ಹೂವಿನಹಡಗಲಿ :
ಕೇಂದ್ರ ಸರ್ಕಾರದಲ್ಲಿ ನಾಲ್ಕೂವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹುಸಿ ಭರವಸೆಗೆ ಉಪಚುನಾವಣೆಯಲ್ಲಿ ಜನತೆ ಉತ್ತರ ಕೊಡಲಿದ್ದಾರೆ ಎಂದು ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಅವರು ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಎಸ್.ಉಗ್ರಪ್ಪನವರ ಪರ ತಾಲೂಕಿನ ಮಹಾಜನದಹಳ್ಳಿಯಲ್ಲಿ ಮತಯಾಚನೆ ನಡೆಸಿ, ಮಾತನಾಡಿದರು.
ಬಿಜೆಪಿಯವರು ಅಧಿಕಾರಕ್ಕೆ ಬರುವ ಮುನ್ನ ಅನೇಕ ಭರವಸೆಗಳನ್ನು ನೀಡಿದರು. ಆದರೆ, ಯಾವುದೇ ಭರವಸೆಗಳು ಈಡೇರಿಲ್ಲ ಎಂದು ಹೇಳಿದ ಅವರು, ವಿ.ಎಸ್.ಉಗ್ರಪ್ಪನವರು ಒಬ್ಬ ಸಮರ್ಥ ಅಭ್ಯರ್ಥಿಯಾಗಿದ್ದು, ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ಬಳ್ಳಾರಿ ಜಿಲ್ಲೆಯ ಅಭಿವೃದ್ದಿಯನ್ನು ಕಂಡುಕೊಳ್ಳಬೇಕೆಂದು ಹೇಳಿದರು.
ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕ ಮತಯಾಚನೆ ಮಾಡುವುದರ ಮೂಲಕ ಮಾತನಾಡಿ, 2013ರಿಂದ 2018ರವರೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಎರಡನೇ ಬಾರಿಗೆ ಗೆಲ್ಲುವುದರ ಮೂಲಕ ದಾಖಲೆಯನ್ನು ನಿರ್ಮಿಸಿದ್ದೀರಿ. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಶ್ರೀರಾಮುಲುರವರು ರಾಜೀನಾಮೆ ನೀಡುವುದರ ಮೂಲಕ ಬಲವಂತದ ಚುನಾವಣೆಯನ್ನು ಹೇರಿದ್ದಾರೆ. ತಾವೆಲ್ಲರೂ ಕೂಡಾ ನನ್ನನ್ನು ಆಶೀರ್ವದಿಸಿದಂತೆ, ವಿ.ಎಸ್.ಉಗ್ರಪ್ಪನವರನ್ನು ಆಶೀರ್ವದಿಸುವುದರ ಮೂಲಕ ಮಾಜಿ ಸಿ.ಎಂ. ಸಿದ್ದರಾಮಯ್ಯನವರ ಕೈ ಬಲಪಡಿಸಬೇಕೆಂದು ಹೇಳಿದರು.
ನೀರಿನ ಭವಣೆ: ಸಿಇಓಗೆ ಸಚಿವರ ಪೋನ್ : ಮಹಾಜನದಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ಗ್ರಾಮದ ಜನತೆ ಕುಡಿಯುವ ನೀರಿನ ಭವಣೆಯಿಂದ ಬಳಲುತ್ತಿರುವುದನ್ನು ಮನಗಂಡ ಸಚಿವರು, ಪ್ರಚಾರದ ವೇದಿಕೆಯಿಂದಲೇ ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕರಾದ ರಾಜೇಂದ್ರರವರಿಗೆ ಪೋನಾಯಿಸಿ ಶೀಘ್ರದಲ್ಲಿಯೇ ಸದರಿ ಗ್ರಾಮ ಸೇರಿದಂತೆ ಕ್ಷೇತ್ರದ ನಾಲ್ಕಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಭವಣೆ ಕಂಡುಬಂದಿದ್ದು, ಪರಿಹರಿಸುವಂತೆ ಸೂಚನೆ ನೀಡಿದರು.
ಸಂದರ್ಭದಲ್ಲಿ ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಚಿಕ್ಕಬಳ್ಳಾಪುರ ಶಾಸಕರಾದ ವೆಂಕಟರಮಣಪ್ಪ, ಬ್ಲಾಕ್ ಅಧ್ಯಕ್ಷರುಗಳಾದ ಎಂ.ಪರಮೇಶ್ವರಪ್ಪ, ಐಗೋಳ್ ಚಿದಾನಂದ, ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್ಮೊಹಿದ್ದೀನ್, ಬಿ.ಹನುಮಂತಪ್ಪ, ಬಸವನಗೌಡ, ಎಲ್.ಚಂದ್ರನಾಯ್ಕ, ಕೆಂಚಮ್ಮನಹಳ್ಳಿ ಹಾಲಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿರೇಮಲ್ಲನಕೆರೆಯಲ್ಲಿ ನಡೆದಂತಹ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಸರಹಳ್ಳಿತಾಂಡದ ಕುಬೇರನಾಯ್ಕ ಹಾಗೂ ಮಲ್ಲನಕೇರಿ ಐನಹಳ್ಳಿ ಶಿವಾನಂದ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.








