ಚಿತ್ರದುರ್ಗ:
ಕೂಲಿ ನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ದಿನನಿತ್ಯದ ದುಡಿಮೆಯಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಬೇಕೆಂಬ ಮಹದಾಸೆಯಿಂದ ಗ್ರೇಟ್ಫೋರ್ಟ್ ಮೈನಾರಿಟಿ ಮಲ್ಟಿ ಪರ್ಪಸ್ ಸೌಹಾರ್ಧ ಕೋಆಪರೇಟಿವ್ ಲಿಮೆಟೆಡ್ಗೆ ಪಿಗ್ಮಿ, ಆರ್.ಡಿ.ರೂಪದಲ್ಲಿ ಹಣ ಕಟ್ಟಿ ಟೋಪಿ ಹಾಕಿಸಿಕೊಂಡಿರುವ ನೂರಾರು ಮಹಿಳೆಯರು ಮಂಗಳವಾರ ಪ್ರವಾಸಿಮಂದಿರದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಯನ್ನು ಭೇಟಿಯಾಗಿ ನಮ್ಮ ಹಣ ನಮಗೆ ಕೊಡಿಸಿಕೊಡಿ ಎಂದು ಗೋಳಾಡಿದರು.
ಹಣ ಕಳೆದುಕೊಂಡು ಬರಿಗೈಲಿರುವ ನೂರಾರು ಬಡ ಮಹಿಳೆಯರನ್ನು ಕಂಡು ಮಮ್ಮಲ ಮರುಗಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕೋಟೆ ಠಾಣೆ ಇನ್ಸ್ಪೆಕ್ಟರ್ ಫೈಜುಲ್ಲಾರವರನ್ನು ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಸಂಬಂಧಪಟ್ಟವರನ್ನು ಪತ್ತೆ ಹಚ್ಚಿ ಅವರವರ ಹಣವನ್ನು ತುರ್ತಾಗಿ ಕೊಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
ಮಕ್ಕಳ ಶಿಕ್ಷಣ, ಮದುವೆ ಹೀಗೆ ಅನೇಕ ಕನಸುಗಳನ್ನು ಹೊತ್ತ ನೂರಾರು ಬಡವರು ಹಣವನ್ನು ತೊಡಗಿಸಿ ಕಳೆದುಕೊಂಡಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಗ್ರೇಟ್ಫೋರ್ಟ್ ಮೈನಾರಿಟಿ ಮಲ್ಟಿ ಪರ್ಪಸ್ ಸೌಹಾರ್ಧ ಕೋಆಪರೇಟಿವ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಶಕೀಲ್, ಮ್ಯಾನೇಜರ್ ಜಬೀವುಲ್ಲಾ ಇವರುಗಳ ಮೇಲೆ ಕಾನೂನು ರೀತಿಯ ಕ್ರಮವನ್ನಾದರೂ ಕೈಗೊಳ್ಳಿ ಇಲ್ಲವೇ ಮಾತುಕತೆ ಮೂಲಕವಾದರೂ ಬಗೆಹರಿಸಿ ಬಡವರ ಹಣ ಅವರ ಕೈಸೇರುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ಬೆವರು ಸುರಿಸಿ ದುಡಿದ ಹಣಕ್ಕೆ ದೋಖ ಆಗಬಾರದು ಎಂದರು.
ವ್ಯವಸ್ಥಾಪಕ ನಿರ್ದೇಶಕ ಹಾಗೂ ಮ್ಯಾನೇಜರ್ ಇವರುಗಳು ಕಳೆದ ಒಂದುವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದಾರೆ. ಕುಂಚಿಗನಹಾಳ್ ಕಣಿವೆ ಬಳಿ ಜಮೀನು, ಸಂತೆಹೊಂಡ, ತಮಟಕಲ್ಲು, ಪಾಪೇನಹಳ್ಳಿ ಬಳಿ ಇವರ ಆಸ್ತಿಯಿದೆ. ಅವೆಲ್ಲವನ್ನು ಮುಟ್ಟುಗೋಲು ಹಾಕಿಕೊಂಡು ನಮ್ಮ ಹಣವನ್ನು ನಮಗೆ ಕೊಡಿಸಿ ನಿಮಗೆ ಪುಣ್ಯ ಬರುತ್ತದೆ ಎಂದು ಹಣ ಕಳೆದುಕೊಂಡ ನೂರಾರು ಬಡವರು ಶಾಸಕರನ್ನು ಗೋಗರೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
