ಮೇಲ್ಮನೆಯಲ್ಲಿ ಮಸೂದೆ ಮಂಡನೆಗೆ ಬಿಡುವುದಿಲ್ಲ: ಸಿದ್ದರಾಮಯ್ಯ

ಬೆಂಗಳೂರು

     ರೈತರ ಹಕ್ಕುಗಳ ಜೊತೆಗೆ ಅವರ ಭೂಮಿಯನ್ನೂ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧಿಸುತ್ತೇವೆ. ವಿಧಾನ ಪರಿಷತ್‍ನಲ್ಲಿ ಬಿಜೆಪಿಗೆ ಅಗತ್ಯ ಬಹುಮತವಿಲ್ಲ. ಹಾಗಾಗಿ ಮೇಲ್ಮನೆಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

   ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಮತ್ತು ಜನತಾ ಅಧಿವೇಶನವನ್ನು ಬೆಂಬಲಿಸಿ ಹೋರಾಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು.

    ಬಳಿಕ ಮಾತನಾಡಿದ ಅವರು, ದೇಶದಲ್ಲಿರುವ ಕೃಷಿಕರು ಮತ್ತು ಕಾರ್ಮಿಕರಿಗೂ ಭೂಮಿಗೂ ತಲೆತಲಾಂತರದ ಸಂಬಂಧವಿದೆ. ಸಮಾಜದಲ್ಲಿ ಇವತ್ತು ನಾವು ಕರೆಯುವ ಪ್ರಾಥಮಿಕ ಮತ್ತು ದ್ವಿತೀಯ ಕೈಗಾರಿಕೆಗಳು ಸೇವಾ ವಲಯ ಇರಲಿಲ್ಲ. ಕೃಷಿಯೇ ಮೂಲ ಆಧಾರವಾಗಿತ್ತು. ರಾಜರು, ಪಾಳೆಗಾರರ ಕಾಲದಲ್ಲೂ ಕೃಷಿಯೇ ಮೂಲ ಆಧಾರವಾಗಿತ್ತು. ಕಾಲಾನಂತರ ಸೇವಾ ವಲಯ ಬಂದವು.

    ಈಗಲೂ ಕೈಗಾರಿಕಾ ವಲಯದ ಆದಾಯಗಳು ಕಡಿಮೆಯಾಗಿವೆ. ದೇಶಕ್ಕೆ ಸೇವಾ ವಲಯದ ಆದಾಯ ಶೇ 20 ರಷ್ಟು ಇದೆ. ಕೃಷಿ ವಲಯದ ಆದಾಯ ಶೇ 27-28 ಇದೆ ಎಂದು ಸಿದ್ದರಾಮಯ್ಯ ಹೇಳಿದರು.ಸ್ವಾತಂತ್ರ್ಯ ಪೂರ್ವದಲ್ಲ್ಲಿ ಪಾಳೇಗಾರರು, ಇನಾಮುದಾರರ ಒಡೆತನವಿರುತ್ತಿತ್ತು. ಅವರು ರೈತರು, ಕೃಷಿ ಕೂಲಿ ಕಾರ್ಮಿಕರ ಶ್ರಮದ ಲಾಭವನ್ನು ಅನುಭವಿಸುತ್ತಿದ್ದರು. ಈಗ, ಸರ್ಕಾರ ರೈತರ ಭೂಮಿಯನ್ನು ಕಾರ್ಪೋರೇಟ್‍ಗಳಿಗೆ ಕೊಟ್ಟು ರೈತರನ್ನು ಗುಲಾಮರನ್ನಾಗಿಸಲು ಮುಂದಾಗಿದೆ ಎಂದು ಅರೋಪಿಸಿದರು.

    ರೈತರಿಗೆ ಭೂಮಿ ನೀಡುವ ಉದ್ದೇಶದಿಂದ 1961 ರಲ್ಲಿ ಭೂಮಿ ಮರುಹಂಚಿಕೆ ಕಾಯ್ದೆ ಜಾರಿ ಮಾಡಲಾಗಿತ್ತು. ಅದಕ್ಕೆ 1974ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ಅನುಚ್ಛೇದ 63ರ ಪ್ರಕಾರ ಒಬ್ಬರಿಗೆ 10, 20, 30 ಯೂನಿಟ್ ಭೂಮಿ ಇರಬೇಕು. ಅದಕ್ಕಿಂತ ಜಾಸ್ತಿ ಇರಬಾರದು ಎಂದು ಹೇಳಲಾಗಿತ್ತು. ಆದರೆ, ಈಗ ಅದನ್ನು ಡಬಲ್ ಮಾಡುವುದಲ್ಲದೆ, ಯಾರು ಹೇಗೆ ಬೇಕಾದರೂ ರೈತರ ಭೂಮಿಯನ್ನು ಕಸಿದುಕೊಳ್ಳವಂತಹ ತಿದ್ದುಪಡಿತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಹೋರಾಟ ನಡೆಯುತ್ತಿದೆ. ನರೇಂದ್ರ ಮೋದಿ ಆಡಳಿತ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ. ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ನಮ್ಮ ದನಿಯನ್ನು ದಮನಿಸಲು ಇವರಾರು ಎಂದು ಕಿಡಿಕಾರಿದರು.
ವಿಧಾನ ಪರಿಷತ್‍ನಲ್ಲಿ ಈ ಮಸೂದೆ ಅಂಗೀಕಾರವಾಗಲು ಬಿಡಬಾರದು, ಮಂಡನೆ ಮಾಡಲು ಅವಕಾಶ ನೀಡಬಾದರು. ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್, ಜೆಡಿಎಸ್ ನ ಸಂಖ್ಯಾಬಲ ಹೆಚ್ಚಿದೆ.

    ಎರಡೂ ಪಕ್ಷಗಳು ಜೊತೆಗೂಡಿ ಮಸೂದೆ ಅಂಗೀಕಾರಕ್ಕೆ ಅವಕಾಶ ಕೊಡದಂತೆ ಪ್ರತಿಭಟನೆ ನಡೆಸಲು ಹೇಳುತ್ತೇವೆ. ಈ ಮಸೂದೆ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap