ವಿಜ್ಞಾನ-ತಂತ್ರಜ್ಞಾನ ಬದುಕಿಗೆ ಮಾರಕ ಆಗದಿರಲಿ

ದಾವಣಗೆರೆ:

      ಮನುಷ್ಯನ ಬದುಕಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪೂರಕವಾಗಿರಬೇಕೇ ಹೊರತು, ಮಾರಕವಾಗಿ ಪರಿಣಮಿಸಬಾರದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಮತ್ತು ಆಡಳಿತ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಬಾಪೂಜಿ ಪಾಲಿಟೆಕ್ನಿಕ್ ಶಾಬನೂರು ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಶಕ್ತಿಯು ಮನುಷ್ಯರ ಬದುಕಿಗೆ ಉಪಯೋಗಕಾರಿಯಾಗಿರಬೇಕೇ, ಹೊರತು ಮಾರಕವಾಗಿ ಪರಿಣಮಿಸಬಾರದು ಎಂದು ಸಲಹೆ ನೀಡಿದರು.

       ವಿಜ್ಞಾನ ಮತ್ತು ತಂತ್ರಜ್ಞಾನವು ಜನಸಾಮಾನ್ಯರ ಜೀವನ ಸುಧಾರಿಸುವಂತೆ ಇರಬೇಕಾಗುತ್ತದೆ. ಇವೆರಡೂ ಸಹ ನಾಗರಿಕತೆಗೆ ಸಂಬಂಧಿಸಿದ್ದಾಗಿದ್ದು, ಮೂಲಭೂತ ಜ್ಞಾನವು ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳು ಜೀವನದಲ್ಲಿ ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯುವುದರ ಜೊತೆಗೆ, ಶಿಸ್ತು, ಶ್ರದ್ಧೆ ಹಾಗೂ ಪರಿಶ್ರಮ ರೂಢಿಸಿಕೊಳ್ಳುವ ಮೂಲಕ ಇಟ್ಟ ಗುರಿಯನ್ನು ತಲುಪಲು ಸತತ ಪ್ರಯತ್ನ ನಡೆಸಬೇಕು. ಸಾಧನೆಯು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದರು.

        ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಿ, ಅಂಕಗಳಿಕೆಗೆ ಮಾತ್ರ ಒತ್ತು ನೀಡುತ್ತಿದ್ದಾರೆ. ಹೀಗಾದರೆ, ವಿದ್ಯಾರ್ಥಿಗಳು ಅಂಕಗಳಿಕೆಯ ಯಂತ್ರಗಳಾಗಿ ಬೆಳೆಯಲಿದ್ದಾರೆ. ಹೊರತು, ಇಂತಹ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗುವುದಿಲ್ಲ. ಯಾವುದೇ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ಪಠ್ಯದ ಜೊತೆಗೆ ಇತರೆ ಸಾಹಿತ್ಯಿಕ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ವಿದ್ಯಾರ್ಥಿಗಳು ಸ್ವಾರ್ಥಿಗಳಾಗದೇ, ನೆರೆ-ಹೊರೆಯವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಸಮಾಜಮುಖಿಯಾಗಿ ಬದುಕು ನಡೆಸಬೇಕೆಂದು ಕರೆ ನೀಡಿದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ಕಾಲೇಜು ಪ್ರಾಂಶುಪಾಲ ಕೆ.ಎಸ್.ವೀರೇಶ್, ಮನೋಜ್ ಕುಮಾರ್, ವಿ.ಎಚ್.ಅಕ್ಷಯ್, ಎನ್.ಎಚ್. ಸುಶೀಲಾ, ಕೆ.ಎನ್. ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link