ಮಿಡಿಗೇಶಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಮ್ಮ ಮತವನ್ನು ಚಲಾಯಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕೆಂದು ಪಿ.ಡಿ.ಓ. ಜುಂಜೇಗೌಡ ಕರೆ ನೀಡಿದರು.
ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್, ಕುವೆಂಪು ಶಾಲೆ ಮತ್ತು ಮಿಡಿಗೇಶಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾ ಮತ್ತು ಮತ ಯಂತ್ರ, ವಿವಿಪ್ಯಾಟ್ ಮೂಲಕ ಮತದಾನ ಮಾಡುವ ಪ್ರಕ್ರಿಯೆಯ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಸಂವಿಧಾನ ಮತದಾನದ ಹಕ್ಕನ್ನು ನೀಡಿದ್ದು, ಈ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜವಾಬ್ದಾರಿಯುಳ್ಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕುವೆಂಪು ಶಾಲೆಯ ಮುಖ್ಯ ಶಿಕ್ಷಕ ಜಿ.ಎಲ್.ರಾಮಚಂದ್ರಯ್ಯ ಮಾತನಾಡಿ, ಗಣತಂತ್ರ ವ್ಯವಸ್ಥೆಯಾದ ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲಕ ಆಡಳಿತ ನಡೆಸುತ್ತಿದ್ದು, ಉತ್ತಮ ರೀತಿಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಭಾರತವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕೆಂದರು.
ಸೆಕ್ಟರ್ ಅಧಿಕಾರಿ ಮುನೀಂದ್ರಕುಮಾರ್ ಮಾತನಾಡಿ, ಮತ ಯಂತ್ರದಲ್ಲಿ ಚಲಾಯಿಸಿದ ಮತದ ಖಾತರಿಯನ್ನು ವಿವಿಪ್ಯಾಟ್ ಮೂಲಕ ಪ್ರತಿಯೊಬ್ಬರೂ ಖಾತರಿ ಪಡಿಸಿಕೊಳ್ಳಬಹುದಾಗಿದೆ. ವಿವಿಪ್ಯಾಟ್ನ್ನು ಬಳಸುವುದರಿಂದ ಮತದಾನ ಪ್ರಕ್ರಿಯೆ ಸುಲಭವಾಗಿ ನಡೆಯುತ್ತದೆ.
ಮತದಾರ ಯಾವುದೇ ಗೊಂದಲವಿಲ್ಲದೆ ತಮ್ಮ ಮತವನ್ನು ಚಲಾಯಿಸಬೇಕು. ವಿದ್ಯುನ್ಮಾನ ಮತಯಂತ್ರ, ಮತದಾನ ಖಾತರಿಯ ವಿವಿಪ್ಯಾಟ್ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಈ ಯಂತ್ರಗಳ ಮೂಲಕ ಮತ ಚಲಾವಣೆ ಪ್ರಕ್ರಿಯೆಯನ್ನು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ಸಾರ್ವಜನಿಕರು ಮುಕ್ತವಾಗಿ ತಮ್ಮ ಮತವನ್ನು ಚಲಾಯಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಚುನಾವಣಾ ಆಯೋಗ ಚುನಾವಣೆಗಳನ್ನು ನಡೆಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಯಾವೊಬ್ಬ ಅರ್ಹ ಮತದಾರನೂ ಮತದಾನದಿಂದ ವಂಚಿತರಾಗಬಾರೆಂಬ ಗುರಿಯನ್ನು ಹೊಂದಿದೆ. ಅರ್ಹ ಮತದಾರರಿಗೆಲ್ಲರಿಗೂ ಮತದಾನದ ಹಕ್ಕನ್ನು ನೀಡಿದ್ದು, ಪ್ರತಿಯೊಬ್ಬರೂ ಮತಚಲಾಯಿಸುವ ಮೂಲಕ, ಸಂವಿಧಾನ ದತ್ತವಾದ ಹಕ್ಕನ್ನು ಪ್ರತಿಪಾದಿಸಿ, ಅರ್ಹರನ್ನು ಚುನಾಯಿಸಬೇಕು.
ಮತದಾನದ ಮಹತ್ವವನ್ನು ಅರಿತು ಚಲಾಯಿಸಿದ ಮತ ಎಂದಿಗೂ ವ್ಯರ್ಥವಾಗಲಾರದು. ಆದುದರಿಂದ ವಿಶೇಷವಾಗಿ ಯುವಜನರು ಇತರರನ್ನು ಪ್ರೇರೇಪಿಸಿ ಮತದಾನ ಮಾಡುವಂತೆ ಮನವೊಲಿಸಬೇಕು. ಚುನಾವಣೆಯನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿಗಳು, ಸಾರ್ವಜನಿಕರು ಸಹಕರಿಸುವ ಮೂಲಕ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದರು.ಇದೇ ಸಂಧರ್ಭದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜಕ ಮುನಿರಾಜ ಇ, ಬಿ.ಎಲ್.ಓ. ಧನಂಜಯ, ಸಿ.ಆರ್.ಪಿ. ಹರೀಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
