ಪಾವಗಡ
ಪಾವಗಡ ತಾಲ್ಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿಯ ಪಿಡಿಒ ರಾಜಶೇಖರ್ ಕಾರ್ಯವೈಖರಿಯನ್ನು ಖಂಡಿಸಿ ಗ್ರಾ.ಪಂ. ಅಧ್ಯಕ್ಷೆ ಹಾಗೂ ಸದಸ್ಯರು ಗ್ರಾ.ಪಂ. ಕಚೇರಿಗೆ ಗುರುವಾರ ಬೀಗ ಜಡಿದು ಪಿಡಿಒ ವಿರುದ್ದ ಧಿಕ್ಕಾರ ಕೂಗಿದ ಘಟನೆ ಜರುಗಿದೆ.
ಬೀಗ ಜಡಿದು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಾತನಾಡಿ, ಪಿಡಿಒ ರಾಜಶೇಖರ್ ಅಧ್ಯಕ್ಷರು ಮತ್ತು ಸದಸ್ಯರ ಮಾತಿಗೆ ಕಿವಿಕೊಡದೇ ಪ್ರತಿಯೊಂದಕ್ಕೂ ಲಂಚ ಪಡೆಯುತ್ತಾರೆ. ಅಲ್ಲದೇ ಪಿಡಿಒ ವಾರಕ್ಕೆ ಮೂರು ದಿನ ಮಾತ್ರ ಕಚೇರಿಗೆ ಆಗಮಿಸಿ, ಗೈರಾದ ಉಳಿದ ದಿನಗಳ ಹಾಜರಾತಿಯಲ್ಲಿ ಸಹಿ ಮಾಡುವುದು. ನರೇಗಾ ಯೋಜನೆಯಲ್ಲಿ ಬಿಲ್ ಮಾಡಲು ಶೇ 25. ರಷ್ಟು ಲಂಚ ಪಡೆಯುವುದು ಮತ್ತು ಶೌಚಾಲಯದ ಬಿಲ್ ಪಾಸ್ ಮಾಡಲು 2 ಸಾವಿರ, ಮನೆಗಳ ಖಾತೆ ಮಾಡಲು 8 ಸಾವಿರ ಲಂಚ ಪಡೆಯುತ್ತಾರೆ. ಯಾವುದೇ ಕೆಲಸ ಮಾಡುತ್ತಿಲ್ಲ. ಸಿಬ್ಬಂದಿ ವಿರುದ್ದ ದೌರ್ಜನ್ಯ ಎಸಗುತ್ತಾರೆ ಎಂದು ಆರೋಪಿಸಿದರು.
ಗ್ರಾ.ಪಂ. ಸದಸ್ಯೆ ಸಿದ್ದಗಂಗಮ್ಮ ಮಾತನಾಡಿ, ಪಿಡಿಒ ರಾಜಶೇಖರ್ ಕಳೆದ 1 ವರ್ಷದ ಹಿಂದೆ ವರ್ಗಾವಣೆಯಾಗಿ ಇಲ್ಲಿಗೆ ಬಂದಿದ್ದು, ಜಿ.ಪಿ.ಎಸ್. ಮಾಡಲು ಹಣ ಕೇಳುತ್ತಾರೆ. ಸದಸ್ಯರ ಮಾತಿಗೆ ಯಾವುದೇ ಕಿಮ್ಮತ್ತು ನೀಡುವುದಿಲ್ಲ. ಆದ್ದರಿಂದ ಈತನ ಲಂಚ ಪಡೆದ ಎಲ್ಲಾ ಅವ್ಯವಹಾರಗಳನ್ನು ತನಿಖೆಗೊಳಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬೀಗ ಜಿಡಿದ ಸುದ್ದಿ ತಿಳಿದು ತಾ.ಪಂ. ಇಓ. ನರಸಿಂಹಮೂರ್ತಿ ಕನ್ನಮೇಡಿ ಗ್ರಾ.ಪಂ.ಗೆ ಭೇಟಿ ನೀಡಿ ಬೀಗ ತೆರವುಗೊಳಿಸಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮತ್ತು ಸದಸ್ಯರೊಂದಿಗೆ ಸಂಧಾನ ಸಭೆಯನ್ನು ನಡೆಸಿದರು.
ಸದಸ್ಯರಾದ ಶಿವಾನಂದ, ಚಿತ್ತಮ್ಮ, ಪೂಜಾರಪ್ಪ, ಸಿದ್ದರಾಜು, ಈರಣ್ಣ, ಮುಖಂಡರಾದ ಚಿತ್ತಗಾನಹಳ್ಳಿಚಂದ್ರಶೇಖರ್, ದ್ಯಾವಯ್ಯನಪಾಳ್ಯ ನಾಗೇಂದ್ರ, ರೈತ ಮುಖಂಡರಾದ ಕರಿಯಣ್ಣ, ತಿಮ್ಮರಾಯಪ್ಪ, ಎ.ಪಿ.ಎಂ.ಸಿ. ಸದಸ್ಯರಾದ ಶಿವಮೂರ್ತಿ, ನರಸಿಂಹಪ್ಪ, ಈರಣ್ಣ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
