ಹಾಲು ಕೊಡೊ ಎಮ್ಮೆನ ತಿರಸ್ಕರಿಸಿ, ಗೊಡ್ಡೆಮ್ಮೆನ ಗೆಲ್ಲಿಸ್ತಿರೊ ಜನ

ದಾವಣಗೆರೆ:

       ಹಾಲು ಕೊಡುವ ಎಮ್ಮೆ ಕಾಲಲ್ಲಿ ಒದೆಯುತ್ತದೆಂದು, ಸರಿಯಾಗಿ ಹಾಲು ಕೊಡುವುದಿಲ್ಲವೆಂದು 20 ವರ್ಷದಿಂದಲೂ ದಾವಣಗೆರೆ ಲೋಕಸಭಾ ಕ್ಷೇತ್ರದ ಜನತೆ ಗೊಡ್ಡೆಮ್ಮೆಯೇ ಉತ್ತಮವೆಂದು, ಆಶೀರ್ವಾದ ಮಾಡಿ, ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರನವರು ಶಾಮನೂರು ಶಿವಶಂಕರಪ್ಪನವರಿಗೆ ತಿರಿಗೇಟು ನೀಡಿದ್ದಾರೆ.

       ತಮ್ಮನ್ನು ಹಾಗೂ ಉತ್ತರ ಶಾಸಕ ರವೀಂದ್ರನಾಥ್‍ರನ್ನು ಗೊಡ್ಡೆಮ್ಮೆಗಳೆಂದು, ಯಾವುದೇ ಕೆಲಸಕ್ಕೆ ಬಾರದವರೆಂಬುದಾಗಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಲೇವಡಿ ಮಾಜಿದ್ದು, ವಯಸ್ಸಾದ, ಹಿರಿಯರಾದ ಶಾಮನೂರು ಬಗ್ಗೆ ನಮಗೆ ಗೌರವವಿದೆ. ಗೊಡ್ಡೆಮ್ಮೆಗಳಾಗಿಯೇ ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ನಾವು ಮಾಡಿದ್ದೇವೆಂಬುದನ್ನು ಅರಿಯಲಿ ಎಂದು ಅವರು ತಿರುಗೇಟು ನೀಡಿದರು.

       ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಹಾಲು ಕರೆಯುವ ಎಮ್ಮೆಯು ಕಾಲಲ್ಲಿಒದೆಯುತ್ತದೆ, ಸರಿಯಾಗಿ ಹಾಲು ಕೊಡುವುದಿಲ್ಲವೆಂಬ ಕಾರಣಕ್ಕೆ ಜಿಲ್ಲೆಯ ಮತದಾರರು ಗೊಡ್ಡೆಮ್ಮೆಯನ್ನೇ 2 ದಶಕದಿಂದಲೂ ಆಯ್ಕೆ ಮಾಡಿದ್ದಾರೆ. ಹಾಲು ಕರೆಯುವ ಎಮ್ಮೆಗಿಂತ ಗೊಡ್ಡೆಮ್ಮೆಯೇ ಉತ್ತಮವೆಂಬುದೂ ಜನರಿಗೆ ಗೊತ್ತಿದೆ. ಗೊಡ್ಡೆಮ್ಮೆಗಳಂತೆಯೇ ದಾವಣಗೆರೆ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆ ಎಂದು ಅವರು ತಿಳಿಸಿದರು.

       ಬಿಜೆಪಿ ಸಂಸದ, ಶಾಸಕರು ಉಪಯೋಗಕ್ಕೆ ಬರುವುದಿಲ್ಲವೆಂದು ಟೀಕಿಸಿದ್ದಾರೆ. ನಾವು ಯಾರಿಗೂ ಒಂದು ಬಿಲ್ಲೆಯನ್ನೂ ಕೊಡುವುದಿಲ್ಲವೆಂದಿದ್ದಾರೆ. ಹೌದು, ನಾವು ಯಾರಿಗೂ ನಡೆಯದ ಬಿಲ್ಲೆ ಹೋಗಿ ಎಷ್ಟೋ ವರ್ಷಗಳೇ ಆಗಿವೆ. ನಡೆಯುವಂತಹ ನಾಣ್ಯವನ್ನು ಬಡವರು, ಧಾರ್ಮಿಕ ಮಠ, ಮಂದಿರ, ದೇವಸ್ಥಾನ, ಸಮಾಜದ ಕೆಲಸಕ್ಕೆ, ಬಡ ರೋಗಿಗಳ ಆಸ್ಪತ್ರೆ ಖರ್ಚಿಗೆ ನಮ್ಮ ಇತಿಮಿತಿ ನೋಡಿ, ಕೊಡುತ್ತಿದ್ದೇವೆ ಎಂದು ಶಾಮನೂರು ಟೀಕೆಗೆ ಅವರು ಉತ್ತರಿಸಿದರು.

      ಶಿವಶಂಕರಪ್ಪನವರಷ್ಟು ನಾವು ಶ್ರೀಮಂತರಲ್ಲ, ಈ ಹಿರಿಯರಷ್ಟು ಆದಾಯವೂ ನಮಗಿಲ್ಲ. ನಮಗೆ ಬಂದಿದ್ದರಲ್ಲೇ ಸಾಕಷ್ಟು ದಾನ ಧರ್ಮಕ್ಕೆಂದು ನೀಡುತ್ತಿದ್ದೇವೆ.

      ಸಂಸದನಾಗಿದ್ದ ಶಾಮನೂರು ಅವದಿಯಲ್ಲಿ ಜಿಲ್ಲೆಗೆ ಏನು ಮಾಡಿದ್ದರೆಂಬ ಮಾಹಿತಿ ಬಹಿರಂಗಪಡಿಸಲಿ. ನನ್ನ ಅವದಿಯಲ್ಲಿ ನಾನೇನು ಕೆಲಸ, ಅಭಿವೃದ್ಧಿ ಕಾರ್ಯ ಕೈ ಗೊಂಡಿದ್ದೇವೆಂಬ ಬಗ್ಗೆ ನಾನೂ ಕರಪತ್ರ ಹೊರಡಿಸಿದ್ದೇನೆ. ಶಿವಶಂಕರಪ್ಪ ತಮ್ಮ ಸಾಧನೆ ಬಹಿರಂಗಗೊಳಿಸಲಿ ಎಂದು ಅವರು ಹೇಳಿದರು.

      ಯುಪಿಎ ಸರ್ಕಾರವಿದ್ದಾಗ ನಾನೂ ಸಾಕಷ್ಟು ಯೋಜನೆ, ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ. ಮಹಿಳೆಯರು, ಮಕ್ಕಳು, ಹಿರಿಯ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಸರ್ಕಾರದ ನೆರವಿನ ಜೊತೆಗೆ ವೈಯಕ್ತಿಕವಾಗಿಯೂ ಸಾಕಷ್ಟು ಜನರಿಗೆ ನೆರವಿನ ಹಸ್ತ ಚಾಚಿದ್ದೇನೆ.

       4 ವರ್ಷದಲ್ಲಿ ಏನೇನು ತಂದಿದ್ದೇನೆಂಬುದಕ್ಕೆ ಕರಪತ್ರ ಹೊರ ತಂದಿದ್ದೇನೆ. ಶಾಸಕ ಶಾಮನೂರು ತಮ್ಮ ಸಾಧನೆ ಬಹಿರಂಗಪಡಿಸಲಿ ಎಂದು ಸಂಸದ ಸಿದ್ದೇಶ್ವರ ತೀಕ್ಷ್ಮವಾಗಿ ಪ್ರತಿಕ್ರಿಯಿಯಿಸಿದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap