ಚಿತ್ರದುರ್ಗ;
ಚಿತ್ರದುರ್ಗ ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ ಜನರು ವಲಸೆ ಹೋಗದಂತೆ ಜನರಿಗೆ ಉದ್ಯೋಗ, ಆರೋಗ್ಯ ರಕ್ಷಣೆ ಹಾಗೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ಸೇವೆಗಳ ಇಲಾಖೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಪಂಕಜ್ಕುಮಾರ್ ಪಾಂಡೆಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲದಲ್ಲಿ ಬರಬೇಕಾಗಿದ್ದ ಮಳೆಯ ಕೊರತೆಯಿಂದ ಶೇ 50 ಕ್ಕಿಂತಲೂ ಹೆಚ್ಚಿನ ಬೆಳೆ ನಷ್ಟ ಉಂಟಾಗಿರುವುದರಿಂದ ಸರ್ಕಾರ ಈಗಾಗಲೇ ಬರಪೀಡಿತ ತಾಲ್ಲೂಕುಗಳೆಂದು ಎಲ್ಲಾ ತಾಲ್ಲೂಕುಗಳು ಘೋಷಣೆಯಾಗಿವೆ. ಮೊದಲ ಹಂತದಲ್ಲಿ ನಾಲ್ಕು ತಾಲ್ಲೂಕುಗಳು ಘೋಷಣೆಯಾಗಿದ್ದು ಎರಡನೇ ಹಂತದಲ್ಲಿ ಇನ್ನೆರಡು ತಾಲ್ಲೂಕುಗಳಿಗೆ ಆದೇಶವಾಗಿದೆ.
ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ, ಆರೋಗ್ಯ ರಕ್ಷಣೆ, ಶಿಕ್ಷಣ, ಕುಡಿಯುವ ನೀರು, ಕಾರ್ಮಿಕ ಸೌಲಭ್ಯಗಳನ್ನು ನೀಡುವ ಮೂಲಕ ಆತ್ಮಸ್ಥೈರ್ಯವನ್ನು ಮೂಡಿಸಬೇಕಾಗಿದೆ. ಉದ್ಯೋಗ ನೀಡಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಮುದಾಯ ಆಧಾರಿತ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು. ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೆಗಳು, ಸರ್ಕಾರಿ ಸ್ವಾಮ್ಯದ ಕಟ್ಟಡಗಳು, ಉದ್ಯಾನವನಗಳು ಸೇರಿದಂತೆ ಸಮುದಾಯ ಭವನಗಳ ಆವರಣದಲ್ಲಿ ಹಸಿರೀಕರಣಕ್ಕೆ ಮುಂದಾಗಬೇಕು ಎಂದರು
ಉದ್ಯೋಗ ಖಾತರಿಯಡಿ ಪ್ರಸಕ್ತ ಸಾಲಿನಲ್ಲಿ 68 ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದ್ದು ಈಗಾಗಲೇ 12 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಎಲ್ಲಾ ಜಾಬ್ ಕಾರ್ಡ್ದಾರರಿಗೂ ಅವರಿಗೆ ವೈಯಕ್ತಿಕವಾಗಿ ಖಾತೆಯನ್ನು ತೆರೆದು ನೇರವಾಗಿ ಅವರ ಖಾತೆಗೆ ಹಣ ಪಾವತಿ ಮಾಡಬೇಕು. 3.28 ಲಕ್ಷ ಜಾಬ್ ಕಾರ್ಡ್ದಾರರು ಜಿಲ್ಲೆಯಲ್ಲಿದ್ದು ಇದರಲ್ಲಿ 2.70 ಲಕ್ಷ ಆಧಾರ್ ಜೋಡಣೆ ಮಾಡಲಾಗಿದೆ. ಮುಂದಿನ 15 ದಿನಗಳಲ್ಲಿ ಜಾಬ್ ಕಾರ್ಡ್ದಾರರ ಬ್ಯಾಂಕ್ ಖಾತೆ ತೆರೆದು ಆಧಾರ್ ಜೋಡಣೆ ಮಾಡಲು ಜಿಲ್ಲಾ ಪಂಚಾಯತ್ ಸಿ.ಇ.ಓ.ಗೆ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾಸುರಕ್ಷಾ, ವೃದ್ದಾಪ್ಯ, ವಿಧವಾ, ಅಂಗವಿಕಲ, ಮೈತ್ರಿ ಹಾಗೂ ಮನಸ್ವಿನಿ ಯೋಜನೆಯಡಿ 204051 ಜನರಿಗೆ ಮಾಸಾಶನ ನೀಡಲಾಗುತ್ತಿದೆ. ಆದರೆ ಪ್ರತಿ ತಿಂಗಳು ತಲುಪುತ್ತಿಲ್ಲ ಎಂಬ ದೂರುಗಳಿವೆ. ಸ್ಮಾರ್ಟ್ ಕಾರ್ಡ್, ಖಜಾನೆ-2 ಹಾಗೂ ಅಂಚೆ ಕಚೇರಿ ಮೂಲಕ ವಿತರಣೆ ಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ಪಾವತಿಸುವ ಮಾಶಾಸನವು ವಿಳಂಬವಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದಾಗ ಅಂಚೆ ಅಧಿಕಾರಿಗಳೊಂದಿಗೆ ಚರ್ಚಿಸಲು ತಿಳಿಸಿದರು.
ಕುಡಿಯುವ ನೀರಿಗೆ ಮೀಟರ್; ವಿ.ವಿ.ಸಾಗರದಿಂದ ಕುಡಿಯುವ ನೀರನ್ನು ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆಗೆ ಪೂರೈಕೆ ಮಾಡಲಾಗುತ್ತಿದೆ. ಹಾಗೂ ಶಾಂತಿಸಾಗರದಿಂದಲೂ ಚಿತ್ರದುರ್ಗ, ಹೊಳಲ್ಕೆರೆ ಪಟ್ಟಣಕ್ಕೆ ಕಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ನೀರನ್ನು ವ್ಯರ್ಥವಾಗಿ ಉಪಯೋಗಿಸದೆ ಮಿತವಾಗಿ ಬಳಕೆ ಮಾಡಲು ಎಲ್ಲಾ ಹಂತದಲ್ಲಿಯು ಮೀಟರ್ಗಳನ್ನು ಅಳವಡಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ಗೆ ತಿಳಿಸಿ ಕಾನೂನು ಬಾಹಿರವಾಗಿ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದಲ್ಲಿ ಇವುಗಳನ್ನು ಕಡಿತಗೊಳಿಸಲು ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಬಯೋಮೆಟ್ರಿಕ್; ಜಿಲ್ಲೆಯಲ್ಲಿ ತಾಯಿ ಮರಣದ ದರ ಪ್ರತಿ 76.84 ಇದು ಒಂದು ಲಕ್ಷ ಜೀವಂತಕ್ಕೆ. ರಾಜ್ಯದಲ್ಲಿ ಇದು 108 ದರ ಇದ್ದು ಇದನ್ನು ಇನ್ನಷ್ಟು ಕಡಿಮೆ ಮಾಡಬೇಕಾಗಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು ಸೇರಿದಂತೆ ಎಲ್ಲಾ ಸಿಬ್ಬಂದಿಯವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾ ಆಸ್ಪತ್ರೆಯವರೆಗೆ ಎಲ್ಲಾ ಹಂತದಲ್ಲಿಯು ಬಯೋಮೆಟ್ರಿಕ್ ಹಾಜರಾತಿಯನ್ನು ಕಾರ್ಯಗತ ಮಾಡಲು ಸೂಚಿಸಿ ಔಷಧ ದಾಸ್ತಾನು ಇಡಲಾಗಿದೆ. ಹೆಚ್ಚಿನ ಔಷಧ ಬೇಕಾದಲ್ಲಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ನೀಡುವ ದೂರುಗಳು ಸೇರಿದಂತೆ ಪತ್ರಿಕೆಗಳಲ್ಲಿ ಬರುವ ದೂರುಗಳನ್ನು ಸಹ ಪರಿಹರಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ ಮುಂದಿನ 10 ದಿನಗಳಲ್ಲಿ ಬೆಳೆಸಮೀಕ್ಷೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಬರ ಇರುವುದರಿಂದ ಜನರಿಗೆ ಉದ್ಯೋಗ ನೀಡಲು, ಕುಡಿಯುವ ನೀರು ಪೂರೈಕೆಗೆ ಹಾಗೂ ಜಾನುವಾರುಗಳಿಗೆ ಬೇಕಾದ ಮೇವು ಸಂಗ್ರಹ ಹಾಗೂ ಮೇವು ಬೆಳೆಯಲು ಬೀಜದ ಕಿಟ್ಗಳ ವಿತರಣೆ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ರವೀಂದ್ರ, ಉಪವಿಭಾಗಾಧಿಕಾರಿ ವಿಜಯಕುಮಾರ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
