ಸೌಹಾರ್ದ ಸೊಸೈಟಿ ಮುಸುಕಿನಲ್ಲಿ ದುಬಾರಿ ಬಡ್ಡಿ ದಂಧೆ…!!!!

ಬೆಂಗಳೂರು

      ಸೌಹಾರ್ದ ಸೊಸೈಟಿ ತೆರೆದು ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿಸ್ತೂಲ್, 4 ಗುಂಡುಗಳು, ಜಿಂಕೆ ಕೊಂಬುಗಳು, ಆಸ್ತಿ-ಪಾಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

      ವಿಲ್ಸನ್ ಗಾರ್ಡನ್‍ನ 4ನೇ ಕ್ರಾಸ್‍ನ ಉದಯ್ ಗೋಪಾಲ್ ಶೆಟ್ಟಿ (54) ಬಂಧಿತ ಆರೋಪಿಯಾಗಿದ್ದಾನೆ,ವಿಲ್ಸನ್‍ಗಾರ್ಡನ್‍ನಲ್ಲಿ ಶ್ರೀಹರಿ ಎಂಟರ್‍ಪ್ರೈಸಸ್ ಜೊತೆಗೆ ಮುನೇಶ್ವರ ಸೌಹಾರ್ದ ಸೊಸೈಟಿ ಕಚೇರಿ ತೆರೆದು ಸಾರ್ವಜನಿಕರಿಗೆ ದುಬಾರಿ ಬಡ್ಡಿಗೆ ಹಣ ನೀಡುತ್ತಿದ್ದನು.

       ಸಂಜಯ್ ನಗರದ ಅಬ್ದುಲ್ ರೆಹಮಾನ್ ಎಂಬುವರಿಗೆ ಉದಯ್ ಗೋಪಾಲ್ ಶೆಟ್ಟಿ ಸಾಲವಾಗಿ ಹಣ ನೀಡಿದ್ದು, ಅಸಲು, ಬಡ್ಡಿಯನ್ನು ತೀರಿಸಿದ್ದರೂ, ದುಬಾರಿ ಬಡ್ಡಿಗೆ ಕಿರುಕುಳ ನೀಡುತ್ತಿದ್ದನು ಹೆಚ್ಚಿನ ಬಡ್ಡಿ ನೀಡದಿದ್ದರಿಂದ ಅಬ್ದುಲ್ ರೆಹಮಾನ್ ಅವರ ಮನೆಗೆ ಅಕ್ರಮವಾಗಿ ನುಗ್ಗಿ ಪಿಸ್ತೂಲ್‍ನಿಂದ ಜೀವ ಬೆದರಿಕೆ ಹಾಕಿದ್ದನು.

       ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತರು, ಸಿಸಿಬಿಗೆ ಪ್ರಕರಣವನ್ನು ವರ್ಗಾಯಿಸಿದ್ದರು.ಈ ಸಂಬಂಧ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರು ಉದಯ್ ಗೋಪಾಲ್ ಶೆಟ್ಟಿ ಅವರನ್ನು ಬಂಧಿಸಿ, 5.76 ಸಾವಿರ ನಗದು, ಪಿಸ್ತೂಲ್, 4 ಜೀವಂತ ಗುಂಡುಗಳು, ಖಾಲಿ ಚೆಕ್‍ಗಳು, ಬಾಂಡ್ ಪೇಪರ್‍ಗಳು, ಜಮೀನಿನ ದಾಖಲಾತಿಗಳು, ಜೊತೆಗೆ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

       ಆರೋಪಿಯು ಶ್ರೀಹರಿ ಎಂಟರ್‍ಪ್ರೈಸಸ್ ಎನ್ನುವ ಫೈನಾನ್ಸ್ ಹಾಗೂ ಮುನೇಶ್ವರ ಸೌಹಾರ್ದ ಸೊಸೈಟಿ ತೆರೆದು ಸಾರ್ವಜನಿಕರಿಗೆ ದುಬಾರಿ ಬಡ್ಡಿಗೆ ಸಾಲವನ್ನು ನೀಡುತ್ತಿದ್ದ. ಬಡ್ಡಿ ನೀಡದಿದ್ದರೆ, ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ.ಆರೋಪಿಯ ಬಳಿ ವಶಪಡಿಸಿಕೊಂಡಿರುವ ಪಿಸ್ತೂಲ್‍ಗೆ ಪರವಾನಗಿ ಪಡೆದಿದ್ದು ಅದನ್ನು ದುಬಾರಿ ಬಡ್ಡಿ ಕೊಡದವರನ್ನು ಬೆದರಿಸಲು ಬಳಸುತ್ತಿದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ

       ಆರೋಪಿಯ ಮನೆಯಲ್ಲಿ ಜಿಂಕೆಯ ಕೊಂಬುಗಳು ಸಿಕ್ಕಿರುವುದರಿಂದ ಅರಣ್ಯ ಇಲಾಖೆಯು ಪ್ರಕರಣ ದಾಖಲಿಸುವಂತೆ ವರದಿ ಕಳುಹಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ಅವರು ತಿಳಿಸಿದ್ದಾರೆ.

ಟ್ಯಾಂಕ್ ಮೇಲೆ ಕೊಲೆ ಬರಹ

       ಕುಡಿಯುವ ನೀರಿನ ಟ್ಯಾಂಕ್ ಮೇಲೆ ಕೊಲೆ ಮಾಡುವುದಾಗಿ ಬರೆದು ಆತಂಕ ಸೃಷ್ಠಿಸಿರುವ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಬಿಡದಿಯ ತಾಯಪ್ಪನದೊಡ್ಡಿಯಲ್ಲಿ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳು ಗ್ರಾಮ ಬಿಟ್ಟು ಪರಾರಿಯಾಗಿದ್ದಾರೆ ಬುಧವಾರ ತಡರಾತ್ರಿ ಗ್ರಾಮದ ನೀರಿನ ಟ್ಯಾಂಕ್ ಮೇಲೆ ಬಣ್ಣದಿಂದ ಬರೆದು ಕೊಲೆ ಬೆದರಿಕೆ ಹಾಕಿದ್ದಾರೆ.

        ಸೂರಿ, ನಂಜ, ದಿಲೀಪ, ಸತ್ಯ ಹಾಗೂ ಚಂದನ್ ಎಂಬುವರ ಹೆಸರು ಬರೆದು ತಲೆ ಕಡಿಯುವುದಾಗಿ ಬರೆದು ಬೆದರಿಕೆ ಹಾಕಿದ್ದಾರೆ.ಕಳೆದ ಮೂರು ತಿಂಗಳ ಹಿಂದೆ ನಂಜಪ್ಪ ಎಂಬುವರ ಮೇಲೆ ಮೂವರು ದುಷ್ಕರ್ಮಿಗಳಿಂದ ಕೊಲೆ ಯತ್ನ ನಡೆಸಿದ್ದರು.ಬೆಳಗ್ಗೆ ಟ್ಯಾಂಕ್ ಮೇಲಿನ ಕೊಲೆ ಬೆದರಿಕೆ ಬರಹ ನೋಡಿ ಹೆದರಿದ ಗ್ರಾಮಸ್ಥರು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link