ಬಳ್ಳಾರಿ

ನಗರ ನೀರು ಸರಬರಾಜು ಮಂಡಳಿ ಹಾಗೂ ಮಹಾನಗರ ಪಾಲಿಕೆ ನಿರ್ವಹಣೆಯ ಕೊರತೆಯಿಂದ ಕುಡಿವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದೆ.
ಪಾರ್ವತಿ ನಗರದ ಸರ್ಕಾರಿ ವಸತಿ ನಿಲಯಗಳ ಸಂಕಿರಣ, ಈಶ್ವರ ಗುಡಿ ಪ್ರದೇಶ ಮತ್ತು ನಗರದ ಹಲವೆಡೆ ಈ ರೀತಿ ಪದೇ ಪದೇ ಪೈಪುಗಳು ಒಡೆದು ಹೋಗುತ್ತಿದ್ದರೂ ಅವುಗಳ ದುರಸ್ತಿ ಸಮರ್ಪಕವಾಗಿ ಆಗುತ್ತಿಲ್ಲ. ಪ್ರತಿ ಹದಿನೈದು ದಿನಕ್ಕೊಮ್ಮೆ ಪೈಪುಗಳ ಮೂಲಕ ಕುಡಿವ ನೀರು ಹರಿಯ ಬಿಡಲಾಗುತ್ತದೆ. ಇಂದೂ ಸಹ ನೀರನ್ನು ಪೈಪು ಮೂಲಕ ಹರಿಯ ಬಿಟ್ಟಾಗ ಪಾರ್ವತಿ ನಗರದಲ್ಲಿನ ಪೈಪು ಒಡೆದು ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿದೆ.
ನಗರಕ್ಕೆ ಅಲ್ಲಿಪುರ ನೀರು ಸಂಗ್ರಹಾಗಾರ ಮತ್ತು ಮೋಕಾ ನೀರು ಸಂಗ್ರಹಾಗಾರದಿಂದ ನೀರು ಪೂರೈಸಲಾಗುತ್ತದೆ. ಅಲ್ಲಿಪುರ ನೀರು ಶುದ್ಧೀಕರಣ ಘಟಕದಿಂದ ಮದರ್ ಟ್ಯಾಂಕ್ಗೆ, ಮದರ್ ಟ್ಯಾಂಕ್ ನಿಂದ ಪಾರ್ವತಿ ನಗರ ವಾಟರ್ ಡಿಸ್ಟ್ರಿಬ್ಯೂಟರ್ಸ್ ಮೂಲಕ ನೀರು ಪಾರ್ವತಿ ನಗರಕ್ಕೆ ಹರಿಯ ಬಿಡಲಾಗುತ್ತದೆ. ಆದರೆ ಪೈಪುಗಳು ಸಾಮಥ್ರ್ಯ ಕಳೆದುಕೊಂಡಿರುವುದರಿಂದ ಫೋರ್ಸ್ ಆಗಿ ಹರಿದು ಬರುವ ನೀರಿನಿಂದ ಪೈಪುಗಳು ಅಲ್ಲಲ್ಲಿ ಒಡೆದು ಹೋಗುತ್ತಿವೆ.
ಈ ಪ್ರದೇಶದಲ್ಲಿ ಪದೇ ಪದೇ ಪೈಪುಗಳು ಒಡೆದು ಹೋಗುವುದರಿಂದ ನೀರು ಮನೆ ಮನೆಗೆ ನುಗ್ಗುತ್ತದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇನ್ನಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹೊಸ ಪೈಪುಗಳನ್ನು ಅಳವಡಿಸಬೇಕು. ಅಮೂಲ್ಯವಾದ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆಂದು ಸ್ಥಳೀಐ ನಿವಾಸಿಗಳಾದ ಎರಿಸ್ವಾಮಿ, ಸುಂಕಣ್ಣ, ರಾಘವೇಂದ್ರ, ಮಧು, ವಿಜಯಲಕ್ಷ್ಮಿ, ಸರಸ್ವತಿ ಮತ್ತು ಶಕುಂತಲಾ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
