯಾದ ಶಿಲ್ಪಗಳನ್ನು ಇದೇ ವಿವಿಯಲ್ಲಿ ಪ್ರದರ್ಶನಕ್ಕಿಡುವ ವ್ಯವಸ್ಥೆ ಮಾಡಬೇಕು;ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕೇಳಿಕೊಂಡರು.

    ಇದೇ ಸಂದರ್ಭದಲ್ಲಿ ಚಿತ್ರಸಂತೆಗೆ ಸಂಬಂಧಿಸಿದ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಕುಲಸಚಿವ ಎ.ಸುಬ್ಬಣ್ಣರೈ, ತಹಸೀಲ್ದಾರ್ ವಿಶ್ವನಾಥ,ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನ ಪಂಚಾಳ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಶಿಬಿರದ ನಿರ್ದೇಶಕ ಸುರೇಶ ಆಚಾರ್ಯ ಸೇರಿದಂತೆ ಶಿಬಿರದ ಶಿಲ್ಪಕಲಾವಿದರು ಹಾಗೂ ಸಹಾಯಕ ಶಿಲ್ಪಕಲಾವಿದರು ಹಾಗೂ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ಇದ್ದರು.ಶಿಲ್ಪಕಲಾ ಶಿಬಿರವು ಜ.9ರವರೆಗೆ ನಡೆಯಲಿದೆ. ಶಿಬಿರದಲ್ಲಿ ಸಮಕಾಲಿನ ಹಾಗೂ ಸಾಂಪ್ರಾದಾಯಿಕ ಶೈಲಿಯ ಶಿಲ್ಪಗಳನ್ನು ರಚಿಸಲಾಗುತ್ತದೆ. ಒಟ್ಟು 36 ಶಿಲ್ಪಕಲಾವಿದರು ಹಾಗೂ ಸಹಾಯಕ ಶಿಲ್ಪಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link