ಚಳ್ಳಕೆರೆ
ನಗರದ ಚಿತ್ರಯ್ಯನಹಟ್ಟಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಹಟ್ಟಿಯ ಗ್ರಾಮ ದೇವತೆಯಾದ ಮಾರಮ್ಮದೇವಿ ಜಾತ್ರೆಯನ್ನು ಸಂಭ್ರಮ, ಸಡಗರಗಳಿಂದ ಆಚರಣೆ ಮಾಡಲಾಯಿತು.
ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ದೇವಿಯ ಭಕ್ತರು ತಮ್ಮದೇಯಾದ ಕಟ್ಟುಪಾಡು ಮತ್ತು ಸಂಪ್ರದಾಯ ಅನ್ವಯ ಈ ಮಾರಮ್ಮ ದೇವಿ ಜಾತ್ರೆಯನ್ನು ಆಚರಣೆ ಮಾಡಿಕೊಂಡು ಬರುತ್ತಿದ್ಧಾರೆ. ಈ ಜಾತ್ರೆಯ ವಿಶೇಷವೆಂದರೆ, ದೇವಿಗೆ ಹರಿಕೆ ಹೊತ್ತ ನೂರಾರು ಮಹಿಳೆಯರು ಜಾತ್ರಾ ಸಂದರ್ಭದಲ್ಲಿ ದೇವಿಯ ಸನ್ನಿಧಿಯಲ್ಲೇ ಬಾಯಿಗೆ ಬೀಗ ಹಾಕುವ ಪದ್ದತಿ ಜಾರಿಯಲ್ಲಿದ್ದು, ಮಂಗಳವಾರವೂ ಸಹ ಹಲವಾರು ಮಹಿಳೆಯರು ಬಾಯಿಗೆ ಬೀಗ ದರಿಸಿ ದೇವಿಯ ಸನ್ನಿಧಿಯಲ್ಲಿ ಕುಳಿತು ಪ್ರಾರ್ಥಿಸಿದರು.
ಬಾಯಿಗೆ ಬೀಗ ಹಾಕಿಕೊಂಡ ಎಲ್ಲಾ ಮಹಿಳೆಯರು ದೇವಿಗೆ ವಾಡಿಕೆಯಂತೆ ಉಡಿಅಕ್ಕಿ ನೀಡುವರು. ಜಾತ್ರಾ ಸಂದರ್ಭದಲ್ಲಿ ಪೂಜಾರರು ಜಾತ್ರೆಯ ಹಿಂದಿನ ದಿನವೇ ಉಪವಾಸವಿದ್ದು, ದೇವಿಯ ಎಲ್ಲಾ ಪೂಜಾ ಕಾರ್ಯಕ್ರಮಗಳ ನಂತರ ಉಪಹಾರ ಸೇವಿಸುವ ಪದ್ದತಿ ಇದೆ. ಜಾತ್ರಾ ಸಂದರ್ಭದಲ್ಲಿ ಬಹುತೇಕ ಎಲ್ಲಾ ಪೂಜಾರರು ಉಪವಾಸವಿದ್ದುಕೊಂಡೇ ಈ ಹಬ್ಬವನ್ನು ಆಚರಿಸುತ್ತಾರೆ.
ತಾಲ್ಲೂಕಿನ ಗೌರಸಮುದ್ರ ಮಾರಮ್ಮದೇವಿ ಜಾತ್ರೆಯಂತೆ ಈ ಜಾತ್ರೆಯಲ್ಲೂ ಸಹ ಇಲ್ಲಿನ ಮೂಲ ದೇವತೆಗಳಾದ ಕಣಿವೆಮಾರಮ್ಮ, ಕುಕ್ಕವಾಡದಮ್ಮ, ಗೌರಸಮುದ್ರ ಮಾರಮ್ಮ ದೇವಿಯ ಉತ್ಸವ ಮೂರ್ತಿಗಳು ಜೊತೆಯಾಗಿ ಇಲ್ಲಿನ ದೇವಸ್ಥಾನಕ್ಕೆ ಆಗಮಿಸಿ ಭಕ್ತರಿಂದ ಪೂಜಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲಿ ಹರಿಕೆ ಹೊತ್ತವರು ತಮ್ಮ ಹರಿಕೆಯನ್ನು ಸಮರ್ಪಣೆ ಮಾಡುವರು. ಚಿತ್ರಯ್ಯನಹಟ್ಟಿಯಲ್ಲಿ ಪ್ರತಿವರ್ಷದ ಮಾರಮ್ಮನ ಉತ್ಸವ ಸಂದರ್ಭದಲ್ಲಿ ಈ ಮೂರು ದೇವತೆಗಳು ಒಗ್ಗೂಡುತ್ತಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಕೆ.ಶಿವಕುಮಾರ್(ವೆಂಕಟೇಶ್), ಕವಿತಾಬೋರಣ್ಣ, ಎಲ್ಐಸಿ ತಿಪ್ಪೇಸ್ವಾಮಿ, ಸೌಭಾಗ್ಯತಿಪ್ಪೇಸ್ವಾಮಿ, ಪೂಜಾರರಾದ ಮಂಜುನಾಥ, ನಾಗರಾಜ, ಪಾಪಣ್ಣ, ಮುಖಂಡರಾದ ರಂಗಣ್ಣ, ಬಡಗಿ ಪಾಪಣ್ನ, ಶ್ರೀನಿವಾಸ್, ರಾಮದಾಸ್, ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.