ಕೆರೆ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ : ಕೃಷ್ಣ ಬಾಜಪೇಯಿ

ಬ್ಯಾಡಗಿ:

     ಸರ್ಕಾರದ ಆಸ್ತಿಯನ್ನು ಬೇನಾಮಿ ಜನರು ಕೈಗೆ ಹೋಗುವುದಕ್ಕೆ ಕಡಿವಾಣ ಹಾಕಲಾಗುವುದು, ಕೆರೆ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ, ಬೃಹತ್ತಾದ ಹಿರೇನಂದೀಹಳ್ಳಿ ಕೆರೆಯಲ್ಲಿ ಉಳಿಮೆಗೆ ಮುಂದಾಗುವರನ್ನು ಪೋಲಿಸರ ಸಹಕಾರದೊಂದಿಗೆ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಸಂಬಂಧಿಸಿದ ತಹಶೀಲ್ಧಾರ ಮೇಲೆ ಕ್ರಮ ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಎಚ್ಚರಿಸಿದ ಘಟನೆ ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

     ರಾಜ್ಯದ ಎಲ್ಲಾ ರೈತರಿಗೂ ಕೆರಗಳೇ ಜೀವಾಳ, ಅವುಗಳಿದ್ದರೇ ಮಾತ್ರ ಕೃಷಿ ಸುಸೂತ್ರವಾಗಿ ನಡೆಯಲು ಸಾಧ್ಯ, ಅದರೆ ಕಳೆದ ಹತ್ತಾರು ವರ್ಷದಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಬತ್ತಿ ಹೋಗಿವೆ, ಇದನ್ನೇ ಬಂಢವಾಳ ಮಾಡಿ ಕೊಂಡ ಕೆಲ ಕೃಷಿಕರು ಕೆರೆಗಳನ್ನು ಒತ್ತುವರಿ ಮಾಡುತ್ತಿರುವ ಘಟನೆಗಳು ಜಿಲ್ಲೆಯಾದ್ಯಂತ ನಡೆದಿದೆ, ಈ ಹಿನ್ನೆಲೆಯಲ್ಲಿ ಸ್ವಇಚ್ಚೆಯಿಂದ ಕೆರೆಯ ಒಡಲನ್ನು ಬಿಟ್ಟು ಬಂದರೇ ಉತ್ತಮ ಇಲ್ಲದಿದ್ದರೇ ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದ ಎಚ್ಚರಿಸಿದ ಅವರು, ತಹಶೀಲ್ದಾರ ನಾಳೆಯಿಂದಲೇ ಈ ಕುರಿತು ಕ್ರಮವಹಿಸಿ ಕೆರೆ ಒತ್ತುವರಿಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

     ಕೆರೆಗಳ ಸುತ್ತ ಕ್ರಂಚ್ ಹೊಡೆಸಿ ಸಂರಕ್ಷಣೆ ಮಾಡಿ:ಹಾವೇರಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಭೂದಾಖಲೆಗಳ ಇಲಾಖೆಯ ಮೋಜಣಿದಾರರು ತಾಲೂಕಿನ ಬಹುತೇಕ ಕೆರೆಗಳನ್ನು ಹದ್ದಬಸ್ತ ಕಾರ್ಯ ಪೂರ್ಣಗೊಳಿಸಿದ್ದಾರೆ, ಕೂಡಲೇ ಸಣ್ಣ ನೀರಾವರಿ ಇಲಾಖೆಯವರು ಹಿರೇನಂದಿಹಳ್ಳಿ ಕೆರೆಭಾಗದಲ್ಲಿ ಯಾರೊಬ್ಬರು ಪ್ರವೇಶಿಸಿದಂತೆ ಕೆರೆಯ ಗಡಿಭಾಗದುದ್ದಕ್ಕೂ ದೊಡ್ಡ ಪ್ರಮಾಣದ ಕಾಲುವೆಯನ್ನು (ಕ್ರಂಚ್) ತೆಗೆದು ಪ್ರವೇಶವನ್ನು ನಿರ್ಭಂಧಿಸುವಂತೆ ಸೂಚಿಸಿದ ಅವರು, ಹಿರೇನಂದೀಹಳ್ಳಿ ಕೆರೆಯಲ್ಲಿ ಉಳಿಮೆ ಮಾಡುತ್ತಿದ್ದ ಪ್ರತಿಯೊಬ್ಬರು ಸರ್ಕಾರದಿಂದ ಲಕ್ಷಗಟ್ಟಲೇ ಹಣ ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದಾರೆ, ಇನ್ನಾದರೂ ರೈತರು ಕೆರೆಯ ತಂಟೆಗೆ ಹೋಗದಂತೆ ಮನವಿ ಮಾಡಿದರು.

ಕೇಂದ್ರ ಸ್ಥಳ ಬಿಟ್ಟು ಕದಲುವಂತಿಲ್ಲ:

        ತಾಲ್ಲೂಕ ಮಟ್ಟದ ಅಧಿಕಾರಿಗಳು ಕಛೇರಿಯಲ್ಲಿರದೇ ಕರ್ತವ್ಯ ಪಾಲನೆ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ, ಇದರಿಂದ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬುದರ ಕುರಿತು ಮಾದ್ಯಮಗಳಲ್ಲಿ ಕೂಡ ವರದಿಯಾಗಿದ್ದು, ಬ್ಯಾಡಗಿಯಲ್ಲಿಯೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇರೆ ಊರುಗಳಲ್ಲಿ ವಾಸ್ತವ್ಯ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ನಾಳೆಯಿಂದಲೇ ಕೇಂದ್ರ ಸ್ಥಳದಲ್ಲಿಯೇ ವಾಸ್ತವ್ಯ ಮಾಡುವ ಕುರಿತು ಕ್ರಮ ತೆಗೆದುಕೊಳ್ಳಬೇಕು ಇಲ್ಲದೇ ಇದ್ದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

       ಶೀಘ್ರದಲ್ಲೇ ಮುಖ್ಯರಸ್ತೆ ಅಗಲೀಕರಣ: ಪಟ್ಟಣದ ಮುಖ್ಯರಸ್ತೆ (ಸೊರಬ-ಗಜೇಂದ್ರಗಡ ಹೆದ್ದಾರಿ) ಅಗಲೀಕರಣ ಮಾಡುವಂತೆ ಹೋರಾಟ ಸಮಿತಿ ಸದಸ್ಯರು ಸಾಕಷ್ಟು ಒತ್ತಡ ಮಾಡುತ್ತಿದ್ಧಾರೆ, ಈ ಕುರಿತು ಭೂಸ್ವಾಧೀನ ಪ್ರಕ್ರಿಯೆಗೆ ರೂ.15.60 ಕೋಟಿ ಅನುಮೋದನೆಗಾಗಿ ಆರ್ಥಿಕ ಇಲಾಖೆಯಲ್ಲಿದೆ, ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಬಂಧಿಸಿದ ದಾಖಲೆಗಳನ್ನು ನೀಡುವ ಮೂಲಕ ಅನುಮೋದನೆ ಪಡೆದು ಶೀಘ್ರ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಕಂದಾಯ ಗ್ರಾಮಗಳ ಸರ್ವೇ ಬೇಗನೆ ಮುಕ್ತಾಯಗೊಳಿಸಿ:

        ಕಂದಾಯ ಗ್ರಾಮಗಳ ಸರ್ವೇ ಮಾಡುವ ಕೆಲಸ ಚುರುಕಾಗಿ ನಡೆಸಬೇಕು, ಸರ್ಕಾರಿ ಗೋಮಾಳ ಸೇರಿದಂತೆ ಗಾಂವಠಾಣಾ ಹದ್ದುಬಸ್ತ ಕೆಲಸವಾದರೇ, ಅಧೀಕೃತ ಹಾಗೂ ಅನಧೀಕೃತ ಮನೆಗಳ ಪಟ್ಟಿ ಸಿದ್ಧವಾಗುತ್ತದೆ, ಗ್ರಾಮದ ಪರಿಮಿತಿ ಹೆಚ್ಚಳಕ್ಕೂ ಸರ್ವೇ ಕಾರ್ಯದಿಂದ ಅನುಕೂಲವಾಗಲಿದ್ದು ಸಂಬಂಧಿಸಿದ ಸರ್ವೇ ನಂಬರ್‍ಗಳನ್ನು ಒಳಗೊಂಡಂತೆ ಗ್ರಾಮದ ನಕ್ಷೆಯನ್ನು ಸಿದ್ಧಪಡಿಸಲು ಕೇವಲ ಪಿಡಿಓಗಳೊಂದಿಗೆ ಮತ್ತೊಮ್ಮೆ ಸಭೆಯನ್ನು ನಡೆಸುವುದಾಗಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದರು.

ಕುಡಿಯುವ ನೀರು ಕೊರತೆಯಾಗದಂತೆ ನೋಡಿಕೊಳ್ಳಿ:

       ತಾಲೂಕಿನ ಯಾವುದೇ ಭಾಗದಲ್ಲಿಯೂ ಕುಡಿಯುವ ನೀರು ಕೊರತೆಯಾಗದಂತೆ ನೋಡಿಕೊಳ್ಳಬೇಕು, ಈ ಕುರಿತು ಪಿಡಿಓಗಳು ಮೈಮರೆತು ಕೆಲಸ ನಿರ್ವಹಸಿದರೇ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಪ್ರತಿ ಎರಡು ದಿನಕ್ಕೊಮ್ಮೆಯಾದರೂ ಭೇಟಿ ನೀಡುವ ಮೂಲಕ ಸಾರ್ವಜನಿಕರ ಕುಂದು ಕೊರತೆಗಳನ್ನು ಅಲಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು. ಸಭೆಯಲ್ಲಿ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ತಹಶೀಲ್ಧಾರ ಗುರುಪ್ರಸಾದ್, ಟಿಇಓ ಪರುಶರಾಮ ಪೂಜಾರ ಸೇರಿದಂತೆ ತಾಲ್ಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link