ಹುಳಿಯಾರು
ಹುಳಿಯಾರು ಹೋಬಳಿಯಾದ್ಯಂತ ಏ. 6, 7 ರಂದು ಯುಗಾದಿ ಹಬ್ಬವನ್ನು ಆಚರಿಸಲು ಜನರು ಸಿದ್ಧತೆ ನಡೆಸಿದ್ದರೆ, ಯುಗಾದಿ ಹಬ್ಬಕ್ಕೆ ಸ್ವಾಗತ ಕೋರಲು ಬೇವಿನ ಹೂಗಳು ಅರಳಿ ನಿಂತು ಕಣ್ಮನ ಸೆಳೆಯುತ್ತಿವೆ.
ವರಕವಿ ದ.ರಾ.ಬೇಂದ್ರೆಯವರ ‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ’ ಎನ್ನುವ ಕವಿತೆಯಲ್ಲಿನ ‘ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತ್ತಿದೆ’ ಎನ್ನುವ ಸಾಲಿನಂತೆ ಬೇವಿನ ಹೂಗಳು ಮರದ ತುಂಬೆಲ್ಲಾ ಅರಳಿದ್ದು ಸಮೀಪ ಹೋದರೆ ಸಾಕು ಸುವಾಸನೆ ಬೀರಿ ಹಿತಕರವಾದ ಅನುಭವ ನೀಡುತ್ತಿವೆ. ಯುಗಾದಿ ಹಬ್ಬದ ಸಂಭ್ರಮ ಹೆಚ್ಚಿಸಲು ಅಗತ್ಯವಾದ ಬೇವು ಪ್ರತಿ ಮರಗಳಲ್ಲಿ ಅರಳಿ ನಿಂತಿರುವುದು ಜನಸಾಮಾನ್ಯರಿಗೂ ಖುಷಿ ತಂದಿದೆ.
ಮಾವು, ಬೇವು, ಹುಣಸೆ, ಹೊಂಗೆ ಮುಂತಾದ ಮರಗಳು ಸಹ ಹಳೆಯ ಎಲೆಗಳನ್ನು ಉದುರಿಸಿ, ಹೊಸ ಚಿಗುರನ್ನು ಬಿಟ್ಟು ಕಂಗೊಳಿಸುತ್ತಾ ವಸಂತ ಕಾಲವನ್ನು ಸ್ವಾಗತಿಸಲು ಸಜ್ಜಾಗಿ ನಿಂತಿವೆ. ಹಿಂದೂ ಪಂಚಾಗದ ಪ್ರಕಾರ ಏ. 6 ರಿಂದ ಹೊಸ ವರ್ಷ ಆರಂಭವಾಗುತ್ತದೆ. ಹವಮಾವ ವೈಪರಿತ್ಯದಿಂದ ಕೆಲವೆಡೆ ಈಗಾಗಲೇ ಬೇವು, ಮಾವು ಕಾಯಿ ಸಹ ಬಿಟ್ಟಿವೆ. ಒಟ್ಟಾರೆ ಇಡೀ ಪರಿಸರವೇ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ.
ಯುಗಾದಿ ಹಬ್ಬದಿಂದ ಆರಂಭವಾಗುವ ವರ್ಷವನ್ನು ಸ್ವಾಗತಿಸಲು ಪಟ್ಟಣದ ಜನರು ತಯಾರಿ ನಡೆಸಿದ್ದಾರೆ. ಹಬ್ಬಕ್ಕೆ ಹೊಸ ಬಟ್ಟೆಯಿಂದ ಹಿಡಿದು, ಅಗತ್ಯ ಆಹಾರ ಪದಾರ್ಥಗಳ ಖರೀಧಿ ಜೋರಾಗಿ ನಡೆಯುತ್ತಿದೆ. ಹಳ್ಳಿಗರು ಹಬ್ಬಳ, ಉಪ್ಪಿನಕಾಯಿ ತಯಾರಿಸಿಕೊಂಡು ಸಿದ್ಧತೆ ನಡೆಸಿದ್ದಾರೆ. ಗುರುವಾರ ವಾರದ ಸಂತೆಯಲ್ಲಿ ಉಡುದಾರ, ತರಕಾರಿ, ಹಣ್ಣುಗಳ ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು. ಒಟ್ಟಾರೆ ಎಲ್ಲರ ಮನೆಗಳಲ್ಲೂ ಹಬ್ಬದ ಸಿದ್ಧತೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








