ಚಿಕ್ಕನಾಯಕನಹಳ್ಳಿ
ಕೆರೆ ಹೂಳು ತೆಗೆಯಲು ನನ್ನ ಅಭ್ಯಂತರವಿಲ್ಲ. ಆದರೆ ಮರಳು ತೆಗೆಯಲು ನನ್ನ ವಿರೋಧವಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಸರಕಾರವೇ ಜೆ.ಸಿ.ಬಿ ಮುಖಾಂತರ ಮಣ್ಣು ತೆಗೆದು ರೈತರು ತಮ್ಮ ತೋಟಗಳಿಗೆ ಹೊಡೆದುಕೊಳ್ಳಲು ಹಣ ನೀಡುತ್ತಿದೆ.
ತಾಲ್ಲೂಕಿನಲ್ಲಿ 6 ಕೆರೆಗಳ ಹೂಳೆತ್ತುವ ಕಾರ್ಯಕ್ರಮಕ್ಕೆ ನಾನೇ ಚಿ.ನಾ.ಹಳ್ಳಿ, ನವಿಲೆ, ದುರ್ಗದಕೆರೆ, ಜೆ.ಸಿ.ಪುರ ಕೆರೆಗಳಲ್ಲಿ ಹೂಳೆತ್ತಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇನೆ. ರಾಜ್ಯದ ಕೆರೆಗಳಲ್ಲಿ ಶೇ. 30% ರಿಂದ 40% ರಷ್ಟು ಹೂಳು ತುಂಬಿಕೊಂಡಿದೆ. ಇದರಿಂದ ಮಳೆ ನೀರು ಕೆರೆಗಳಲ್ಲಿ ಶೇಖರಣೆಯಾಗದೆ, ಹೊರಗೆ ಹೋಗುತ್ತಿರುವುದರಿಂದ ಅಂತರ್ಜಲ ಕುಸಿದಿದ್ದು, ಸರ್ಕಾರವೇ ಕೆರೆ ಸಂಜೀವಿನಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಕೆರೆಯ ಹೂಳಿಗೂ, ಮರಳಿಗೂ ವ್ಯತ್ಯಾಸವಿದೆ. ಹೂಳು ತೆಗೆದರೆ ನೀರು ಕೆರೆಗಳಲ್ಲಿ ಶೇಖರಣೆಯಾಗುತ್ತದೆ. ಮರಳು ತೆಗೆದರೆ ಸುತ್ತಮುತ್ತಲ ಅಂತರ್ಜಲ ಕುಸಿದು ತೋಟಗಳಿಗೆ ಹಾನಿಯಾಗುತ್ತದೆ ಎಂದರು.
ಮರಳು ದಂಧೆ ಮಾಡುವವರು ಎಷ್ಟೇ ಒತ್ತಡ ಹಾಕಿದರೂ ಒತ್ತಡಕ್ಕೆ ಮಣಿಯುವುದಿಲ್ಲ ಎಂದ ಅವರು, ಕೆರೆಯ ಹೂಳು ತೆಗೆಯುವುದನ್ನು ನಿಲ್ಲಿಸದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಸಭೆಯಲ್ಲಿ ಹೇಳಿದ್ದೇನೆ ಎಂದರು.
ಇಟ್ಟಿಗೆ ಕಾರ್ಖಾನೆಯವರು ಕೆರೆಯ ಹೂಳನ್ನು ಕಾನೂನು ಪ್ರಕಾರ ರಾಜಧನ ಕಟ್ಟಿ (ಹೂಳು) ಮಣ್ಣನ್ನು ಕೆರೆಗಳಿಂದ ಹೊಡೆದುಕೊಳ್ಳಲು ತಮ್ಮ ಅಭ್ಯಂತರವಿಲ್ಲ. ರೈತರು ತಮ್ಮ ತೋಟಗಳಿಗೆ ಕೆರೆಯ ಮಣ್ಣನ್ನು ಕೆರೆ ಸಂಜೀವಿನಿ ಯೋಜನೆಯಲ್ಲಿ ಹೊಡೆದುಕೊಳ್ಳಬಹುದು ಎಂದರು.
ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ 26 ಕೆರೆಗಳಿಗೆ ಕುಡಿಯುವ ನೀರಿನ ಯೋಜನೆ ಇನ್ನೂ ಪ್ರಾರಂಭಿಸಿಲ್ಲ ಎಂಬ ಪ್ರಶ್ನೆಗೆ, ಜಮೀನು ವಶಪಡಿಸಿಕೊಂಡು ನಮಗೆ ಕಾಮಗಾರಿ ಮಾಡಲು ಜಮೀನು ಹಸ್ತಾಂತರಿಸಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಸರ್ಕಾರ ಜಮೀನು ವಶಪಡಿಸಿಕೊಂಡು ರೈತರಿಗೆ ಪರಿಹಾರ ನೀಡಲು ಐದು ಕೋಟಿ ರೂ. ಬಿಡುಗಡೆ ಮಾಡುತ್ತೇವೆ ಎಂದವರು ಇದುವರೆವಿಗೂ ಹಣ ಬಿಡುಗಡೆ ಮಾಡಿಲ್ಲ, ಗುತ್ತಿಗೆದಾರನ ಮನವೊಲಿಸಿ ಕೋರ್ಟ್ನ ಕೇಸ್ ವಾಪಸ್ ತೆಗೆಸಿ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದ್ದೇನೆ. ಅಕ್ಟೋಬರ್-ನವೆಂಬರ್ ಒಳಗೆ ನಾಲಾ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
