ಮಧುಗಿರಿ
ಬೇಸಿಗೆ ಆರಂಭಕ್ಕೂ ಮುನ್ನವೇ ಬರಗಾಲ ಪೀಡಿತ ಪ್ರದೇಶವೆಂದು ರಾಜ್ಯದ ಪಟ್ಟಿಯಲ್ಲಿ ಸತತವಾಗಿ ಹೆಸರು ಪಡೆದು ಕೊಳ್ಳುತ್ತಿರುವ ಮಧುಗಿರಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಭಾಗದ ಜನರು ಬರುವ ದಿನಗಳನ್ನು ನೆನೆಯುತ್ತಾ ಆತಂಕಕ್ಕೆ ಈಡಾಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 56 ಕೆರೆಗಳಿದ್ದರೂ ಯಾವ ಕೆರೆಯಲ್ಲೂ ಬೇಸಿಗೆ ಕಾಲ ಕಳೆಯುವಷ್ಟೂ ನೀರು ಇಲ್ಲದಂತಾಗಿದೆ. ಪಟ್ಟಣದ ಸಿದ್ದಾಪುರದ ಕೆರೆಗೆ ಮಾತ್ರ ಪೈಪ್ ಲೈನ್ ಮೂಲಕ ಈ ಬಾರಿ ಕೇವಲ ಶೇ.35ರಷ್ಟು ಮಾತ್ರ ಹೇಮಾವತಿ ನೀರು ಹರಿಸಿದ್ದು, ಕೇವಲ ಇನ್ನೂ 20 ದಿನಗಳು ಪಟ್ಟಣಕ್ಕೆ ನೀರು ಬಳಕೆಯಾಗಲಿದೆ. ಸುಮಾರು 308 ಗ್ರಾಮಗಳಲ್ಲಿ ಸಿದ್ದಾಪುರ, ತವಕದಹಳ್ಳಿ, ಶಂಭೋನಹಳ್ಳಿ, ಕೋಡಗದಾಲ, ಶ್ರೀರಾಂಪುರ, ಕಸಿನಾಯಕನಹಳ್ಳಿ, ಗುಡಿರೊಪ್ಪ ಕಾಲನಿ, ವೀರಗೊಂಡನಹಳ್ಳಿ ಸೇರಿದಂತೆ ಒಟ್ಟು 8 ಗ್ರಾಮಗಳಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಬವಣೆ ಕಂಡು ಬರುತ್ತಿದೆ.
ಇದುವರೆವಿಗೂ ಜೀವ ನದಿಗಳಾದ ಜಯಮಂಗಲಿ, ಸುವರ್ಣಮುಖಿ, ಪಿನಾಕಿನಿ ಎಂಬ ನದಿಗಳು ಅಕ್ರಮ ಮರಳುಗಾರಿಕೆಗೆ ತುತ್ತಾಗಿವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹಾಗಾಗಿ ಮತ್ತಷ್ಟು ಗ್ರಾಮಗಳು ನೀರಿನ ಅಭಾವಕ್ಕೆ ತುತ್ತಾಗಿ ನೀರಿಲ್ಲದ ಹಳ್ಳಿಗಳ ಪಟ್ಟಿಯು ದುಪ್ಪಟ್ಟಾಗಲಿದೆ. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಪ್ರತಿ ವಾರಕ್ಕೊಮ್ಮೆ, 25 ದಿನಗಳಿಗೊಮ್ಮೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸುತ್ತಾ ನೀರಿನ ವಿತರಣೆಯ ಬಗ್ಗೆ ಸಮಪರ್ಕವಾದಂತಹ ಕ್ರಮಗಳನ್ನು ಕೈಗೊಳ್ಳಲು ಪಂಚಾಯಿತಿ ಪಿಡಿಓ ಗಳಿಗೆ ಅಧಿಕಾರ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಕುಡಿಯುವ ನೀರಿನ ತ್ರೀವ್ರತೆ ಹೆಚ್ಚಿರುವ ಗ್ರಾಮಗಳಿಗೆ ಪ್ರತಿ ಟ್ಯಾಂಕರ್ಗೆ ಸುಮಾರು 550 ರೂಪಾಯಿಗಳ ದರವನ್ನು ಸರಕಾರ ನಿಗದಿ ಪಡಿಸಿ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಹರಿಸಲಾಗುತ್ತಿದೆ. ಇದಲ್ಲದೆ ಒಟ್ಟು 6 ಖಾಸಗಿ ಬೋರ್ ವೆಲ್ಗಳ ಮೂಲಕವೂ ಜನರಿಗಾಗಿ ನೀರು ಪಡೆಯಲಾಗುತ್ತಿದೆ. ಜೊತೆಯಲ್ಲಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸುಮಾರು 20 ದಿನಗಳಿಗೊಮ್ಮೆ ಕೊಳಾಯಿಗಳ ಮೂಲಕ ನೀರು ಹರಿಸುತ್ತಿರುವ್ಯದರಿಂದ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ನಾಗರಿಕರು ಮಣ್ಣು ತೂರುವಂತಹ ದೃಶ್ಯಗಳ ಜೊತೆಗೆ ಶಾಲೆಗೆ ಹೋಗುವ ಮನೆಯಲ್ಲಿನ ಮಕ್ಕಳನ್ನು ಶುಚಿಗೊಳಿಸಲು ಸಹ ನೀರಿಲ್ಲ. ಶೌಚಕ್ಕಾದರೂ ನೀರು ಕೊಡಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ವತಿಯಿಂದ 2017 ಮತ್ತು 2018ನೇ ಸಾಲಿನಿಂದ ಹಿಡಿದು ಇಲ್ಲಿಯ ವರೆವಿಗೂ ಸುಮಾರು 850 ರಿಂದ 1000 ಅಡಿಗಳ ವರೆಗೆ ಒಟ್ಟು 164 ಬೋರ್ ವೆಲ್ಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ 125 ರಲ್ಲಿ ಮಾತ್ರ ನೀರು ದೊರೆತಿದೆ ಹಾಗೂ 39 ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇಲ್ಲದಂತಾಗಿದೆ. ಜೊತೆಗೆ ಸುತ್ತ ಮುತ್ತಲ ಕೆರೆಗಳಲ್ಲಿ ನೀರು ಇಲ್ಲವಾಗಿರುವುದರಿಂದ ದಿನೆ ದಿನೆ ಅಂತರ್ ಜಲ ಮಟ್ಟವು ಸಹ ಕ್ಷೀಣಿಸುತ್ತಿರುವಂತಹ ವಾತಾವರಣ ಕಂಡು ಬರುತ್ತಿದೆ.
ತಾಲ್ಲೂಕಿನ ಪ್ರಮುಖ ಹಾಗೂ ಪ್ರಾಚೀನ ಬೃಹತ್ ಕೆರೆಯಾದ ಬಿಜವಾರ ಕೆರೆಯು ಮಳೆಗಾಲದಲ್ಲಿ ಕೋಡಿ ಬಿದ್ದರೆ, ಸುಮಾರು 7 ವರ್ಷಗಳ ಕಾಲ ತಾಲ್ಲೂಕು ಬರಗಾಲಕ್ಕೆ ತುತ್ತಾಗುತ್ತದೆ ಎಂಬ ಹಿರಿಯರ ಮಾತು ನಿಜವಾಗುತ್ತಿದೆ. 30 ವರ್ಷಗಳ ನಂತರ 2016 ರಲ್ಲಿ ತುಂಬಿತ್ತು. ಆದರೆ ಈಗ ಮಾತ್ರ ನೀರಿಲ್ಲದಂತಾಗಿದ್ದು, ಈ ಕೆರೆಯು ತುಂಬಿದ್ದರೆ ಸುತ್ತ ಮುತ್ತಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿರಲಿಲ್ಲ. ಆದರೆ ಈಗ ಸುಮಾರು ಅಡಿಗಳವರೆವಿಗೆ ಕೊರೆದಿರುವ ಫ್ಲೋರೈಡ್ ನೀರಿನ ಬೋರ್ವೆಲ್ಗಳನ್ನೇ ಜನರು ಆಶ್ರಯಿಸಬೇಕಾಗಿದೆ. ನೀರಿಲ್ಲದೆ ಜಾನುವಾರುಗಳ ಗೋಳು ಹೇಳ ತೀರದಾಗಿದೆ.
ಈಗಾಗಲೇ ತಾಲ್ಲೂಕಿನಲ್ಲಿ ಕಸಬಾ, ದೊಡ್ಡೇರಿ, ಮಿಡಿಗೇಶಿ, ಕೋಡಿಗೇನಹಳ್ಳಿ, ಪುರವರ, ಐಡಿಹಳ್ಳಿ ಹೋಬಳಿಗಳ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ತಾಲ್ಲೂಕಿನ ಯಾವುದೇ ಕೆರೆಗಳಲ್ಲೂ ನೀರಿಲ್ಲದೆ ಇರುವುದರಿಂದ ಗ್ರಾಮಸ್ಥರು ಸಾಮಾಜಿಕ ಜಾಲತಾಣದ ಮೂಲಕ ಮತ್ತು ಗ್ರಾಮ ಪಂಚಾಯಿತಿಗಳ ಮುಂದೆ ಖಾಲಿ ಕೊಡಗಳನ್ನು ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ತಾಲ್ಲೂಕಿನಲ್ಲಿ ಸಾಮಾನ್ಯವಾಗಿದೆ. ಗ್ರಾಮಕ್ಕೆ ನೀರು ಹರಿಸಲು ಬರುವ ಟ್ಯಾಂಕರ್ಗಳ ಚಾಲಕರು ಹಾಗೂ ಗ್ರಾಮಸ್ಥರ ನಡುವೆ ಹಗ್ಗ ಜಗ್ಗಾಟಗಳೂ ನಡೆಯುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
