ಯೋಗ್ಯರ ಆಯ್ಕೆಯಿಂದ ಪ್ರಜಾಪ್ರಭುತ್ವಕ್ಕೆ ಬಲ

ಚಿತ್ರದುರ್ಗ:

      ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲಾಗಿರುವುದರಿಂದ ಅಮೂಲ್ಯವಾದ ಮತವನ್ನು ಯೋಗ್ಯರಿಗೆ ನೀಡುವ ಮೂಲಕ ದೇಶದ ಏಳಿಗೆಗೆ ಕಟಿಬದ್ದರಾಗಿರಿ ಎಂದು ಡಯಟ್ ಪ್ರಾಚಾರ್ಯರಾದ ಕೋದಂಡರಾಮಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ಜಿಲ್ಲಾ ಸ್ವೀಪ್ ಸಮಿತಿ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಮತದಾರರ ದಿನಾಚರಣೆ ಅಂಗವಾಗಿ ಡಯಟ್‍ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

        ಕೆಟ್ಟವರನ್ನು ಆಯ್ಕೆ ಮಾಡಿದರೆ ಕೆಟ್ಟ ಆಡಳಿತ ನೀಡುತ್ತಾರೆ. ಒಳ್ಳೆಯವರನ್ನು ಆಯ್ಕೆ ಮಾಡಿದರೆ ಒಳ್ಳೆ ಆಡಳಿತವಿರುತ್ತದೆ. ಅದಕ್ಕಾಗಿ ನಮ್ಮನ್ನು ಆಳುವವರು ಯೋಗ್ಯರಾಗಿರಬೇಕು. ಅಂತಹವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಸಾಧ್ಯ ಎಂದರು.

        ಚುನಾವಣೆಯಲ್ಲಿ ಹಣ ಪಡೆದು ಮತದಾನ ಮಾಡಿದರೆ ಗೆದ್ದು ಬಂದವರ ಬಳಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆಯುವ ಅಧಿಕಾರವಿರುವುದಿಲ್ಲ. ಉತ್ತಮ ಸೇವೆ ಮಾಡುವವರನ್ನು ಗೆಲ್ಲಿಸಿ. ವಿಶೇಷವಾಗಿ ಹಳ್ಳಿಗಾಡಿನಲ್ಲಿ ಶೇ.100 ಕ್ಕೆ ನೂರು ಮತದಾನವಾಗಬೇಕಾದರೆ ಮತದಾನಕ್ಕೆ ಪೋಷಕರ ಮನವೊಲಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

         ಡಯಟ್‍ನ ಹಿರಿಯ ಉಪನ್ಯಾಸಕ ರಾಜಣ್ಣ ಮಾತನಾಡಿ ಚುನಾವಣೆಯಲ್ಲಿ ಅಭ್ಯರ್ಥಿಗಳು ನೀಡುವ ಹಣ ಪಡೆದು ಭ್ರಷ್ಟರಾಗುವ ಬದಲು ದುಡಿಯುವ ಮಾರ್ಗ ಕಂಡುಕೊಳ್ಳಬೇಕು. ಇನ್ನು ಎರಡು ಮೂರು ವರ್ಷಗಳಲ್ಲಿ ನೀವುಗಳು ಮತದಾನ ಮಾಡಲಿದ್ದೀರಿ. ಪವಿತ್ರವಾದ ಚುನಾವಣೆ ಹಾಳುಗೆಡವಲು ಬಿಡಬೇಡಿ. ನಿಮ್ಮ ಒಳಿತಿನಲ್ಲಿ ದೇಶದ ಒಳಿತಿದೆ. ದೇಶದ ಒಳಿತಿನಲ್ಲಿ ನಿಮ್ಮ ಒಳಿತಿದೆ ಎನ್ನುವುದನ್ನು ಮನನ ಮಾಡಿಕೊಂಡು ಮತಚಲಾಯಿಸಿ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

        ಸರ್ವಶಿಕ್ಷ ಅಭಿಯಾನದ ತಿಪ್ಪೇಸ್ವಾಮಿ ಮಾತನಾಡುತ್ತ ಪ್ರಜ್ಞಾವಂತ ಸಮಾಜದಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಮತ ಚಲಾಯಿಸಿ ದೇಶ ಮತ್ತು ನಿಮಗೆ ಒಳಿತು ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಡಿ.ವೈ.ಪಿ.ಸಿ. ಎ.ಕೆ.ಕೆಂಗಪ್ಪ ಮಾತನಾಡಿ ಅಮೂಲ್ಯವಾದ ಮತವನ್ನು ಚುನಾವಣೆಯಲ್ಲಿ ಯಾರಿಗೆ ಹೇಗೆ ಚಲಾಯಿಸಬೇಕು ಎನ್ನುವ ಪ್ರಜ್ಞೆ ಮೂಡಿಸಿಕೊಂಡು ದೇಶದ ಹಿತ ಕಾಪಾಡುವ ಅರ್ಹರಿಗೆ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ನೋಡಲ್ ಅಧಿಕಾರಿ ಗೋವಿಂದಪ್ಪ, ವಿಷಯ ಪರಿವೀಕ್ಷಕ ಮಹಲಿಂಗಪ್ಪ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap