ಹುಳಿಯಾರು:
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಅನೇಕ ರೀತಿಯ ಕಾರ್ಯಕ್ರಮ ಸಂಘಟಿಸುತ್ತಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಲಾ-ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಮುಖ್ಯಸ್ಥರು ಹೀಗೆ ಅನೇಕರನ್ನು ಬಳಕೆ ಮಾಡಿಕೊಂಡು ಸೈಕಲ್ ಜಾಥಾ, ಬೈಕ್ ರ್ಯಾಲಿ, ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಸಹ ಮತದಾನ ಜಾಗೃತಿಗೆ ಮುಂದಾಗಿದ್ದು, ಹಲವು ಬಗೆಯ ವಿಡಿಯೊ ಮತ್ತು ಸ್ಟಿಕರ್ಗಳನ್ನು ತಾಣದಲ್ಲಿ ಹಾಕುತ್ತಿದ್ದಾರೆ. ಪತ್ರಿಕೆಗಳೂ ಸಹ ವಿವಿಧ ಕ್ಷೇತ್ರದ ಪ್ರಮುಖರಿಂದ ಮತದಾನದ ಸಂದೇಶ ನೀಡುತ್ತಿವೆ.
ಆದರೆ, ಮತದಾನ ಜಾಗೃತಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಲಗ್ನಪತ್ರಿಕೆ ವೃರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಚುನಾವಣಾ ಮದುವೆ ಆಮಂತ್ರಣ ಪತ್ರಿಕೆಯು ಎಲ್ಲ ಗುಂಪುಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ಮದುವೆ ಆಮಂತ್ರಣ ಪತ್ರಿಕೆಯ ಮೇಲೆ ಮತದಾನದ ಮಮತೆಯ ಕರೆಯೋಲೆ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಮತದಾರನೆಂಬ ವರನ ಜೊತೆಗೆ ಪ್ರಜಾಪ್ರಭುತ್ವವೆಂಬ ವಧುವಿನ ಮದುವೆಯನ್ನು ಭಾರತ ಚುನಾವಣಾ ಆಯೋಗವು ನಿಶ್ಚಯಿಸಿದೆ.
ಏ. 18 ಮತ್ತು 23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೆ ಮದುವೆ ಜರುಗಲಿದೆ. ದೇಶದ ಮತದಾರ ಪ್ರಭುಗಳೆಲ್ಲ ಚುನಾವಣಾ ಮದುವೆಗೆ ಆಗಮಿಸಿ ಉಡುಗೊರೆ ಕೊಡಬೇಕಿಲ್ಲ ಹಣ ಹೆಂಡ ಮೊದಲಾದವುಗಳ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಿದರೆ ಅದೇ ನಿಮ್ಮ ಉಡುಗೊರೆ ಎಂದು ಮದುವೆಯ ಕರೆಯೋಲೆಯಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸುವಲ್ಲಿ ನೈತಿಕ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗುವ ಈ ವಿಶೇಷ ಮತ್ತು ವಿಭಿನ್ನ ಮತದಾನದ ಕರೆಯೋಲೆ ಸಿದ್ಧಪಡಿಸಿದವರಾರು ಎಂಬ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಆದರೆ ಒಬ್ಬರಿಂದ ಒಬ್ಬರಿಗೆ ಪಕ್ಷ-ಜಾತಿ ಬೇದವಿಲ್ಲದೆ ಪಾರ್ವಡ್ ಆಗುತ್ತಿದೆ. ಓದಿದವರೆಲ್ಲರೂ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
