ಹರಪನಹಳ್ಳಿ:
ಹಕ್ಕುಪತ್ರ ವಿತರಣಾ ಕಾರ್ಯವನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಧಿಕಾರಿಗಳೇ ಮನೆ ಮನೆಗೆ ತೆರಳಿ ವಿತರಣೆ ಮಾಡಲಿದ್ದಾರೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಅಕ್ರಮ ಸಕ್ರಮ ಯೋಜನೆಯಡಿ ಮನೆಗಳ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ಬಹುದಿನಗಳಿಂದ ಹಕ್ಕುಪತ್ರ ವಿತರಣೆಗೆ ತೊಡಕಾಗಿದ್ದ ಸಮಸ್ಯೆಗಳನ್ನು ತಹಶೀಲ್ದಾರ ನಾಗವೇಣಿ ಅವರು ನಿವಾರಿಸಿದ್ದಾರೆ. ಹಕ್ಕುಪತ್ರ ಪಡೆಯುವುದರಿಂದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಹಾಗೂ ಪರಭಾರೆ ಮಾಡಲು ಸಹಕಾರಿಯಾಗಲಿದೆ. ಈಗ ತಾತ್ಕಾಲಿಕ ಪತ್ರ ನೀಡಲಾಗುತ್ತಿದ್ದು, ಹಣ ಪಾವತಿಸಿದ ನಂತರ ಅಧಿಕೃತ ಪತ್ರ ಪಡೆಯಬಹುದು’ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಾತನಾಡಿ, `ಹಕ್ಕುಪತ್ರ ಪಡೆಯಲು ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಇತ್ತು. ಅದನ್ನು ಶಾಸಕರು ನೆರವೇರಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳು 5 ಸಾವಿರ ಹಾಗೂ ಇನ್ನುಳಿದ ಎಲ್ಲ ವರ್ಗದವರೂ 10 ಸಾವಿರ ಶುಲ್ಕ ಪಾವತಿಸಿ ಅಧಿಕೃತ ಹಕ್ಕುಪತ್ರ ಪಡೆಯಬೇಕು. ಪಟ್ಟಣದ ಇಸ್ಲಾಂಪುರ, ಚಿಕ್ಕೇರಿಗುಂಡಿ ಹಾಗೂ ಇತರೆಡೆ ಇರುವ ನಿವಾಸಿಗಳನ್ನು ಗುರುತಿಸಿ ನೋಟಿಸ್ ನೀಡಿ ಅವರಿಗೆ ಹಕ್ಕುಪತ್ರ ನೀಡಲಾಗುವುದು’ ಎಂದರು.
ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಮೆಹಬೂಬ್ಸಾಬ್, ಕೃಷ್ಣ, ವಿಜಯಲಕ್ಷ್ಮಿ, ಡಿಷ್ ವೆಂಕಟೇಶ್, ಮ್ಯಾಕಿ ದುರುಗಪ್ಪ, ಮುಖಂಡರಾದ ಎಂ.ಪಿ.ನಾಯ್ಕ್, ತಹಶೀಲ್ದಾರ ಡಾ.ನಾಗವೇಣಿ, ಮುಖ್ಯಾಧಿಕಾರಿ ನಾಗರಾಜನಾಯ್ಕ್, ಆರೋಗ್ಯ ಅಧಿಕಾರಿ ಮಂಜುನಾಥ ಇವರೂ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/23-hrp-2.jpg)