ತುಮಕೂರು

ತುಮಕೂರು ವಿಭಾಗದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎ.ಇ.ಇ.) ಹುದ್ದೆಗೆ ಇಬ್ಬರು ನೇಮಕವಾಗಿ ಅಧಿಕಾರ ಸ್ವೀಕರಿಸಿರುವರೆಂಬ ವಿಚಿತ್ರ ಪ್ರಸಂಗ ಶುಕ್ರವಾರ ಬೆಳಕಿಗೆ ಬಂದಿದೆ.
ಇಲ್ಲಿ ಎ.ಇ.ಇ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಎನ್.ಹೊನ್ನೇಶಪ್ಪ ಅವರಿಗೆ ಸ್ಮಾರ್ಟ್ಸಿಟಿ ಕಂಪನಿಗೆ ವರ್ಗವಾಗಿದೆ. ಆ ಕಾರಣದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಎ.ಇ.ಇ. ಹುದ್ದೆ ಖಾಲಿಯಾಗಿತ್ತು. ಈ ಹುದ್ದೆಗೆ ನೀರಾವರಿ ಇಲಾಖೆಯಲ್ಲಿದ್ದ ಎ. ನಟರಾಜ್ ಎಂಬುವವರು ಇದೇ ನವೆಂಬರ್ 4 ರಂದು ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಅದಾಗಿ ಇನ್ನೂ ಮೂರು ದಿನಗಳು ಕಳೆಯುವಷ್ಟರಲ್ಲೇ ನ.8 ರಂದು ದಿಢೀರನೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿದ್ದ ಎಸ್.ಆರ್. ಹರೀಶ್ ಎಂಬುವವರು ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಈಗ ಎ.ಇ.ಇ. ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ನಿಯುಕ್ತಿಗೊಂಡಂತಾಗಿದ್ದು, ಪ್ರಸ್ತುತ ವಿಚಿತ್ರ ಪರಿಸ್ಥಿತಿ ಉದ್ಭವವಾಗಿದೆ.
ಎ.ಇ.ಇ. ಅವರ ಕೊಠಡಿಯಲ್ಲಿ ಅವರ ಆಸನದ ಹಿಂಬದಿಯ ಫಲಕದಲ್ಲಿ ಎ.ನಟರಾಜ್ ಅವರ ಹೆಸರಿದೆ! ಅದೇ ಆಸನದ ಮುಂದಿನ ಮೇಜಿನ ಮೇಲೆ ಎಸ್.ಆರ್. ಹರೀಶ್ ಅವರ ನಾಮಫಲಕವಿದೆ ಹಾಗಾದರೆ ಹಾಲಿ ಇಲ್ಲಿ ಎ.ಇ.ಇ. ಯಾರು ಎಂಬ ದ್ವಂದ್ವ ತಲೆಯೆತ್ತಿದೆ. ಈ ವಿಷಯ ಪ್ರಸ್ತುತ ಲೋಕೋಪಯೋಗಿ ಕಚೇರಿಯಲ್ಲಿ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
