ಮಾರ್ಚ್ 28ರಂದು ಕೃಷಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಚಳ್ಳಕೆರೆ

         ರಾಜ್ಯ ಸರ್ಕಾರ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಪ್ರದೇಶವನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಈಗಾಗಲೇ ಘೋಷಿಸಿದ್ದು, ಈ ಭಾಗದ ಅತಿ ಹೆಚ್ಚು ರೈತರು ಬೆಳೆ ನಷ್ಟ ಪರಿಹಾರ, ಶೇಂಗಾ ಇನ್‍ಪುಡ್ ಸಬ್ಸಿಡಿ, ಖಾಸಗಿ ಕಂಪನಿಗಳ ಬೆಳೆ ವಿಮೆ ಹಣ ಪಾವತಿಸಿ ಹತ್ತು ತಿಂಗಳಾದರೂ ರೈತರಿಗೆ ಯಾವುದೇ ರೀತಿಯ ಸಬ್ಸಿಡಿ ಪರಿಹಾರದ ಹಣ ಇದುವರೆಗೂ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 28ರ ಗುರುವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತಿಳಿಸಿದರು.

         ಅವರು, ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ಕಳೆದ 10 ದಿನಗಳಿಂದೆಯೇ ಇಲ್ಲಿನ ಜಂಟಿ ಕೃಷಿ ನಿರ್ದೇಶಕ ಕಚೇರಿಗೆ ಭೇಟಿ ನೀಡಿ ಮಾರ್ಚ್ 25ರೊಳಗೆ ರೈತರಿಗೆ ನೀಡಬೇಕಾದ ಬೆಳೆ ನಷ್ಟ ಪರಿಹಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಲಾಗಿತ್ತು.

         25ರ ನಂತರ ರೈತರ ಯಾವುದೇ ಬೇಡಿಕೆ ಈಡೇರಿದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ವಷ್ಟವಾಗಿ ತಿಳಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ರೈತರಿಗೆ ಸಬ್ಸಿಡಿ ಹಣ ಅವರ ಖಾತೆಗೆ ಜಮಾವಾಗಿರುವುದಿಲ್ಲ. ಈ ಬಗ್ಗೆ ಇಲ್ಲಿನ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹ ಅಸಾಯಕತೆ ವ್ಯಕ್ತ ಪಡಿಸಿದ್ದು, ರೈತರ ಉಳಿವಿಗಾಗಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವೆಂದರು.

           ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದು ಅವರು ಸಹ ಯಾವುದೇ ಸೂಕ್ತ ಉತ್ತರ ನೀಡಿಲ್ಲ.ಮಾರ್ಚ್ 28ರಂದು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಕಾರ್ಯಕ್ಕೆ ತಾಲ್ಲೂಕಿನ ಎಲ್ಲಾ ಭಾಗದ ರೈತರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ ಅವರು ಮನವಿ ಮಾಡಿದ್ಧಾರೆ. ಈ ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶಂಕರಪ್ಪ ಸೇರಿದಂತೆ ರೈತ ಸಂಘದ ಅನೇಕ ದುರೀಣರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link